ಪೊಲೀಸರು ಶರತ್ ಕೊಲೆ ಆರೋಪಿಗಳನ್ನು ಬೆನ್ನತ್ತಿದ್ದ ರೋಚಕ ಕಥೆ
ಮಂಗಳೂರು, ಆಗಸ್ಟ್ 16: ಜೂನ್ 4ರಂದು ಬಿ.ಸಿ ರೋಡ್ ನಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಪೊಲೀಸ್ ತಂಡ ಮಂಗಳವಾರ ಬಂಟ್ವಾಳ ಮತ್ತು ಚಾಮರಾಜನಗರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮಂಗಳೂರು: ಆರೆಸ್ಸೆಸ್ ಶರತ್ ಮಡಿವಾಳ ಹತ್ಯೆ ಪ್ರಮುಖ ಆರೋಪಿಗಳ ಬಂಧನ
ಶರತ್ ಮಡಿವಾಳ ಕೊಲೆ ಪ್ರಕರಣವನ್ನು ಎನ್ಐಎಗೆ ಒಪ್ಪಿಸುವಂತೆ ಆಗ್ರಹಿಸಿ ಅನೇಕ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು. ಆದರೆ ಮಂಗಳೂರಿನ ಪೊಲೀಸರು ಮಾತ್ರ ಇದಕ್ಕೆ ಅವಕಾಶ ಕೊಡದೆ ಆರೋಪಿಗಳನ್ನು ಬಂಧಿಸಿದ್ದಾರೆ.
ಶರತ್ ಮಡಿವಾಳ ಹತ್ಯೆ, ಪಿಎಫ್ ಐ ಕಾರ್ಯಕರ್ತರ ಬಂಧನ
ಬಂಟ್ವಾಳ ಸಜೀಪ ಮುನ್ನೂರು ಹಳ್ಳಾಡಿ ಇಂದಿರಾನಗರ ನಿವಾಸಿ ಅಬ್ದುಲ್ ಶಾಫಿ ಮತ್ತು ಚಾಮರಾಜನಗರ ಗಾಳಿಪುರ ಗ್ರಾಮ ನಿವಾಸಿಗಳು ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಕೊಲೆಯಲ್ಲಿ ನೇರವಾಗಿ ಭಾಗಿಯಾಗದೆ ಕೊಲೆ ಕೃತ್ಯಕ್ಕೆ ಸಂಚು ರೂಪಿಸಿ ನಾನಾ ರೀತಿಯಲ್ಲಿ ಸಹಕರಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
ಆರೋಪಿಗಳ ವಿರುದ್ಧ ಹಲವು ಪ್ರಕರಣ
ಚಾಮರಾಜನಗರ ಗಾಳಿಪುರ ಗ್ರಾಮ ನಿವಾಸಿ ಕಲೀಮುಲ್ಲಾ ಪಿಎಫ್ಐ ಚಾಮರಾಜನಗರ ಅಧ್ಯಕ್ಷನಾಗಿದ್ದು ಈತನ ಮೇಲೆ ಚಾಮರಾಜನಗರ ಠಾಣೆಯಲ್ಲಿ ಕೋಮು ಪ್ರಚೋದನಾ ಭಾಷಣ ಪ್ರಕರಣವಿದೆ. ಬಂಟ್ವಾಳದ ಸಜೀಪ ಹಳ್ಳಾಡಿ ಇಂದಿರಾನಗರ ನಿವಾಸಿ ಅಬ್ದುಲ್ ಶಾಫಿ ಪಿಎಫ್ಐ ಕಾರ್ಯಕರ್ತನಾಗಿದ್ದು ಈತನ ವಿರುದ್ಧ ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಹಿಡಿದಿದ್ದು ಹೇಗೆ?
ಹಾಗಾದರೆ ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಹೇಗೆ? ಇದೇ ಒಂದು ರೋಚಕ ಕಥೆ. ಶರತ್ ಕೊಲೆ ಪ್ರಕರಣದಲ್ಲಿ ಐವತ್ತಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾಗ ಚಾಮರಾಜನಗರ ನಿವಾಸಿ ಕಲೀಮುಲ್ಲಾ ಶಾಮೀಲಾಗಿರುವುದು ಸಾಬೀತಾಗಿತ್ತು.
