ಕೊಳಚೆ ನೀರು ನುಗ್ಗುವುದು ತಡೆಯಲು ಮನೆ 3 ಅಡಿ ಮೇಲೆತ್ತಿದ ಮಾಲೀಕ!

ಮಂಗಳೂರು, ಜನವರಿ 09; ಅವೈಜ್ಞಾನಿಕ ಕಾಮಗಾರಿಯಿಂದ ಮಳೆಗಾಲದಲ್ಲಿ ಮನೆ ಸೇರುತ್ತಿದ್ದ ಚರಂಡಿ ನೀರನ್ನು ತಪ್ಪಿಸಲು ಮಂಗಳೂರಿನ ವ್ಯಕ್ತಿಯೋರ್ವರು ಮನೆಯನ್ನೇ ಮೂರಡಿ ಮೇಲಕ್ಕೆತ್ತಿದ್ದಾರೆ. ನಗರದ ತಗ್ಗುಪ್ರದೇಶಗಳಲ್ಲಿ ಒಂದಾದ ಮಾಲೆಮಾರ್‌ನ ಸುರೇಶ್ ಉಡುಪ ಎಂಬುವವರು ಪ್ರತಿವರ್ಷ ಮಳೆಗಾಲದಲ್ಲಿ ಮನೆಯೊಳಗೆ ನುಗ್ಗುವ ಚರಂಡಿ ನೀರಿನ ಕಿರಿ ಕಿರಿಯನ್ನು ಸಹಿಸಲಾರದೇ ಈಗ ಮನೆಯನ್ನೇ ಮೂರಡಿ ಮೇಲಕ್ಕೆತ್ತಿದ್ದಾರೆ.

ಸಾಮಾನ್ಯವಾಗಿ ಭಾರೀ ಗಾತ್ರದ ವಾಹನಗಳನ್ನು ಜಾಕ್​​ ಕೊಟ್ಟು ಮೇಲೆತ್ತುವುದನ್ನು ನಾವು ನೋಡುತ್ತಿರುತ್ತೇವೆ‌. ಆದರೆ, ಇಲ್ಲಿ ಮನೆಯನ್ನೇ ಜಾಕ್​ ಕೊಟ್ಟು ಮೂರಡಿ ಲಿಫ್ಟ್ ಮಾಡಲಾಗಿದೆ. ಇಂತಹ ಸಾಹಸ ಕಾರ್ಯಕ್ಕೆ ವರ್ಷಾನುಗಟ್ಟಲೇ ಸಂಕಷ್ಟದ ಗೋಳು ತುಂಬಿರುವುದೇ ಕಾರಣ ಎಂದರೆ ನೀವು ನಂಬಲೇಬೇಕು.

ಮಳೆಗಾಲಕ್ಕಿಂತ ಮೊದಲು ರಾಜಕಾಲುವೆಯಿಂದ ಹೂಳೆತ್ತುವ ಕಾರ್ಯ ಸಮರ್ಪಕವಾಗಿ ನಡೆಯದ ಪರಿಣಾಮ ಮಂಗಳೂರು ನಗರದ ಕೊಟ್ಟಾರ ಚೌಕಿ, ಮಾಲೆಮಾರ್, ಮಾಲಾಡಿ ಪ್ರದೇಶಗಳಲ್ಲಿ ಭಾರೀ ಮಳೆಗೆ ಕೃತಕ ನೆರೆ ಬಾಧಿಸುವುದು ಸರ್ವೇ ಸಾಮಾನ್ಯವಾಗಿದೆ.

ಈ ಸಂದರ್ಭ ಅಲ್ಲಿನ ನಿವಾಸಿಗಳ ಪಾಡು ದೇವರಿಗೆ ಪ್ರೀತಿ‌. ಈ ಬಗ್ಗೆ ಸಾಕಷ್ಟು ಬಾರಿ ಜನಪ್ರತಿನಿಧಿಗಳ ಬಳಿಗೆ ಸಮಸ್ಯೆಕೊಂಡು ಹೋದರೂ ಸದ್ಯದ ಪರಿಸ್ಥಿತಿಗೆ ಪರಿಹಾರ ದೊರಕುತ್ತದೆಯೇ ವಿನಃ ಶಾಶ್ವತ ಪರಿಹಾರ ಮರೀಚಿಕೆಯಾಗಿತ್ತು. ಈ ಎಲ್ಲಾ ಸಂಕಷ್ಟದಿಂದ ಬೇಸತ್ತು ಮಾಲೇಮಾರ್ ಸುರೇಶ್ ಉಡುಪ ಎಂಬುವರು ತಮ್ಮ ಮನೆಯನ್ನೇ 3 ಅಡಿ ಮೇಲೆತ್ತುವ ತಂತ್ರಜ್ಞಾನದ ಮೊರೆಹೋಗಿದ್ದಾರೆ.

