ಮಂಗಳೂರು: ಮತ್ತೆ ಸ್ಫೋಟವಾದ ಪುಷ್ಪಗಿರಿ, ಅಪಾರ ಪ್ರಮಾಣ ಅರಣ್ಯ ನಾಶ
ಮಂಗಳೂರು, ಆಗಸ್ಟ್ 29: ದಕ್ಷಿಣಕನ್ನಡ ಮತ್ತು ಕೊಡಗಿನ ಗಡಿ ಭಾಗ ಮತ್ತೆ ಭೀಕರ ಜಲ ಸ್ಫೋಟಕ್ಕೆ ಸಾಕ್ಷಿಯಾಗಿದೆ. ಭಾನುವಾರ ಮಧ್ಯರಾತ್ರಿ ಗುಡ್ಡ ಮತ್ತೆ ಒಡೆದಿದ್ದು, ಅಪಾರ ಪ್ರಮಾಣದ ನೀರು, ಮರ, ಕಲ್ಲುಗಳು ಹೊಳೆಯಲಿ ಕೊಚ್ಚಿ ಬಂದಿದೆ. ಜಲಸ್ಫೋಟದ ಹಿನ್ನೆಲೆಯಲ್ಲಿ ಪಯಸ್ವಿನಿ, ಹರಿಹರ ಹಳ್ಳ ಸೇರಿದಂತೆ ಸಣ್ಣಪುಟ್ಟ ತೊರೆಗಳು ಉಕ್ಕಿ ಹರಿದಿದ್ದು ಅಪಾರ ನಷ್ಟ ಸಂಭವಿಸಿದೆ.
ಕಳೆದ ಒಂದು ತಿಂಗಳ ಹಿಂದೆ ಭಾರಿ ಜಲಸ್ಫೋಟಕ್ಕೆ ಸಾಕ್ಷಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗಡಿ ಗ್ರಾಮಗಳಾದ ಹರಿಹರ, ಕೊಲ್ಲಮೊಗ್ರು ಪಳ್ಳತಡ್ಕ,ಸೇರಿದಂತೆ ಕೆಲ ಗ್ರಾಮಗಳು ಮತ್ತೆ ಭೀಕರ ಜಲಸ್ಫೋಟಕ್ಕೆ ಸಾಕ್ಷಿಯಾಗಿದೆ. ಭಾನುವಾರ ಮಧ್ಯರಾತ್ರಿ ಬಾರಿ ಮೇಘ ಸ್ಫೋಟವಾಗಿದ್ದು, ಕಾಡಿನಿಂದ ನಾಡಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಗುಡ್ಡದಲ್ಲಿ ಮತ್ತೆ ಮಣ್ಣು ಸಡಿಲವಾಗಿ ಮರ ಗಿಡಗಳ ಸಹಿತ ನೀರು ಸ್ಫೋಟಗೊಂಡು ನದಿ ಹೊಳೆಗಳ ಮೂಲಕ ನಾಡಿಗೆ ಹರಿದು ಬಂದಿದೆ.
ಕಲ್ಮಕಾರು ಸಮೀಪದ ಗುಳಿಕ್ಕಾನ, ಕಡಮಕಲ್ ಭಾಗದಲ್ಲಿ ಗುಡ್ಡಕುಸಿದಿದ್ದು ಕಡಮಕಲ್ ಭಾಗದ ಗುಡ್ಡಗಳಿಂದ ನೀರು ಜಲಪಾತದ ರೀತಿ ಹರಿದು ಬಂದಿದೆ. ಕಳೆದ ತಿಂಗಳು ಇದೇ ಗ್ರಾಮದಲ್ಲಿ ಭಾರಿ ಜಲಸ್ಫೋಟದಿಂದ ಅಪಾರ ನಾಶವಾಗಿತ್ತು. ಹರಿಹರ ಹಳ್ಳದಲ್ಲಿ ಅಪಾರ ಪ್ರಮಾಣದಲ್ಲಿ ನೀರಿನ ಹರಿವು ಬಂದ ಕಾರಣ ಕೃಷಿ ಭೂಮಿ ನಾಶವಾಗಿತ್ತು. ಹರಿಹರ ಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿತ್ತು..

ಪಯಸ್ವಿನಿ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ನದಿ ತೀರದಲ್ಲಿದ್ದ ಸ್ಟೋರೇಜ್ ಹೌಸ್ ನದಿ ಪಾಲಾಗಿದೆ. ಗಡಿ ಭಾಗದ ಚೆಂಬು ಗ್ರಾಮದಲ್ಲಿ ಪಯಸ್ವಿನಿ ನದಿಯಲ್ಲಿ ಅನ್ಯಾನ ಬಳಿ ಕಟ್ಟಲಾಗಿದ್ದ ಕಿಂಡಿ ಅಣೆಕಟ್ಟು ಬಳಿ ಮರದ ದಿಮ್ಮಿ ಗಳು ಬಂದ ಶೇಖರಣೆಯಾಗಿದ್ದು, ಇದರಿಂದ ಕೃತಕ ನೆರೆ ಸೃಷ್ಠಿಯಾಗಿತ್ತು. ಇದರಿಂದಾಗಿ ಸ್ಟೊರೇಜ್ ಹೌಸ್ ಕೊಚ್ಚಿ ಹೋಗಿದೆ.

ಮೂರು ದಿನ ಹಳದಿ ಅಲರ್ಟ್
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸಾಧಾರಣ ಮಳೆಯಾಗಿದೆ. ಹಾಗಾಗಿ ಆಗಸ್ಟ್ 29ರಿಂದ ಮುಂದಿನ ಮೂರು ದಿನಗಳವರೆಗೆ ಹವಾಮಾನ ಇಲಾಖೆ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಣೆ ಮಾಡಿದೆ. ಈ ಭಾಗದಲ್ಲಿ ಮಳೆ ಜೊತೆಗೆ ಗಾಳಿ ಮತ್ತು ಸಮುದ್ರದ ಅಬ್ಬರ ಹೆಚ್ಚಾಗುವ ಸೂಚನೆ ನೀಡಿದೆ.












Click it and Unblock the Notifications