ಹಿಜಾಬ್ ವಿವಾದ: 14 ಹೊಸ ಕಾಲೇಜು ಸ್ಥಾಪನೆಗೆ ಅರ್ಜಿಹಾಕಿದ ಮುಸ್ಲಿಂ ಶಿಕ್ಷಣ ಸಂಸ್ಥೆಗಳು
ಮಂಗಳೂರು,ಜುಲೈ 20: ಕರಾವಳಿಯಲ್ಲಿ ಹಿಜಾಬ್ ವಿವಾದ ಮತ್ತಷ್ಟು ಕಿಚ್ಚು ಪಡೆದಿದೆ. ಸಿಎಫ್ಐ ಗರ್ಲ್ಸ್ ಕಾನ್ಫರೆನ್ಸ್ ಹೆಸರಿನಲ್ಲಿ ಹಿಜಾಬ್ ಕುರಿತ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರನ್ನು ಸಂಘಟಿಸಿದ್ದಾರೆ. ಇತ್ತ ಮುಸ್ಲಿಮ್ ಸಮುದಾಯ ಪಿಯು ಕಾಲೇಜು ಸ್ಥಾಪನೆಗೆ ಮುಂದಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಯು ಕಾಲೇಜು ಆರಂಭಗೊಳಿಸಲು ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಆಸಕ್ತಿ ತೋರಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13 ಪಿಯು ಕಾಲೇಜುಗಳನ್ನು ತೆರೆಯಲು ಮುಸ್ಲಿಂ ಶಿಕ್ಷಣ ಸಂಸ್ಥೆಗಳು ರಾಜ್ಯ ಸರ್ಕಾರದ ಬಳಿ ಅನುಮತಿಯನ್ನು ಕೋರಿದೆ.
ಹೊಸ ಕಾಲೇಜು ತೆರೆಯಲು 13 ಮುಸ್ಲಿಂ ಶಿಕ್ಷಣ ಸಂಸ್ಥೆಗಳಿಂದ ಪಿಯು ಬೋರ್ಡ್ಗೆ ಅರ್ಜಿ ಹಾಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಬಂದ 14 ಅರ್ಜಿಗಳ ಪೈಕಿ 13 ಮುಸ್ಲಿಂ ಶಿಕ್ಷಣ ಸಂಸ್ಥೆಗಳದ್ದಾಗಿದ್ದು, 14 ಅರ್ಜಿಗಳ ಪೈಕಿ 2 ಕಾಲೇಜಿಗಷ್ಟೇ ಪಿಯು ಕಾಲೇಜು ಸ್ಥಾಪಿಸಲು ಅನುಮತಿ ನೀಡಲಾಗಿದೆ. ಒಂದು ಮುಸ್ಲಿಂ ಮತ್ತು ಒಂದು ಇತರೆ ಆಡಳಿತದ ಕಾಲೇಜಿಗೆ ಅನುಮತಿ ನೀಡಲಾಗಿದೆ. ಗುರುಪುರದ ಮುಸ್ಲಿಂ ಮತ್ತು ಸುಬ್ರಹ್ಮಣ್ಯದ ಒಂದು ಮುಸ್ಲಿಮೇತರ ಆಡಳಿತದ ಕಾಲೇಜಿಗೆ ಅನುಮತಿ ನೀಡಲಾಗಿದ್ದು, ಉಳಿದ 12 ಮುಸ್ಲಿಂ ಆಡಳಿತದ ಕಾಲೇಜಿನ ಅನುಮತಿ ಅರ್ಜಿಗಳನ್ನು ಪರಿಶೀಲನೆಗೆ ಇಡಲಾಗಿದೆ.

