ಮಳೆಗಾಲದಲ್ಲಿ ಕರಾವಳಿಯ ಕಲ್ಲಣಬೆ ತಿಂದವನೇ ಜಾಣ!
ಮಂಗಳೂರು, ಜುಲೈ 09; ಬಗೆ-ಬಗೆಯ ಖಾದ್ಯಗಳಿಗೆ ಕರಾವಳಿ ಪ್ರಸಿದ್ಧಿ ಪಡೆದಿದೆ. ಕರಾವಳಿಯ ತಿನಿಸುಗಳಿಗೆ ಜಗತ್ತಿನಲ್ಲೇ ಭಾರೀ ಬೇಡಿಕೆ. ಸದ್ಯ ಕಡಲೂರಿನಲ್ಲಿ ಜಡಿ ಮಳೆಯೊಂದಿಗೆ ಆಗೊಮ್ಮೆ ಈಗೊಮ್ಮೆ ಗುಡುಗು ಸುದ್ದು ಮಾಡುತ್ತಿದೆ. ಇಂತಹ ಗುಡುಗಿಗೆ ಹುಟ್ಟುವ ಕಲ್ಲಣಬೆ ರುಚಿ ಸವಿಯುವುದೇ ಒಂದು ಅದ್ಭುತ ಅನುಭವ.
'ಈ ಜನುಮವೇ ಆಹಾ ದೊರಕಿದೇ ರುಚಿ ಸವಿಯಲು' ಎನ್ನುವ ಒಗ್ಗರಣೆ ಸಿನಿಮಾದ ಹಾಡಿನ ಸಾಲಿನಂತೆ, ಕರಾವಳಿಯ ಬಗೆ ಬಗೆ ಖಾದ್ಯಗಳನ್ನು ಸವಿಯುವುದೇ ಒಂದು ಅದ್ಭುತ ಅನುಭವ. ಕರಾವಳಿಯ ತಿಂಡಿ ತಿನಸುಗಳಿಗೆ ಮಾರು ಹೋಗದ ಖಾದ್ಯ ಪ್ರೀಯರೇ ಇಲ್ಲ. ಅಂತಹ ವಿಶೇಷ ಖಾದ್ಯಗಳಲ್ಲಿ ಕಲ್ಲಣಬೆ ಖಾದ್ಯ ಕೂಡ ಒಂದು. ಇದನ್ನು ಕರಾವಳಿಯಲ್ಲಿ ಕಲಲಾಂಬು ಅಂತಾರೆ.
ಮಳೆಗಾಲದಲ್ಲಿ ಗುಡ್ಡ ಪ್ರದೇಶದ ಮರಳು ಮಿಶ್ರಿತ ಕೆಂಪು ಮಣ್ಣಿನ ಮೇಲ್ಪದರದಲ್ಲಿ ಈ ಕಲ್ಲಣಬೆ ಹುಟ್ಟಿಕೊಳ್ಳತ್ತದೆ. ಮಳೆಗಾಲದಲ್ಲಿ ಅತೀ ಹೆಚ್ಚು ಈ ಕಲ್ಲಣಬೆ ಕಾಣುವುದರಿಂದ ಯುವಕರ ತಂಡ ಬೆಟ್ಟಕ್ಕೆ ಹತ್ತಿ ಕಲ್ಲಣಬೆಗೆ ಶೋಧ ಮಾಡುತ್ತಾರೆ.

ಸಣ್ಣ ಕೋಲಿನ ಸಹಾಯದಿಂದ ಅಗೆದು ಹೊರ ತೆಗೆಯುತ್ತಾರೆ. ಸಣ್ಣದಾದ ಚೆಂಡಿನ ಆಕಾರದಲ್ಲಿ ಇರುವ ಈ ಕಲ್ಲಣಬೆಯನ್ನು ಮನೆಗೆ ತಂದು, ಚೆನ್ನಾಗಿ ತೊಳೆದು ಶುಚಿಗೊಳಿಸಬೇಕು, ಬಳಿಕ ಕಲ್ಲಣಬೆಯ ಮೆಲ್ಪದರ ತೆಗೆದು ಮಸಾಲ ಸೇರಿಸಿ ರುಚಿ ರುಚಿಯಾದ ಖಾದ್ಯ ಸಿದ್ಧ ಮಾಡುತ್ತಾರೆ. ಆಗ ಹೊರ ಸೂಸುವ ಘಮ ಘಮ ಪರಿಮಳಕ್ಕೆ ಬಾಯಲ್ಲಿ ನೀರುಬರುತ್ತೆ.
ಮಣ್ಣಿನ ಪಾತ್ರೆಯಲ್ಲಿ ಕಟ್ಟಿಗೆ ಒಲೆಯಲ್ಲಿ ತಯಾರಿಸಿದ ಕಲ್ಲಣಬೆ ಪದಾರ್ಥ ಸಿಕ್ಕಾಪಟ್ಟೆ ರುಚಿ. ಕಲ್ಲಣಬೆ ನಾನ್ವೆಜ್ ರುಚಿಯ ಹೋಲಿಕೆ ಇದೆ, ಆದರೆ ಇದನ್ನು ಸಸ್ಯಹಾರಿಗಳೂ ಸೇವಿಸುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಕೆಜಿಗೆ 800-1000 ರೂ. ತನಕ ಬೇಡಿಕೆ ಇದೆ. ಹಣ ಎಷ್ಟಾದರೇನು? ಅಣಬೆ ರುಚಿ ಸವಿಯೋಣ ಅಂತ, ಖರೀದಿಸುವ ಕಲ್ಲಣಬೆ ಪ್ರಿಯರು ಕಡಿಮೆ ಇಲ್ಲ.

ಜಿಟಿ ಜಿಟಿ ಮಳೆ, ಚುಮು ಚುಮು ಚಳಿ, ಅಡುಗೆ ಮನೆಯಲ್ಲಿ ಘಮಘಮ ಕಲ್ಲಣಬೆ ಪದಾರ್ಥದ ಪರಿಮಳ. ಆಹಾ ಮಳೆಗಾಲದಲ್ಲಿ ನೀವೇನಾದ್ರೂ ಕರಾವಳಿಗೆ ಬಂದರೆ ಕಲ್ಲಣಬೆ ರುಚಿ ಸವಿಯೋದು ಮರಿಬೇಡಿ.












Click it and Unblock the Notifications