ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಡಿಸಿಪಿ ವಾಹನದ ಮೇಲೆ ಲಾರಿ ಹತ್ತಿಸಿದ ಮರಳು ದಂಧೆಕೋರರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಅಕ್ಟೋಬರ್ 21; ಮಂಗಳೂರಿನಲ್ಲಿ ಮರಳು ಮಾಫಿಯಾ ಮತ್ತೆ ಹೆಡೆ ಎತ್ತಿದೆ. ಮರಳು ಲಾರಿಯನ್ನು ಹಿಡಿಯಲು ಹೋದ ಮಂಗಳೂರು ಡಿಸಿಪಿ ಕಾರಿನ ಮೇಲೆಯೇ ದಂಧೆಕೋರರು ಮರಳು ಲಾರಿ ಹತ್ತಿಸಲು ಯತ್ನಿಸಿದ ಘಟನೆ ಮಂಗಳೂರಿನಲ್ಲಿ ತಡರಾತ್ರಿ ನಡೆದಿದೆ. ಜಿಲ್ಲೆಯಲ್ಲಿ ಮರಳು ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿದ್ದು, ದಂಧೆಕೋರರಿಗೆ ಲಗಾಮು ಇಲ್ಲದಂತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮರಳು ಮಾಫಿಯಾ ಬಾಲ ಬಿಚ್ಚಿದೆ. ಸಿಆರ್ ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ಅವಧಿ ಮುಗಿದರೂ ಮರಳು ದಂಧೆಕೋರರು ಕಾನೂನಿನ ಭಯವೇ ಇಲ್ಲದೇ ಮರಳು ದಂಧೆ ಮಾಡುತ್ತಿದ್ದಾರೆ.

ಮಂಗಳೂರು, ಧರ್ಮಸ್ಥಳ ದ ನೇತ್ರಾವತಿ, ಉಳ್ಳಾಳ ಭಾಗದಲ್ಲಿ ದಂಧೆಕೋರರು ಅಕ್ಷರಶಃ ನದಿಯ ಒಡಲನ್ನೇ ಭಗೆದಿದ್ದು, ಕೋಟ್ಯಾಂತರ ರೂಪಾಯಿ ಮರಳು ದೋಚುತ್ತಿದ್ದಾರೆ. ಜನಪ್ರತಿನಿಧಿಗಳ ಕೃಪಾಕಟಾಕ್ಷದಿಂದ ಮರಳು ಮಾಫಿಯಾ ನಿರಾಂತಕವಾಗಿ ನಡೆಯುತ್ತಿದ್ದು, ಇದೀಗ ಮರಳು ಮಾಫಿಯಾ ವಿರುದ್ಧ ಮಂಗಳೂರು ಡಿಸಿಪಿ ಹರಿರಾಂ ಶಂಕರ್ ಏಕಾಂಗಿ ಹೋರಾಟಕ್ಕೆ ಧುಮುಕಿದ್ದಾರೆ.

 Illegal Sand Mining In Mangaluru Try To Attack On DCP Vehicle

ಕಳೆದ ತಡರಾತ್ರಿ ಹರಿರಾಂ ಶಂಕರ್ ಮಂಗಳೂರಿನ ಅಡ್ಯಾರ್‌ನಲ್ಲಿ ಮರಳು ಅಡ್ಡೆಯ ಮೇಲೆ ಏಕಾಂಗಿ ದಾಳಿ ಮಾಡಿದ್ದು, ಈ ವೇಳೆ ಮರಳು ತುಂಬಿದ ಲಾರಿ ತೆಗೆದುಕೊಂಡು ಹಲವರು ಪರಾರಿಯಾಗಿದ್ದಾರೆ.

ಈ ವೇಳೆ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆಗಿಳಿದ ಡಿಸಿಪಿ, ಲಾರಿಯನ್ನು ಸುಮಾರು 10 ಕಿ. ಮೀ. ಚೇಸ್ ಮಾಡಿದ್ದಾರೆ. ಈ ವೇಳೆ ಡಿಸಿಪಿ ಕಾರಿನ ಮೇಲೆಯೇ ಮರಳು ದಂಧೆಕೋರರು ಲಾರಿ ಹತ್ತಿಸಲು ಮುಂದಾಗಿದ್ದಾರೆ. ಆದರೂ ಛಲಬಿಡದ ಡಿಸಿಪಿ ಹರಿರಾಂ ಶಂಕರ್ ಮರಳು ದಂಧೆಕೋರರನ್ನು ಹಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು ನಗರ ಹೊರವಲಯದ ಅಡ್ಯಾರ್‌ನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಡಿಸಿಪಿ ಹರಿರಾಂ ಶಂಕರ್‌ಗೆ ತಡರಾತ್ರಿ ಮಾಹಿತಿ ಸಿಕ್ಕಿದ್ದು, ಕೂಡಲೇ ಡ್ರೈವರ್, ಗನ್ ಮ್ಯಾನ್ ಜೊತೆ ದಂಧೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದಾರೆ.

