ಟಾರ್ಗೆಟ್ ಗುಂಪಿನ ಇಲ್ಯಾಸ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆಗಿದ್ದು ಹೇಗೆ?
ಮಂಗಳೂರು, ನವೆಂಬರ್ 23: ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರು ಉಳ್ಳಾಲದ ನಟೋರಿಯಸ್ ಟಾರ್ಗೆಟ್ ಗ್ಯಾಂಗ್ ನ ಇಮ್ರಾನ್ ಹಾಗೂ ಇಲ್ಯಾಸ್ ನನ್ನು ಬಂಧಿಸಿದ್ದಾರೆ. ಈ ಇಬ್ಬರು ಪಾತಕಿಗಳ ಮೇಲೆ ರಾಜ್ಯದ ನಾನಾ ಭಾಗಗಳಲ್ಲಿ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ.
ಮಂಗಳೂರು : ಕುಖ್ಯಾತ ಗ್ಯಾಂಗ್ ನ ಇಬ್ಬರು ರೌಡಿಗಳ ಬಂಧನ
ಮಂಗಳೂರು ಹೊರವಲಯದ ಉಳ್ಳಾಲ, ಬಜ್ಪೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಇಬ್ಬರ ಮೇಲೆ ಒಟ್ಟು ಮೂರು ವಾರಂಟ್ ಸೇರಿದಂತೆ 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಇಲ್ಯಾಸ್ ಈ ಹಿಂದೆ ಉಳ್ಳಾಲ ಯುವ ಕಾಂಗ್ರೆಸ್ ಉಪಾಧ್ಯಕ್ಷನಾಗಿದ್ದ ಎಂಬುದು ಗಮನಾರ್ಹ. ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರನ್ನು ಬ್ಲಾಕ್ ಮೇಲ್ ಮಾಡಿದ ಇಲ್ಯಾಸ್ ಯುವ ಕಾಂಗ್ರೆಸ್ ನ ಉಪಾಧ್ಯಕ್ಷ ಪಟ್ಟ ಗಿಟ್ಟಿಸಿಕೊಂಡಿದ್ದನೇ ಎಂಬ ಗುಮಾನಿ ಮೂಡಲಾರಂಭಿಸಿದೆ.
ಆದರೆ, ಈತ ಜಿಲ್ಲಾ ಯುವ ಕಾಂಗ್ರೆಸ್ ಅದ್ಯಕ್ಷ ಮಿಥುನ್ ರೈ ಖಾಸಾ ಅಭ್ಯರ್ಥಿ ಎನ್ನಲಾಗುತ್ತಿದೆ. ಯುವತಿಯರ ಮೂಲಕ ಶ್ರೀಮಂತರನ್ನು ಖೆಡ್ಡಾಕ್ಕೆ ಬೀಳಿಸಿ, ಬ್ಲಾಕ್ ಮೇಲ್ ಮಾಡಿ ಕೋಟ್ಯಂತರ ರುಪಾಯಿ ದೋಚಿದ ಖತರ್ನಾಕ್ ಪಾತಕಿ ಉಳ್ಳಾಲದ ನಟೋರಿಯಸ್ ಟಾರ್ಗೆಟ್ ಗ್ರೂಪ್ ನ ಮುಖಂಡ ಇಲ್ಯಾಸ್.
ಗಂಭೀರ ಆರೋಪಗಳಿದ್ದರೂ ಇಲ್ಯಾಸ್ ನನ್ನು ಯು.ಟಿ. ಖಾದರ್ ಉಳ್ಳಾಲ ಬ್ಲಾಕ್ ನ ಯುವ ಕಾಂಗ್ರೆಸ್ ನ ಉಪಾಧ್ಯಕ್ಷ ಸ್ಥಾನ ದಲ್ಲಿ ಸಹಿಸಿಕೊಂಡಿದ್ದಾರೂ ಹೇಗೆ ಎಂಬ ಪ್ರಶ್ನೆ ಕ್ಷೇತ್ರದ ಜನರನ್ನು ಕಾಡುತ್ತಿದೆ. ಆದರೆ ಕಳೆದ ತಿಂಗಳು ಇಲ್ಯಾಸ್ ನನ್ನು ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ.
ಕಳೆದ ತಿಂಗಳು ಮುಕ್ಕಚ್ಚೇರಿಯಲ್ಲಿ ನಡೆದ ಝುಬೈರ್ ಎಂಬವರ ಕೊಲೆಯಲ್ಲೂ ಟಾರ್ಗೆಟ್ ಹೆಸರು ತಳುಕು ಹಾಕಿದಾಗ ಇಲ್ಯಾಸ್ ನನ್ನು ಯುವ ಕಾಂಗ್ರೆಸ್ ಸ್ಥಾನದಿಂದ ಕಿತ್ತು ಎಸೆಯಲಾಗಿತ್ತು.