ಈ ಹಿನ್ನೆಲೆಯಲ್ಲಿ ಆತನನ್ನು ಚಾಮರಾಜನಗರದಲ್ಲಿ ವಶಕ್ಕೆ ಪಡೆದು ಪೊಲೀಸರು ಮತ್ತಷ್ಟು ವಿಚಾರಣೆ ನಡೆಸಿದಾಗ ಮೂವರು ಆರೋಪಿಗಳು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವುದು ತಿಳಿದು ಬಂದಿತ್ತು.
ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ತೆರಳಿದ ಪೊಲೀಸ್ ತಂಡ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಗೆ ಚಾಮರಾಜನಗರ ಪೊಲೀಸರೂ ಸಹಕರಿಸಿದ್ದಾರೆ.
ಆರೋಪಿಗಳಿಗೆ ಅಂತರಾಜ್ಯ ಸಂಪರ್ಕ
ಆರೋಪಿಗೆ ತಮಿಳುನಾಡಿನ ತಿರುಪುರ, ಕೊಯಮತ್ತೂರು, ಈರೋಡ್, ಸತ್ಯಮಂಗಲ ಪಿಎಫ್ಐ ಸಂಘಟನೆ ಜತೆ ನೇರ ಸಂಪರ್ಕವಿದೆ.
ರಾಜ್ಯದಲ್ಲಿ ಯಾವುದೇ ದುಷ್ಕೃತ್ಯ ನಡೆದಾಗ ತಮಿಳುನಾಡಿನ ಸಂಘಟನೆಗಳ ಜತೆ ಸಂಪರ್ಕ ಬೆಳೆಸಿ ಆರೋಪಿಗಳು ರಕ್ಷಣೆ ಪಡೆಯುತ್ತಿದ್ದ ಮಾಹಿತಿ ಬಹಿರಂಗವಾಗಿದೆ. ಇದು ಮಾತ್ರವಲ್ಲದೇ ಈತನಿಗೆ ಬೆಳ್ಳಾರೆಯ ಪಿಎಂಐ ಮುಖಂಡನ ಜತೆಯೂ ನಿಕಟ ಸಂಪರ್ಕವಿದೆ ಎಂಬ ಸ್ಫೋಟಕ ಮಾಹಿತಿ ಕೂಡ ಪೊಲೀಸರಿಗೆ ತಿಳಿದುಬಂದಿದೆ.
6 ತಂಡಗಳಿಂದ ಕಾರ್ಯಾಚರಣೆ
ಈ ಪ್ರಕರಣದ ಸಮಗ್ರ ತನಿಖೆಗೆ ಆರು ತಂಡಗಳನ್ನು ನೇಮಿಸಿ ಅಧಿಕಾರಿಗಳು ಸೇರಿದಂತೆ ಮೂರು ಮಂದಿ ಹಗಲಿರುಳು ಶ್ರಮ ವಹಿಸಿದ ಪರಿಣಾಮ ಆರೋಪಿಗಳ ಬಂಧನ ಸಾಧ್ಯವಾಗಿದೆ. ಈ ತಂಡ ಉಡುಪಿ, ಕಾರವಾರ, ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಯಲ್ಲೂ ಶೋಧ ನಡೆಸಿದೆ.
ಮಾತ್ರವಲ್ಲದೇ ನೆರೆಯ ಕೇರಳ, ಮಹಾರಾಷ್ಟ್ರ, ತಮಿಳುನಾಡು ಗಡಿ ಭಾಗಕ್ಕೆ ತೆರಳಿ ಆರೋಪಿಗಳ ಪತ್ತೆಗೆ ಪ್ರಯತ್ನಿಸಿದ್ದಾರೆ ಎಂದು ಐಜಿಪಿ ಹರಿಶೇಖರನ್ ತಿಳಿಸಿದ್ದಾರೆ.
