ಮಂಗಳೂರಿಗರಲ್ಲಿ ಭಯ ಹುಟ್ಟಿಸಿದ ಕಾರ್ಮೋಡ ಹೊತ್ತುತಂದ ಕತ್ತಲು
Recommended Video
ಮಂಗಳೂರು, ಅಕ್ಟೋಬರ್ 6: ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಪ್ರಕಾರ ಶನಿವಾರದಿಂದ ಕರಾವಳಿಯಲ್ಲಿ ಭಾರೀ ಮಳೆ ಆರಂಭವಾಗಲಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಇತರ ಭಾಗಗಳಲ್ಲಿ ಸಂಜೆ ಆಗುತ್ತಿದ್ದಂತೆ ಭಾರೀ ಕಾರ್ಮೋಡ ಆವರಿಸಿದೆ. ಶುಕ್ರವಾರ ಸಂಜೆಯೇ ಕತ್ತಲೆ ಆವರಿಸಿದ್ದು, ಭಾರೀ ಮಳೆಯ ಮುನ್ಸೂಚನೆ ದೊರೆತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಇತರ ಭಾಗಗಳಲ್ಲಿ ಮಳೆ ಸುರಿಯಲು ಆರಂಭಿಸಿದೆ. ಮಂಗಳೂರಿನಾದ್ಯಂತ ಸಿಡಿಲು ಸಹಿತ ಗಾಳಿ ಬೀಸಿ, ಮಳೆ ಸುರಿಯಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನಗರದಲ್ಲಿ ಕಾರ್ಮೋಡಗಳು ಆವರಿಸುತ್ತಿದ್ದಂತೆ ಜನರಲ್ಲಿ ಆತಂಕ ಮನೆ ಮಾಡತೊಡಗಿತ್ತು.
ಕರಾವಳಿಯಲ್ಲಿ ಭಾರೀ ಮಳೆ: ಆಳ ಸಮುದ್ರದಿಂದ ಮರಳುತ್ತಿರುವ ಮೀನುಗಾರರು
ನಗರದಲ್ಲಿ ಆದಷ್ಠು ಬೇಗೆ ಮನೆ ಸೇರುವ ಧಾವಂತದಲ್ಲಿದ್ದ ಜನರು, ವಾಹನ ಸಂಚಾರದಲ್ಲಿ ದಟ್ಟಣೆ ಕಂಡು ಬಂದಿದೆ. ನಗರದೆಲ್ಲೆಡೆ ಭಯ ಹುಟ್ಟಿಸುವಂತೆ ಕಗ್ಗತ್ತಲು ಆವರಿಸಿತ್ತು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೆಲ ಭಾಗದಲ್ಲಿ ಗುರುವಾರ ರಾತ್ರಿ ಉತ್ತಮ ಮಳೆಯಾಗಿದೆ. ಶುಕ್ರವಾರ ಮಧ್ಯಾಹ್ನ ಮಂಗಳೂರು ನಗರದ ಹೊರಭಾಗದಲ್ಲಿ ಗುಡುಗು ಸಹಿತ ಮಳೆ ಸುರಿದಿದೆ. ಮಧ್ಯಾಹ್ನದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಧರ್ಮಸ್ಥಳ, ಸುಳ್ಯ ಭಾಗದಲ್ಲಿ ಮಳೆ ಸುರಿದಿದೆ.
ಮಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ: ಆತಂಕಗೊಂಡ ಜನ
ಅರಬ್ಬೀ ಸಮುದ್ರದಲ್ಲಿ ತೀವ್ರ ವಾಯು ಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಇದು ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಅಕ್ಟೋಬರ್ 5ರ ಬಳಿಕ ಕರಾವಳಿಯಲ್ಲಿ ಭಾರೀ ಮಳೆ ಸುರಿಯುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ರವಾನಿಸಿತ್ತು.
ಅಕ್ಟೋಬರ್ 5 ರಂದ 8 ರವರೆಗೆ ಸಮುದ್ರ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಮೀನುಗಾರಿಕೆಗೆ ತೆರಳಿರುವ ಮೀನುಗಾರರು ಈ ಕೂಡಲೇ ಕಿನಾರೆಗೆ ಬರುವಂತೆ ಸಂದೇಶ ರವಾನಿಸಲಾಗಿದ್ದು, ಕಿನಾರೆಯತ್ತ ಬರತೊಡಗಿದ್ದಾರೆ.
ಕರಾವಳಿಯಲ್ಲಿ ಚಂಡಮಾರುತದ ಭೀತಿ: ಅ.5ರ ನಂತರ ಭಾರೀ ಮಳೆ ಸಾಧ್ಯತೆ
600ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ಮಂಗಳೂರು ಬಂದರಿನಲ್ಲಿ ಲಂಗರು ಹಾಕಿವೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ತುರ್ತು ಕಾರ್ಯಾಚರಣೆ ಕೈಗೊಳ್ಳುವ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.