 Illegal Sand Mining In Mangaluru Try To Attack On DCP Vehicle

ಡಿಸಿಪಿಯನ್ನು ಕಂಡು ಮರಳುಗಾರಿಕೆ ಮಾಡುತ್ತಿದ್ದವರು ಪರಾರಿಯಾಗಿದ್ದಾರೆ‌‌‌. ಈ ವೇಳೆ ಮರಳು ತುಂಬಿದ ಲಾರಿಯನ್ನು ಡಿಸಿಪಿ ಅಡ್ಡ ಹಾಕಲು ಯತ್ನಿಸಿದ ವೇಳೆ ತಪ್ಪಿಸಿಕೊಂಡಿದ್ದಾರೆ. ಫರಂಗಿಪೇಟೆಯಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸರು ಚೆಕ್ ಪೋಸ್ಟ್ ಹಾಕಿದರೂ ಚೆಕ್ ಪೋಸ್ಟ್‌ಗೆ ಡಿಕ್ಕಿ ಹೊಡೆದು ಲಾರಿ ಪರಾರಿಯಾಗಿದೆ.

ಈ ವೇಳೆ ಕಾರ್ಯಾಚರಣೆಗಿಳಿದ ಡಿಸಿಪಿ ಲಾರಿಯನ್ನು ಅಡ್ಡಹಾಕಲು ಯತ್ನಿಸಿದಾಗ ಮರಳು ದಂಧೆಕೋರರು ಡಿಸಿಪಿ ವಾಹನದ ಮೇಲೆಯೇ ಲಾರಿ ಹತ್ತಿಸಲು ಮುಂದಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಡಿಸಿಪಿ ಕಾರಿನ ಹಿಂಭಾಗಕ್ಕೆ ಹಾನಿಯಾಗಿದೆ.

ಡಿಸಿಪಿ ಹರಿರಾಂ ಶಂಕರ್ ಈ ಹಿಂದೆಯೂ ಏಕಾಂಗಿಯಾಗಿ ದಾಳಿ ನಡೆಸಿದ್ದಾರೆ. ಈ ಹಿಂದೆ ತಲಪಾಡಿ ಚೆಕ್ ಪೋಸ್ಟ್ ಬಳಿ ಆಕ್ಟೀವಾದಲ್ಲಿ ಹೋಗಿ ಮರಳು ಲಾರಿಯನ್ನು ಅಡ್ಡ ಹಾಕಿದ್ದರು. ಉಳ್ಳಾಲದಲ್ಲಿ ರಿಕ್ಷಾವೊಂದರಲ್ಲಿ ಮರಳು ಅಡ್ಡೆಗೆ ತೆರಳಿ ಏಕಾಂಗಿ ದಾಳಿ ಮಾಡಿದ್ದರು.

ಈ ವೇಳೆ ಲಾರಿ, ಇಬ್ಬರು ದಂಧೆಕೋರರು ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮರಳು ಮಾಫಿಯಾ ಹಿಂದೆ ಅಧಿಕಾರಿವಲಯ ಕೂಡಾ ಶಾಮೀಲಾಗಿದ್ದು, ಡಿಸಿಪಿ ಹರಿರಾಂ ಶಂಕರ್ ರಹಸ್ಯವಾಗಿ ಕಾರ್ಯಾಚರಣೆ ಮಾಡಿದ್ದಾರೆ.

ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿದ್ದು, ದಂಧೆಕೋರರಿಗೆ ಕೆಲ ಬಿಜೆಪಿ ಶಾಸಕರೇ ನೆರವಾಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದೆ. ಮರಳು ಮಾಫಿಯಾದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ.ಗೆ ಜನರಿಂದ ನಿರಂತರ ದೂರುಗಳು ಬರುತ್ತಿವೆಯಾದರೂ ಆಳುವ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಸುಮ್ಮನಿರುವಂತೆ ಮಾಡಿದೆ.

English summary
Illegal sand mining in Mangaluru. Sand miners try to hit truck for DCP vehicle who try to stop illegal sand mining transporting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X