ಮೊದಲ ಹಂತದ ಕಾರ್ಯಾಚರಣೆ

ಮೊದಲ ಹಂತದ ಕಾರ್ಯಾಚರಣೆ

ಮೊದಲ ಹಂತದಲ್ಲಿ ಮನೆಯ ಗೋಡೆಯ ಫ್ಲಿಂತ್ ಪಿಲ್ಲರ್​ನ ಅಡಿಭಾಗದಲ್ಲಿ 2 ಅಡಿ ಆಳವನ್ನು ಅಗೆಯಲಾಗಿದೆ. ಅಲ್ಲಿ 7 ಇಂಚು ಬೆಡ್, ಕಬ್ಬಿಣದ ರಾಡ್ ಅಳವಡಿಕೆ ಮಾಡಲಾಗಿದೆ. ಆ ಬಳಿಕ ಮನೆಯ ಸುತ್ತಲೂ 200ರಷ್ಟು ಜಾಕ್ ಅಳವಡಿಸಲಾಗಿದೆ. ಈ ಜಾಕ್ ಅನ್ನು ತಿರುಗಿಸಿದಾಗ ಮನೆ ಸೀಳು, ಕ್ರ್ಯಾಕ್​ಗಳಾಗದೆ ಎತ್ತರಕ್ಕೆ ಹೋಗುತ್ತದೆ‌. ಬಳಿಕ ಒಂದೊಂದೇ ಜಾಕ್​ಗಳನ್ನು ತೆಗೆದು ತಳಪಾಯಕ್ಕೆ ಕಬ್ಬಿಣ, ಸಿಮೆಂಟು ಅಳವಡಿಸಿ ಕೆಂಪುಕಲ್ಲಿನಿಂದ ಭದ್ರವಾಗಿ ಕಟ್ಟಲಾಗಿದೆ. ಈ ವೇಳೆ ಗೋಡೆಯ ಸುತ್ತಲೂ ಯಾವುದೇ ಅಡೆತಡೆಗಳಿಲ್ಲದಂತೆ ನೋಡಿಕೊಳ್ಳಲಾಗಿದೆ.

ಮಳೆ ನೀರಿನ ಅವಾಂತರಗಳು

ಮಳೆ ನೀರಿನ ಅವಾಂತರಗಳು

ಮನೆಯನ್ನು ಲಿಫ್ಟ್ ಮಾಡುತ್ತಿರುವ ಸುರೇಶ್ ಉಡುಪರು ಮಾಲೇಮಾರ್​ನಲ್ಲಿ ಮನೆಕಟ್ಟಿ ವಾಸಿಸಲು ತೊಡಗಿ ಹತ್ತಿಪ್ಪತ್ತು ವರ್ಷಗಳೇ ಕಳೆದಿವೆಯಂತೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೃತಕ ನೆರೆಯ ತೊಂದರೆ ಇವರನ್ನು ಹೈರಾಣು ಮಾಡಲು‌ ಆರಂಭಿಸಿದೆ‌. ಅದರಲ್ಲೂ ಸೆಪ್ಟೆಂಬರ್ ನಂತರದ ಮಳೆಯಿಂದ ಕೃತಕ ನೆರೆಯ ತೊಂದರೆ ಕಟ್ಟಿಟ್ಟ ಬುತ್ತಿಯಂತೆ. ಈ ಸಂದರ್ಭ ಮನೆಯೊಳಗೆ ನುಗ್ಗುವ ನೀರಿನಿಂದ ಆಗುವ ಅವಾಂತರ ಅಷ್ಟಿಷ್ಟಲ್ಲ. ಒಳಚರಂಡಿ, ಕೊಳಚೆ ನೀರು ಮನೆಯೊಳಗೆ ನುಗುತ್ತದೆ. ಇದನ್ನು ಸ್ವಚ್ಛಗೊಳಿಸುವುದೇ ನಿತ್ಯ ಕರ್ಮವಾಗುತ್ತದೆ ಎನ್ನುತ್ತಾರೆ.

