ಬಂಟ್ವಾಳ – ವಿಟ್ಲ ಕಲ್ಲು ತೂರಾಟ ಪ್ರಕರಣಕ್ಕೆ ಕಾರಣವೇನು?
ಮಂಗಳೂರು ಜೂನ್ 25: ಶಾಂತವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಶಾಂತಿ ಕದಡುವ ಪ್ರಯತ್ನಗಳು ನಡೆಯುತ್ತಿವೆಯೇ?. ಬಂಟ್ವಾಳ ಮತ್ತು ವಿಟ್ಲದಲ್ಲಿ ಇಂದು ಮುಂಜಾನೆ ಬಸ್ ಗಳ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಗಳು ಇಂತಹದೊಂದು ಅನುಮಾನ ಹುಟ್ಟುಹಾಕಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ ಹಾಗೂ ಅದನ್ನು ತಡೆಯುವ ಘಟನೆಗಳು ಮತ್ತೆ ಸುದ್ದಿಯಾಗುತ್ತಿವೆ. ಈ ಘಟನೆಗಳು ಇದೀಗ ಸಂಘರ್ಷಕ್ಕೆ ಎಡೆಮಾಡಿಕೊಡುವ ಅತಂಕ ಮೂಡಲಾರಂಭಿಸಿದೆ. ಇತ್ತೀಚೆಗೆ ಮಂಗಳೂರಿನ ಜೋಕಟ್ಟೆಯಲ್ಲಿ ಅಕ್ರಮ ಗೋ ಸಾಗಾಟ ಜಾಲವನ್ನು ಭೇದಿಸಿ 25ಕ್ಕೂ ಅಧಿಕ ಜಾನುವಾರುಗಳನ್ನು ವಶಪಡಿಸಿಕೊಂಡಿದ್ದರು.
ಬಸ್ ಗಳ ಮೇಲೆ ಕಲ್ಲು ತೂರಾಟ; 7 ಬಸ್ ಜಖಂ, ಮೂವರಿಗೆ ಗಾಯ
ಪೋಲೀಸರ ಕ್ರಮದ ಬಳಿಕ, ಜಿಲ್ಲಾ ನ್ಯಾಯಾಲಯ ಎಲ್ಲಾ ಜಾನುವಾರುಗಳನ್ನು ಮತ್ತೆ ಅದರ ಮಾಲೀಕರಿಗೆ ನೀಡುವಂತೆ ಆದೇಶಿಸಿತ್ತು. ನ್ಯಾಯಾಲಯದ ಈ ಆದೇಶವನ್ನು ಪಟಾಕಿ ಸಿಡಿಸಿ ಸಂಭ್ರಮಾಚರಣೆಯ ಮೂಲಕ ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು. ಇದು ಹಿಂದೂ ಸಂಘಟನೆಗಳನ್ನು ಕೆರಳಿಸಿತ್ತು.
ವೀಡಿಯೋದಲ್ಲಿ ಗೋರಕ್ಷಕರೇ ತಾಕತ್ತಿದ್ದರೆ ಜೋಕಟ್ಟೆಗೆ ಬನ್ನಿ ಎನ್ನುವ ಆಹ್ವಾನ ನೀಡಲಾಗಿತ್ತು. ಈ ಘಟನೆಯ ಬಳಿಕ ಹಿಂದೂ ಸಂಘಟನೆಗಳು ವಿಟ್ಲದಲ್ಲಿ ಅಕ್ರಮ ಗೋಸಾಗಾಟ ವಾಹನವನ್ನು ತಡೆಹಿಡಿದು, ಅದರ ಮುಂದೆ ಪಟಾಕಿ ಸಿಡಿಸಿ ಜೋಕಟ್ಟೆಯ ಘಟನೆಗೆ ಎಚ್ಚರಿಕೆಯನ್ನೂ ನೀಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು.
'ಗೋ ಕಳ್ಳರ ವಿರುದ್ಧ ರೌಡಿ ಶೀಟರ್ ಕೇಸು ದಾಖಲಿಸಿ ಗಡಿಪಾರು ಮಾಡಿ'
ಈ ನಡುವೆ ವಿಟ್ಲ- ಕೇರಳ ಗಡಿಭಾಗದಲ್ಲಿ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಅಡ್ಡಗಟ್ಟಿದ ತಂಡ ವಾಹನದಲ್ಲಿದ್ದವರಿಗೆ ಥಳಿಸಿ ವಿಟ್ಲ ಪೋಲೀಸ್ ಠಾಣೆಗೆ ಒಪ್ಪಿಸಿದ ಘಟನೆ ನಡೆದಿತ್ತು. ಈ ಘಟನೆ ಕೇರಳ ವ್ಯಾಪ್ತಿಯಲ್ಲಿ ನಡೆದ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಪ್ರಕರಣ ದಾಖಲಿಸಿ ಆರು ಮಂದಿ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದ್ದರು.
ಗೋವುಗಳ ಅಕ್ರಮ ಸಾಗಾಟ ತಡೆಯಲು ಮುಸ್ಲಿಮರಿಂದ ಹೊಸ ಸಂಘಟನೆ
ಈ ಬಂಧನವನ್ನು ಖಂಡಿಸಿ ಇದೀಗ ಹಿಂದೂ ಸಂಘಟನೆಗಳು ಪ್ರತಿಭಟನೆಯ ಹಾದಿ ಹಿಡಿದಿವೆ. ಇಂದು ಇದರ ಮುಂದಿನ ಭಾಗವಾಗಿ ವಿಟ್ಲದಲ್ಲಿ ಕೇರಳ ರಾಜ್ಯದ ಎರಡು ಸರ್ಕಾರಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ದಾಸಕೋಡಿ, ಗಡಿಯಾರ, ಕುದ್ರಬೆಟ್ಟು ಮತ್ತು ಪಾಣೆಮಂಗಳೂರಿನಲ್ಲಿ ಎರಡು ಸರ್ಕಾರಿ ಹಾಗೂ ಮೂರು ಖಾಸಗಿ ಬಸ್ ಗಳಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ, ಪುತ್ತೂರು ಹಾಗೂ ಬಂಟ್ವಾಳ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.