ವ್ಹೀಲ್ ಚೇರ್ನಲ್ಲೇ ಪರೀಕ್ಷೆ ಬರೆದವನ ಕರುಣಾಜನಕ ಕತೆಯನ್ನೊಮ್ಮೆ ಓದಿ
ಮಂಗಳೂರು, ಮಾರ್ಚ್ 3: ಕುಡ್ಲದ ಅರ್ಜುನ್ ಬಗ್ಗೆ ನಿಮಗೆ ಹೇಳಬೇಕು ಎಂದು ಬಹಳ ದಿನದಿಂದ ಅಂದುಕೊಂಡು, ಈ ದಿನ ಅದಕ್ಕೆ ಕಾಲ ಕೂಡಿ ಬಂದ ಹಾಗಿದೆ. ಪ್ರಥಮ ಪಿಯುಸಿ ಪರೀಕ್ಷೆ ಅರ್ಜುನ್ ಬಹಳ ಅಪರೂಪದ ಹುಡುಗ. ಆ ಕಾರಣಕ್ಕೆ ಏನೋ ಅತನ ಪಾಲಿಗೆ ಜತೆಯಾಗಿರುವುದು ಕೂಡ ಅಪರೂಪದ ಕಾಯಿಲೆ 'ಅಸ್ಟೋಜೆನಿಸ್ ಎಫೆಕ್ಟ್'.
ಆರು ವರ್ಷದಿಂದ ಈ ಕಾಯಿಲೆ ಜತೆಗೆ ಬಡಿದಾಡುತ್ತಲೇ ಇದ್ದಾನೆ ಅರ್ಜುನ್. ಅದರಲ್ಲಿ ಆ ಕಾಯಿಲೆ ಭಾಗಶಃ ಗೆದ್ದಿದೆ. ಏಕೆಂದರೆ ಅರ್ಜುನ್ ಹಾಸಿಗೆ ಬಿಟ್ಟು ಏಳಲಾರದಂತೆ ಮಣಿಸಿದೆ. ಆದರೆ ಅತನ ಛಲದಲ್ಲಿ ತೃಣ ಮಾತ್ರವನ್ನು ಆ ಕಾಯಿಲೆಗೆ ಕಿತ್ತುಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ಆತನ ಮುಖದ ಮೇಲಿನ ನಗುವನ್ನು ಸಹ ಕಸಿಯಲು ಆಗಿಲ್ಲ.

ಅರ್ಜುನ್ ಗೆ ದೇಹದ ಮೇಲೆ ಸ್ವಾಧೀನ ಇಲ್ಲ. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ದಾಖಲಾಗಿ, ಸಹಾಯಕಿಯೊಬ್ಬರ ನೆರವಿನಿಂದ ಪ್ರಥಮ ಪಿಯುಸಿ ಪರೀಕ್ಷೆ ಬರೆದಿದ್ದಾನೆ. ಹಾಸಿಗೆ ಮೇಲೆ ಮಲಗಿ, ನಗುಮೊಗದಿಂದಲೇ ಪ್ರಶ್ನೆಗಳಿಗೆ ಉತ್ತರ ಹೇಳಿದ ಆತನ ಫೋಟೋಗಳನ್ನು ನೋಡಿದರೆ ಕರುಳು ಇರಿದಂತೆ ಆಗುತ್ತದೆ.
ಇನ್ನು ಅರ್ಜುನ್ ನ ತಂದೆ-ತಾಯಿಗಳು ಕಡಿಮೆ ಧೈರ್ಯದ ಆಸಾಮಿಗಳಲ್ಲ. ಮಗನ ಸಲುವಾಗಿ ಕಾಲೇಜಿನ ಬಳಿಯೇ ಬಾಡಿಗೆ ಮನೆ ಮಾಡಿದ್ದಾರೆ. ಒಂದು ದಿನಕ್ಕೂ ಬೇಸರ ಮಾಡಿಕೊಳ್ಳದೆ ಮಗನ ಜತೆಗೆ ನಿಂತಿದ್ದಾರೆ. ಹ್ಞಾಂ ಇನ್ನೊಂದು ಮಾತು, ಎಸ್ಸೆಸ್ಸೆಲ್ಸಿಯಲ್ಲಿ ಅರ್ಜುನ್ ಗೆ ಶೇ 92ರಷ್ಟು ಅಂಕ ಬಂದಿದೆ.

ಮಗನ ನಿತ್ಯದ ಕೆಲಸಕ್ಕೆ ಅರ್ಜುನ್ ತಂದೆ ನೆರವಾಗುತ್ತಿದ್ದಾರೆ. 'ಅಸ್ಟೋಜೆನಿಸ್ ಎಫೆಕ್ಟ್' ಕಾಯಿಲೆ ಇರುವ ವ್ಯಕ್ತಿಯ ಮೂಳೆಗಳು ಮುರಿಯುತ್ತಾ ಬರುತ್ತವೆ. ವೈದ್ಯರ ಬಳಿ ಪರೀಕ್ಷೆ ಮಾಡಿಸಿದ ನಂತರ ಹತ್ತು-ಹದಿನೈದು ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಆದರೆ ಸ್ಥಿತಿಯಲ್ಲೇನೂ ತುಂಬ ಸುಧಾರಣೆ ಆಗಿಲ್ಲ. ಮೊದಲಿಗೆ ಕಾಲಿನ ಮೂಳೆ ಮುರಿಯುತ್ತಿದ್ದವು. ಈಗ ದೇಹದ ಇತರ ಭಾಗದ ಮೂಳೆಗಳೂ ಮುರಿಯುತ್ತಿವೆ. ಅರ್ಜುನ್ ನನ್ನು ಹೊತ್ತುಕೊಂಡೇ ಓಡಾಡಬೇಕು.
ಮಲಗಿದ್ದಲ್ಲಿಯೇ ಪರೀಕ್ಷೆ ಬರೆದ ಆತನ ಅಂತಃಶಕ್ತಿಯನ್ನು ಮೆಚ್ಚಲೇಬೇಕು. ಪ್ರತಿಭಾವಂತ ಅರ್ಜುನ್ ಎಲ್ಲರಂತೆ ಆಟವಾಡಿಕೊಂಡು ಪಾಠದಲ್ಲಿ ಮುಂಚೂಣಿಯಲ್ಲಿರಬೇಕು ಎನ್ನುವುದು ನಮ್ಮ ಆಸೆ ಎನ್ನುತ್ತಾರೆ ಕಾಲೇಜಿನ ಪ್ರಾಧ್ಯಾಪಕ ಗಣೇಶ್ ಅಮೀನ್ ಸಂಕಮಾರ್.












Click it and Unblock the Notifications