ಕರಾವಳಿಯಲ್ಲಿ ಮುಂದುವರೆದಿದೆ ಮಳೆ, ಭಾರೀ ಕಡಲ ಕೊರೆತ
ಮಂಗಳೂರು, ಜೂನ್ 13: ಕರಾವಳಿಯಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಉಂಟಾದ ಹಿನ್ನೆಲೆಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ಮಂಗಳೂರು ನಗರದಲ್ಲಿ ಕಳೆದ ರಾತ್ರಿಯಿಂದ ಭಾರೀ ಮಳೆ ಸುರಿದಿದೆ. ನಿನ್ನೆ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ಮೋಡಮುಸುಕಿದ ವಾತಾವರಣವಿದ್ದು, ಬಿಟ್ಟು ಬಿಟ್ಟು ಮಳೆಯಾಗಿದೆ.
ಮಂಗಳೂರು ತೀರದಲ್ಲಿ ಹೆಚ್ಚಿದ ಕಡಲ ಕೊರೆತ; ಮನೆಗಳಿಗೆ ಹಾನಿ
ಜಿಲ್ಲೆಯ ಬೆಳ್ತಂಗಡಿ, ಗುರುವಾಯನಕೆರೆ, ಧರ್ಮಸ್ಥಳ, ಮೂಡುಬಿದಿರೆ, ಕಿನ್ನಿಗೋಳಿ, ಉಳ್ಳಾಲ, ಕಡಬ, ಮೂಲ್ಕಿ, ಸುಬ್ರಹ್ಮಣ್ಯ, ಸುಳ್ಯ, ಸುರತ್ಕಲ್, ಮುಡಿಪು, ಪುತ್ತೂರು, ಉಪ್ಪಿನಂಗಡಿ, ವೇಣೂರು, ಬಂಟ್ವಾಳ, ಪುಂಜಾಲಕಟ್ಟೆ, ನಾರಾವಿ ಮೊದಲಾದೆಡೆ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಉಡುಪಿ, ಮಣಿಪಾಲ, ಕಾರ್ಕಳ ಹಾಗೂ ಬೆಳ್ಮಣ್, ಬ್ರಹ್ಮಾವರ, ಸಾಲಿಗ್ರಾಮ, ಸಾಸ್ತಾನ, ಸಿದ್ಧಾಪುರ, ಕೊಲ್ಲೂರು, ಕುಂಭಾಶಿ, ತೆಕ್ಕಟ್ಟೆ, ಶಿರ್ವ ಪರಿಸರದಲ್ಲಿ ನಿರಂತರವಾಗಿ ಮಳೆಯಾಗಿದೆ.
ಸೋಮೇಶ್ವರ, ಉಚ್ಚಿಲದಲ್ಲಿ ನಿರಂತರ ಕಡಲ್ಕೊರೆತ
ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ನಗರ ಹೊರವಲಯದ ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ ಬೀಚ್ ನಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಮೂರು ದಿನಗಳಿಂದ ಸೋಮೇಶ್ವರ, ಉಚ್ಚಿಲದಲ್ಲಿ ನಿರಂತರ ಕಡಲ್ಕೊರೆತವಾಗುತ್ತಿದೆ.
ಉಳ್ಳಾಲದಲ್ಲಿ ಕಡಲ್ಕೊರೆತ ಇಂದು ಕೂಡ ಮುಂದುವರಿದಿದೆ. ಕೈಕೋ ಕಿಲಿರಿಯಾ ನಗರದಲ್ಲಿ ಸಮುದ್ರ ಕಿನಾರೆಯಲ್ಲಿ ನೆಲೆಸಿದ್ದ ಎಂಟು ಕುಟುಂಬಗಳು ಸ್ಥಳಾಂತರಗೊಂಡಿವೆ. ಸೋಮೇಶ್ವರ-ಉಚ್ಚಿಲ ಭಾಗದಲ್ಲಿ ಒಂದು ಮನೆ ನಿನ್ನೆ ಸಂಜೆ ವೇಳೆ ಸಮುದ್ರ ಪಾಲಾಗಿದೆ. ಖಲೀಲ್, ಝೊಹರಾ, ಜೈನಬಾ, ಝೊಹರಾ ರಹೀಂ, ಜುಬೇರಾ, ನಸೀಮಾ ಹಾಗೂ ಮನೆ ಕಳೆದುಕೊಂಡ ಮೈಮುನಾ ಇಕ್ಬಾಲ್ ಮತ್ತು ಝೊಹರಾ ಎಂಟು ಕುಟುಂಬಗಳು ಕೋಟೆಕಾರು ಮತ್ತು ಉಳ್ಳಾಲಬೈಲಿನಲ್ಲಿರುವ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡಿವೆ.
