Mangaluru blast case: ಸ್ಪೋಟ ನಡೆದ ಸ್ಥಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ
ಮಂಗಳೂರು ನವೆಂಬರ್ 23: ಕರಾವಳಿಯಲ್ಲಿ ಆತಂಕ ಸೃಷ್ಟಿಸಿರುವ ಮಂಗಳೂರಿನ ಆಟೋ ಸ್ಪೋಟಗೊಂಡ ಸ್ಥಳಕ್ಕೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಡಿಜಿಪಿ ಪ್ರವೀಣ್ ಸೂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಪೋಟಗೊಂಡ ಆಟೋವನ್ನು ಘಟನಾ ಸ್ಥಳದಲ್ಲೇ ಇರಿಸಲಾಗಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಆಟೋ ವೀಕ್ಷಿಸಿ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ.
Mangaluru Blast Case: ಮೈಸೂರಿನಲ್ಲಿ ಶಂಕಿತ ಉಗ್ರ ಶಾರಿಕ್ ಸಹಚರನ ಬಂಧನ
ನವೆಂಬರ್ 19ರಂದು ಸಂಜೆ ಶಂಕಿತ ಭಯೋತ್ಪಾದಕ ಶಾರೀಕ್ ಪಂಪ್ ವೆಲ್ ಕಡೆಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆತನ ಬಳಿಯಿದ್ದ ಕುಕ್ಕರ್ ಬಾಂಬ್ ಗರೋಡಿ ಬಳಿಯಲ್ಲಿ ಸ್ಪೋಟಗೊಂಡಿತ್ತು. ಆ ಬಳಿಕ ಆಟೋದಲ್ಲಿ ಸ್ಫೋಟ ನಡೆದಿರುವ ಸ್ಥಳವನ್ನು ಬ್ಯಾರಿಕೇಡ್ ಹಾಕಿ ಯಾರೂ ಅಲ್ಲಿ ಓಡಾಟ ನಡೆಸದಂತೆ ರಸ್ತೆಯಿಂದ ಪ್ರತ್ಯೇಕಿಸಲಾಗಿದೆ. ಸ್ಥಳದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಸ್ಪೋಟ ನಡೆದ ಸ್ಥಳ ಪರಿಶೀಲನೆ ಬಳಿಕ ಸಚಿವ ಆರಗ ಜ್ಞಾನೇಂದ್ರ ಹಾಗೂ ಪ್ರವೀಣ್ ಸೂದ್ ನಗರದ ಕಂಕನಾಡಿ ಆಸ್ಪತ್ರೆಗೆ ಭೇಟಿ ನೀಡಿ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಹಾಗೂ ಆರೋಪಿ ಶಾರೀಕ್ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್, ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಹಾಗೂ ಶಾಸಕ ಡಾ.ವೈ.ಭರತ್ ಶೆಟ್ಟಿ ಜೊತೆಗಿದ್ದರು.
ಮಂಗಳೂರು ಆಟೋ ಸ್ಫೋಟ: ವಿಡಿಯೋ ನೋಡಿ ಬಾಂಬ್ ತಯಾರಿಕೆ ಕಲಿತ ಆರೋಪಿ
ದೊಡ್ಡ ಮಟ್ಟದಲ್ಲಿ ಕೃತ್ಯ ನಡೆಸಲು ಶಾರಿಕ್ ಯೋಜನೆ ರೂಪಿಸಿದ್ದು, ಉಗ್ರರ ಲಿಂಕ್ ಇರುವ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ ಅನುಮಾನ ಮೂಡಿದೆ ಬಂದಿದೆ. ಶಾರಿಕ್ನೊಂದಿಗೆ ಮತ್ತಷ್ಟು ಯುವಕರು ಇರುವ ಸಾಧ್ಯತೆ ಇದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ಚುರುಕುಗೊಂಡಿದೆ. ಇನ್ನು ಆರೋಪಿ ಶಾರಿಕ್ ಕೆಲ ಗುಂಪುಗಳ ಮೆಸೇಜ್ಗಳಲ್ಲಿ ಬಂದ ವಿಡಿಯೋ ನೋಡಿ ಬಾಂಬ್ ತಯಾರಿಸುವುದನ್ನು ಕಲಿತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಶಂಕಿತನಾಗಿರುವ ಮೊಹಮ್ಮದ್ ಶಾರಿಕ್ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿಗಳಾಗಿದ್ದು, ಪ್ರೇಮ್ ರಾಜ್ ಎಂಬ ಹೆಸರಿನಲ್ಲಿ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ಆತನ ಮೈಸೂರಿನ ಮನೆಯ ಮೇಲೂ ಪೊಲೀಸರು ದಾಳಿ ನಡೆಸಿದ್ದು, ಆತನ ಮನೆಯಲ್ಲಿ ಪತ್ತೆಯಾದ ಹುಬ್ಬಳ್ಳಿ ವಿಳಾಸದ ನಕಲಿ ಆಧಾರ್ ಕಾರ್ಡ್, ಸರ್ಕಿಟ್ ಬೋರ್ಡ್, ಬೋಲ್ಟ್, ಬ್ಯಾಟರಿ, ಮೊಬೈಲ್, ವುಡನ್ ಪೌಡರ್, ಅಲ್ಯೂಮಿನಿಯಂ, ಮಲ್ಟಿ ಮೀಟರ್, ವೈರ್, ಪ್ರೆಶರ್ ಕುಕ್ಕರ್ ಸೇರಿದಂತೆ ಹಲವು ಸ್ಫೋಟಕ ವಸ್ತುಗಳು, ಒಂದು ಮೊಬೈಲ್, ಎರಡು ನಕಲಿ ಆಧಾರ್ ಕಾರ್ಡ್, ಒಂದು ನಕಲಿ ಪ್ಯಾನ್ ಕಾರ್ಡ್, ಒಂದು ಫಿನೋ ಡೆಬಿಟ್ ಕಾರ್ಡ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಈ ಹಿಂದೆ 2020ರ ಡಿಸೆಂಬರ್ನಲ್ಲಿ ಮಂಗಳೂರಿನ ಗೋಡೆ ಮತ್ತು ಕಟ್ಟಡದ ಮೇಲೆ ಭಯೋತ್ಪಾದನಾ ಪರ ಬರಹ ಬರೆದಿದ್ದ ಪ್ರಕರಣದಲ್ಲಿ ಶಾರಿಕ್ನನ್ನು ಬಂಧಿಸಲಾಗಿತ್ತು.