ಹಲವಾರು ವಸ್ತುಗಳು ನೀರಿನಿಂದ ಹಾನಿ

ಹಲವಾರು ವಸ್ತುಗಳು ನೀರಿನಿಂದ ಹಾನಿ

ಸುರೇಶ್ ಉಡುಪರು ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತರಾದವರು. ಅವರ ಪತ್ನಿ ಗೃಹಿಣಿ.. ಮಗಳು ಮದುವೆಯಾಗಿ ನಾರ್ವೆಯಲ್ಲಿದ್ದಾರೆ. ಇದೀಗ ಮನೆಯಲ್ಲಿ ಹಿರಿಯ ನಾಗರಿಕರಾದ ಇವರಿಬ್ಬರೇ ಇರೋದು. ಕೃತಕ ನೆರೆನೀರು ಮನೆಯೊಳಗೆ ನುಗ್ಗಿದ ಸಂದರ್ಭ ಎಲ್ಲವನ್ನೂ ಇವರಿಬ್ಬರೇ ಸ್ವಚ್ಛಗೊಳಿಸಬೇಕು. ಈ‌ ಸಂದರ್ಭ ಯಾವುದೇ ಇಲೆಕ್ಟ್ರಿಕ್ ಉಪಕರಣಗಳನ್ನು ಉಪಯೋಗಿಸುವುದು ಅಸಾಧ್ಯ. ಕೆಲವೊಂದು ಬಾರಿ ಬಟ್ಟೆಬರೆಗಳು, ಮಗಳ ಮಾರ್ಕ್ಸ್ ಕಾರ್ಡ್​ಗಳು ಹಾಳಾಗಿದ್ದೂ ಇದೆಯಂತೆ. ಈ ಎಲ್ಲಾ ಅವಾಂತರಗಳಿಂದ ಬೇಸತ್ತು ಮನೆ ಲಿಫ್ಟಿಂಗ್​ ಕಾರ್ಯ ಮಾಡಲಾಗಿದೆ.

ಮನೆಯ ಪೈಂಟ್ ಸಹ ಹಾಳಾಗಿಲ್ಲ

ಮನೆಯ ಪೈಂಟ್ ಸಹ ಹಾಳಾಗಿಲ್ಲ

"ಮನೆಲಿಫ್ಟ್ ಮಾಡುವಾಗ ಮನೆಗೆ ಯಾವುದೇ ತೊಂದರೆ, ಕ್ರ್ಯಾಕ್ ಆಗುವುದಿಲ್ಲ. ಗೋಡೆಯ ಪೈಯಿಂಟಿಂಗ್ ಕೂಡಾ ಯಾವುದೇ ರೀತಿಯಲ್ಲಿ ಹಾಳಾಗುವುದಿಲ್ಲ. ಅನಾಮತ್ತಾಗಿ ಮನೆಯನ್ನು ಮೇಲೆತ್ತುವ ಸಂದರ್ಭ ಮನೆಯೊಳಗಿನ ಕಪಾಟು, ಬೀರು, ಇನ್ನಿತರ ಸಾಮಗ್ರಿಗಳಿಗೂ ಯಾವುದೇ ತೊಂದರೆಗಳಾಗುತ್ತಿಲ್ಲ‌. ಈಗಲೂ ಮನೆಯೊಳಗಿನ ಕಪಾಟಿನೊಳಗೆ ಉಪ್ಪಿನಕಾಯಿ ಭರಣಿಗಳಿವೆ. ಫ್ರಿಡ್ಜ್, ವಾಷಿಂಗ್ ಮೆಷಿನ್​ಗಳಿವೆ. ಇದಾವುದೂ ಖಂಡಿತಾ ಹಾಳಾಗುವುದಿಲ್ಲ" ಎಂದು ಮನೆಯ ಮಾಲೀಕ ಸುರೇಶ್ ಉಡುಪರು ಭರವಸೆಯಿಂದ ಹೇಳಿದ್ದಾರೆ.

12 ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾರೆ

12 ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾರೆ

ಈ ಮನೆಯನ್ನು ಮೇಲೆತ್ತುವ ಕಾರ್ಯವನ್ನು ಉತ್ತರಪ್ರದೇಶ ಮೂಲದ ರಾಹುಲ್ ಚೌಹಾನ್​ ಎಂಬುವರ ಹೆಚ್ ಬಿಎಸ್ಎಲ್ ಹೌಸ್ ಲಿಫ್ಟಿಂಗ್ ಸಂಸ್ಥೆ ಮಾಡುತ್ತಿದೆ. ಹರಿಯಾಣ ಮೂಲದ 12 ಕಾರ್ಮಿಕರು ನಾಜೂಕಿನಿಂದ ಹೌಸ್ ಲಿಫ್ಟಿಂಗ್ ಕಾರ್ಯವನ್ನು ಮಾಡುತ್ತಿದ್ದಾರೆ‌. 1000 ಚದರ್​ ಅಡಿ ಮನೆಯನ್ನು ಒಂದು ತಿಂಗಳೊಳಗೆ ಸಂಪೂರ್ಣ ಲಿಫ್ಟ್ ಮಾಡಲಾಗುತ್ತದೆಯಂತೆ. ಒಂದು ಚದರ್​ ಅಡಿಗೆ 250 ರೂ. ಶುಲ್ಕ ವಿಧಿಸಲಾಗುತ್ತದೆಯಂತೆ. ಅಲ್ಲದೆ, ಮನೆಗೆ ಯಾವುದೇ ತೊಂದರೆಯಾಗದಂತೆ ಲಿಫ್ಟ್ ಮಾಡಿ ಕೊಡಲಾಗುತ್ತದೆ ಎಂದು ಕರಾರು ಮಾಡಿ ಸಹಿ ಹಾಕಲಾಗುತ್ತದೆ ಎಂದು ಸಂಸ್ಥೆಯ ಮಾಲತಿ ಪ್ರಸಾದ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+