ಮುಸ್ಲಿಂ ವಿದ್ಯಾರ್ಥಿನಿಯರನ್ನು ಸೆಳೆಯಲು ಹೊಸ ಕಾಲೇಜು
ಹಿಜಾಬ್ ವಿವಾದ ಆರಂಭವಾದ ದಿನದಿಂದ ಕರಾವಳಿಯ ಹಲವು ಕಾಲೇಜುಗಳಲ್ಲಿ ಹಿಜಾಬ್ ಗೊಂದಲ ಜಾಸ್ತಿಯಾಗಿದ್ದು, ಕೆಲ ಕಾಲೇಜಿನ ನಿಯಮದ ಪ್ರಕಾರ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ಇಲ್ಲ. ಆದರೆ ಶೈಕ್ಷಣಿಕ ವರ್ಷ ಮಧ್ಯದಲ್ಲಿ ಈ ಗೊಂದಲ ಬಂದ ಹಿನ್ನೆಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನ ಆದೇಶವನ್ನು ಪರಿಗಣಿಸಿ ಹಿಜಾಬ್ ಕಳಚಿಟ್ಟು ತರಗತಿಗಳಿಗೆ ಪ್ರವೇಶ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಸೆಳೆಯಲು ಹಲವು ಶಿಕ್ಷಣ ಸಂಸ್ಥೆಗಳು ಈಗ ಪಿಯು ಕಾಲೇಜಿನ ತೆರೆಯಲು ಉತ್ಸುಕವಾಗಿದೆ.
ಹಿಜಾಬ್ ವಿವಾದ ಆರಂಭವಾದ ಬಳಿಕ ಮುಸ್ಲಿಂ ನೇತೃತ್ವದ ಶಿಕ್ಷಣ ಸಂಸ್ಥೆಗಳಿಗೆ ಮುಸ್ಲಿಂ ವಿದ್ಯಾರ್ಥಿನಿಯರು ವಲಸೆ ಹೋಗುವ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಮತ್ತಷ್ಟು ಕಾಲೇಜನ್ನು ತೆರೆಯಲು ಆಸಕ್ತಿ ತೋರಿವೆ. ಈಗಾಗಲೇ ಹಲವು ವಿದ್ಯಾರ್ಥಿನಿಯರು ಮುಸ್ಲಿಂ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶವನ್ನು ಪಡೆದಿದ್ದು ಇನ್ನು ಹಲವು ವಿದ್ಯಾರ್ಥಿಗಳು ಮುಸ್ಲಿಂ ಕಾಲೇಜಿನ ಪ್ರವೇಶಾತಿಗೆ ಆಕಾಂಕ್ಷಿಗಳಾಗಿದ್ದಾರೆ.

ಮುಸ್ಲಿಂ ಕಾಲೇಜುಗಳಿಗೆ ಹೆಚ್ಚಾದ ಬೇಡಿಕೆ
ಮುಸ್ಲಿಂ ವಿದ್ಯಾರ್ಥಿಯರ ಹೆತ್ತವರು ಕೂಡಾ ತಮ್ಮ ಧಾರ್ಮಿಕ ಹಕ್ಕನ್ನು ನೀಡುವ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ನಿರ್ಧಾರ ಮಾಡಿದ್ದು ಹೀಗಾಗಿ ಮುಸ್ಲಿಂ ಕಾಲೇಜ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲೇ ಹಲವು ಮುಸ್ಲಿಂ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಾಗಿದ್ದು, ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಭರ್ತಿಯಾಗಿದೆ.

14 ಶಿಕ್ಷಣ ಸಂಸ್ಥೆಗಳು ಅರ್ಜಿ, 2ಕ್ಕೆ ಅನುಮತಿ
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ದಕ್ಷಿಣ ಕನ್ನಡ ಡಿಡಿಪಿಯು ಸಿಡಿ ಜಯಣ್ಣ, ಈ ವರ್ಷ ಪಿಯು ತರಗತಿಗಳನ್ನು ಆರಂಭಿಸಲು 14 ಶಿಕ್ಷಣ ಸಂಸ್ಥೆಗಳು ಅರ್ಜಿಯನ್ನು ಹಾಕಿದ್ದವು. ಆದರಲ್ಲಿ ಪರಿಶೀಲನೆ ಮಾಡಿ ಪ್ರಥಮ ಹಂತದಲ್ಲಿ ಎರಡು ಸಂಸ್ಥೆಗಳಿಗೆ ಪಿಯು ತರಗತಿ ಆರಂಭಕ್ಕೆ ಅನುಮತಿ ನೀಡಲಾಗಿದೆ. ಉಳಿದ ಹನ್ನೆರಡು ಅರ್ಜಿ ಗಳು ಪರಿಶೀಲನಾ ಹಂತದಲ್ಲಿದೆ.. ಎರಡು ಸಂಸ್ಥೆಗಳ ಪೈಕಿ ಒಂದು ಮುಸ್ಲಿಂ ಮಾಲಕತ್ವದ ಮಂಗಳೂರು ನಗರ ಹೊರವಲಯದ ಗುರುಪುರ ಸಹರ ಶಿಕ್ಷಣ ಸಂಸ್ಥೆ,ಮತ್ತೊಂದು ಸುಬ್ರಹ್ಮಣ್ಯ ದ ಕರ್ನಾಟಕ ಶಿಕ್ಷಣ ಸಂಸ್ಥೆ..ಬೇರೆ ಸಂಸ್ಥೆಗಳ ಅರ್ಜಿಯನ್ನೂ ಪರಿಶೀಲನೆ ಮಾಡುತ್ತಿದ್ದೇವೆ ಅಂತಾ ಹೇಳಿದ್ದಾರೆ.