ಅಶ್ರಫ್ ಹತ್ಯೆಗೆ ಪ್ರತೀಕಾರ?
ಪೊಲೀಸ್ ತನಿಖೆ ವೇಳೆ ಮೇಲ್ನೋಟಕ್ಕೆ ಇದೊಂದು ಕೋಮು ಸಂಘರ್ಷದ ಕೊಲೆ ಎಂಬುದು ಸ್ಪಷ್ಟವಾಗಿದೆ. ಶರತ್ ಮಾಡಿವಾಳ ಆರೆಸ್ಸೆಸ್ ಕಾರ್ಯಕರ್ತನಾಗಿದ್ದು ಸದಾ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ. ಹೋರಾಟಗಳಲ್ಲೂ ಮುಂಚೂಣಿಯಲ್ಲಿದ್ದ. ಇದಲ್ಲದೆ ಜೂನ್ 21 ರಂದು ಕೊಲೆಯಾದ ಅಶ್ರಫ್ ಕಲಾಯಿ ಕೊಲೆಗೆ ಪ್ರತಿಯಾಗಿ ಈ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರ ಆಪ್ತ ಮೂಲಗಳು ತಿಳಿಸಿವೆ.
ಪೊಲೀಸ್ ತಂಡಕ್ಕೆ ಸಂಸದರಿಂದ ಅಭಿನಂದನೆ
ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಹಂತಕರನ್ನು ಬಂಧಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ತಂಡವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅಭಿನಂದಿಸಿದ್ದಾರೆ. "ಶರತ್ ಹಂತಕರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿರುವುದು ಜಿಲ್ಲೆಯ ಜನತೆಗೆ ಕೊಂಚ ನೆಮ್ಮದಿಯನ್ನು ತಂದಿದೆ. ಹತ್ಯೆಯ ಹಿನ್ನೆಲೆ ಬಗ್ಗೆ ಸಮಗ್ರ ತನಿಖೆಯಾಗಬೇಕು. ಪ್ರಕರಣದಲ್ಲಿ ಶಾಮೀಲಾದ ಎಲ್ಲ ಹಂತಕರನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು," ಎಂದು ಅವರು ಆಗ್ರಹಿಸಿದ್ದಾರೆ.
ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಗುರಿಯಾಗಿಸಿ ಹತ್ಯೆ ನಡೆಸುವ ವ್ಯವಸ್ಥಿತ ಕೃತ್ಯ ಕರಾವಳಿಯಲ್ಲಿ ನಡೆಯುತ್ತಿದೆ. ದೇಶದ್ರೋಹಿ ಸಂಘಟನೆಗಳು ಇದಕ್ಕೆ ಬೆಂಬಲ ನೀಡುತ್ತಿರುವುದು ಸ್ಪಷ್ಟವಾಗಿದೆ ಎಂದರು.
ಪ್ರಮುಖ ಆರೋಪಿ ಪರಾರಿ
ಇನ್ನು ಶರತ್ ಮಡಿವಾಳ ಹತ್ಯೆಯ ಮತ್ತೋರ್ವ ಪ್ರಮುಖ ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ ಕೊಲೆ ಮಾಡುವ ಮುನ್ನ ಜೀಪಲ್ಲಿ ಬೆಂಗಳೂರು ಪಿಎಫ್ಐ ಕಾರ್ಯಕರ್ತರು ಮತ್ತು ಮಂಗಳೂರು ಪಿಎಫ್ಐ ಕಾರ್ಯಕರ್ತರು ಸಭೆಯನ್ನು ನಡೆಸಿದ್ದರು ಎನ್ನುವ ಮಾಹಿತಿ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೆಲವರು ಪೊಲೀಸ್ ವಶದಲ್ಲಿದ್ದು, ಇನ್ನು ಹತ್ತಕ್ಕೂ ಹೆಚ್ಚು ಆರೋಪಿಗಳ ಬಂಧನ ಬಾಕಿ ಇದೆ ಎನ್ನಲಾಗಿದೆ.