ಕರಾವಳಿ; ಚಂಡಮಾರುತದ ಎಚ್ಚರಿಕೆ, ಸಮುದ್ರಕ್ಕಿಳಿಯದಂತೆ ಸೂಚನೆ
ಹವಾಮಾನ ಇಲಾಖೆ ಎಚ್ಚರಿಕೆ
ನಿನ್ನೆ ರಾತ್ರಿಯಿಡೀ ಅಲೆಗಳ ಹೊಡೆತ ತೀವ್ರವಾಗಿತ್ತು. ಅಪಾಯದಂಚಿನಲ್ಲಿರುವ ಮನೆಗಳಿಗೆ ಭಾಗಶಃ ಹಾನಿಯಾಗುತ್ತಿದೆ. ಸೋಮೇಶ್ವರ-ಉಚ್ಚಿಲ ಭಾಗದಲ್ಲಿ ಅಬೂಬಕರ್ ಎಂಬುವರ ಮನೆಗೆ ಅರ್ಧದಷ್ಟು ಹಾನಿಯಾಗಿದೆ. ನಾಗೇಶ್, ವಿಶ್ವನಾಥ್ ಎಂಬುವರ ಮನೆಯೂ ಹಾನಿಯಾಗಿದೆ. ನಿನ್ನೆ ಎರಡು ಮನೆಗಳ ಶೆಡ್ ನೀರುಪಾಲಾಗಿತ್ತು. ಕಳೆದ ಮೂರು ದಿನದಲ್ಲಿ ಕಡಲ ಕೊರೆತಕ್ಕೆ 20ಕ್ಕೂ ಅಧಿಕ ತೆಂಗಿನಮರಗಳು ಸಮುದ್ರದ ಪಾಲಾಗಿವೆ. ಅಬ್ಬರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿರುವ ಕಾರಣ ಮೀನುಗಾರರು, ಸಾರ್ವಜನಿಕರು ಸಮುದ್ರ ತೀರಕ್ಕೆ ಹೋಗದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕೊಚ್ಚಿಹೋದ ಅಂಗಡಿ ಮಳಿಗೆ
ಸಸಿಹಿತ್ಲು ಬೀಚ್ನಲ್ಲಿ ಅಂಗಡಿ ಮಳಿಗೆಯೊಂದು ಕೊಚ್ಚಿಕೊಂಡು ಸಮುದ್ರ ಸೇರುವ ಸ್ಥಿತಿಯಲ್ಲಿದೆ. ಉಡುಪಿಯ ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಕೆರೆ ಬಳಿ ಸಮುದ್ರ ಅಲೆಗಳು ಉಕ್ಕಿ ತೀರದ ಮನೆಗಳಿಗೆ ನುಗ್ಗಿದೆ. ಈ ಭಾಗದಲ್ಲಿ ಕಡಲ್ಕೊರೆತದ ಭೀತಿ ಎದುರಾಗಿದೆ. ನಿನ್ನೆ ರಾತ್ರಿಯಿಂದ ಸುರಿದ ಮಳೆಗೆ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಅಂಗಡಿಗಳಿಗೆ ನೀರು ನುಗ್ಗಿದೆ. ರಸ್ತೆಯಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿರದ ಹಿನ್ನಲೆಯಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು, ಪಾದಚಾರಿಗಳು ನಡೆದಾಡಲು ಹರಸಾಹಸಪಡುತ್ತಿದ್ದರು.
ಕರಾವಳಿಯಲ್ಲಿ ಸಮುದ್ರ ಪ್ರಕ್ಷುಬ್ಧ, ಕಡಲ ತಡಿಯಲ್ಲಿ ಆತಂಕ
ಸಂತ್ರಸ್ತರಿಗೆ ಸಹಾಯದ ಭರವಸೆ
ಕಡಲ ಕೊರೆತ ಸಂಭವಿಸುತ್ತಿರುವ ಉಚ್ಚಿಲ, ಸೋಮೇಶ್ವರ, ಭಟ್ಟಂಪಾಡಿ ಪ್ರದೇಶಕ್ಕೆ ಇಂದು ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದರು. ಅಲ್ಲಿನ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ, ಕಡಲು ಕೊರೆತದ ಹಾನಿಯನ್ನು ವೀಕ್ಷಿಸಿದರು. ಹಾನಿಗೆ ಒಳಗಾಗಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರದ ಸಹಾಯದ ಭರವಸೆ ನೀಡಿದರು.