ಹಿಜಾಬ್ ಪಡದೇ ತೀರುತ್ತೇವೆ
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಎರಡು ದಿನಗಳ ಹಿಂದೆ ಸಮಾವೇಶ ನಡೆಸಿದ್ದು, ಹಿಜಾಬ್ ಪಡದೇ ತೀರುತ್ತೇವೆ ಎಂದು ತೀರ್ಮಾನಿಸಿದ್ದಾರೆ. ಈ ಹಿಂದೆ ಹಿಜಬ್ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರೇ ಹೈಲೆಟ್ ಆಗಿದ್ದರು. ಸುಪ್ರೀಂ ಕೋರ್ಟ್ ನಲ್ಲಿ ಮುಂದಿನ ವಾರದಿಂದ ಹಿಜಾಬ್ ಕುರಿತಾದ ವಿಚಾರಣೆ ನಡೆಯಲಿದೆ. ಸುಪ್ರೀಂ ಕೋರ್ಟ್ನ ವಿಚಾರಣೆ ಬಗ್ಗೆ ವಿಶ್ವಾಸ ಇದೆ. ನಮ್ಮ ಹಿಜಾಬ್ ನಿಂದ ಯಾರಿಗೂ ಸಮಸ್ಯೆ ಇಲ್ಲ. ವಿರೋಧಿಗಳಿಗೆ ಇರೋದು ನಾವು ಏಕದೇವತಾ ಆರಾಧಕರು ಎನ್ನುವ ಮೇಲೆ. ಆದರೆ ನಾವು ಅದಕ್ಕೆಲ್ಲಾ ಒಪ್ಪೋದಿಲ್ಲ. ಮೊದಲು ಕಾಲೇಜು ನಾವು ಹಿಜಬ್ ಧರಿಸೋಕೆ ಒಪ್ಪಿಗೆ ನೀಡಿತ್ತು. ಹಿಜಾಬ್ ವಿಚಾರದಿಂದ ಕಾಲೇಜಿನ ಕೆಟ್ಟಮುಖವನ್ನೆಲ್ಲಾ ನೋಡಿದಂತಾಯಿತು. ಹಿಜಾಬ್ ನಿಂದ ಜೀವನದಲ್ಲಿ ಬಹಳಷ್ಟು ತಾಳ್ಮೆ ಕಲಿತುಕೊಂಡಿದ್ದೇವೆ. ಉತ್ತಮ ವ್ಯಕ್ತಿ ಗಳಾಗುತ್ತಿದ್ದೇವೆ. ಆದರೆ ನಾವು ಮತ್ತೆ ಬರುತ್ತೇವೆ. ಕಾಲೇಜು, ಮನೆ, ಅಂಗಡಿ ಎಲ್ಲಾ ಕಡೆ ಹಿಜಾಬ್ ಧರಿಸಿ ಹೋಗುತ್ತೇವೆ. ಯಾರಿಗೂ ನಮ್ಮನ್ನು ತಡೆಯಲು ಸಾಧ್ಯವಿಲ್ಲಎಂದು ಹಿಜಾಬ್ ಹೋರಾಟಗಾರ್ತಿ ಆಲಿಯಾ ಅಸಾದಿ ಹೇಳಿದ್ದಾರೆ.












Click it and Unblock the Notifications