ಕೇವಲ 2 ಗಂಟೆ ಸುರಿದ ಮಳೆಗೆ ತತ್ತರಿಸಿದ ಮಂಗಳೂರಿನ ಜನರು
ಮಂಗಳೂರು, ಜುಲೈ, 30: ಮಂಗಳೂರಿನಲ್ಲಿ ಶುಕ್ರವಾರ ರಾತ್ರಿ 2 ಗಂಟೆಗಳ ಕಾಲ ಭಾರಿ ಮಳೆ ಸುರಿದಿದ್ದು, ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳೆಲ್ಲ ಜಲಾವೃತವಾಗಿ ವಾಹನ ಸವಾರರು ಪರದಾಡಿದ್ದಾರೆ.
ಮಂಗಳೂರು ನಗರದ ಹಲವೆಡೆಗಳಲ್ಲಿ ಮನೆಗಳಿಗೆ, ಕಟ್ಟಡಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣ ಜಲಾವೃತಗೊಂಡು ಪ್ರಯಾಣಿಕರು ಪರದಾಡುವಂತಾಗಿದೆ. ಪಂಪ್ ವೆಲ್ ಫ್ಲೈಓವರ್ ಕೆಳಭಾಗದಲ್ಲಿ ನೀರಿನಿಂದ ಆವೃತವಾಗಿದ್ದು, ವಾಹನ ಸವಾರರಿಗೆ ತೊಂದರೆಯಾಗಿ ಪರಿಣಮಿಸಿತ್ತು. ರಸ್ತೆಯಲ್ಲಿ ನೀರು ನಿಂತ ಪರಿಣಾಮ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರಿಗೆ ಪೀಕಲಾಟ ಶುರುವಾಗಿತ್ತು. ಕೊಟ್ಟಾರ ಚೌಕಿಯಲ್ಲೂ ವಾಹನ ಸವಾರರು ಪರದಾಡಿದ್ದಾರೆ.
ಮಂಗಳೂರಿನ ಪಾಂಡೇಶ್ವರದ ಶಿವನಗರ, ಕರಂಗಲಪಾಡಿ, ಕೊಟ್ಟಾರಚೌಕಿ, ಮಾಲೆಮಾರ್ಗಳಲ್ಲಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಹಲವೆಡೆ ಮನೆಯೊಳಗಡೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಹೊರವಲಯದಲ್ಲಿರುವ ಬೊಳಿಯಾರಿನ ಕಂಬಳಪದವು ರಸ್ತೆ ಸಂಪರ್ಕಿಸುವ ಅರ್ಕಾನ ಕ್ರಾಸ್ ಬಳಿ ಗುಡ್ಡ ಕುಸಿದು ಮಿತ್ತಕೋಡಿ ರಸ್ತೆ ಬಂದ್ ಆಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆಯ ಹಿನ್ನೆಲೆಯಲ್ಲಿ ಮಂಗಳೂರು, ಉಳ್ಳಾಲ, ಬಂಟ್ಬಾಳ, ಮೂಲ್ಕಿ- ಮೂಡುಬಿದಿರೆ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಂಗಳೂರು ನಗರದ ಎಲ್ಲಾ ಕಾಲೇಜುಗಳಿಗೂ ರಜೆ ಘೋಷಣೆ ಮಾಡಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ ಕೆ.ವಿ ರಾಜೇಂದ್ರ ಆದೇಶ ಮಾಡಿದ್ದರು.ಪುತ್ತೂರು, ಸುಳ್ಯ, ಬೆಳ್ತಂಗಡಿ ವ್ಯಾಪ್ತಿಯ ತಹಶೀಲ್ದಾರರು, ಬಿಇಒ ಪರಿಸ್ಥಿತಿ ನೋಡಿ ರಜೆ ನಿರ್ಧರಿಸುವಂತೆ ಸೂಚನೆ ನೀಡಿದ್ದರು.

Recommended Video
ಹೀಗೆ ಕಡಲ ನಗರಿಯಲ್ಲಿ ಮಳೆ ಆರ್ಭಟಿಸಿ ಜನರನ್ನು ಆತಂಕಕ್ಕೆ ತಳ್ಳಿದೆ. ರಸ್ತೆಗಳೆಲ್ಲ ಕೆರೆಯಂತಾಗಿ ಟ್ರಾಫಿಕ್ ಜಾಮ್ನಿಂದ ವಾಹನ ಸವಾರರು ಮಳೆಯಲ್ಲಿಯೇ ಪರದಾರಿದ್ದಾರೆ. ಇನ್ನು ಮನೆಗಳಿಗೆ ನುಗ್ಗಿದ ನಿರನ್ನು ತೆಗೆದು ಹೊರಹಾಕಲು ಜನರು ಹರಸಾಹಸವನ್ನೆ ಪಟ್ಟಿದ್ದಾರೆ.












Click it and Unblock the Notifications