ಮತ್ತೆ ಬಂತು ಖಂಡಿಗೆ ಕ್ಷೇತ್ರದಲ್ಲಿ ಸಂಭ್ರಮದ ಮೀನು ಹಿಡಿಯುವ ಜಾತ್ರೆ
ಮಂಗಳೂರು, ಮೇ 15: ತುಳುನಾಡು ದೈವ, ದೇವರುಗಳ ನೆಲೆಬೀಡು , ಹಲವಾರು ವಿಶಿಷ್ಟ ಆಚರಣೆಗಳು ,ಕಾರಣಿಕದ ಕಥೆಗಳಿಗೆ ಜನಜನಿತ . ಅದರಂತೆ ಖಂಡಿಗೆ ಕ್ಷೇತ್ರದಲ್ಲಿ ವಿಶೇಷವಾದ ಮೀನು ಬೇಟೆ ಆಚರಣೆಯನ್ನು ನಡೆಸಿಕೊಂಡು ಬರುತ್ತಿದೆ.
ಮಂಗಳೂರು ಹೊರವಲಯದ ಸುರತ್ಕಲ್ ಸಮೀಪದ ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ಜಾತ್ರಾ ಮಹೋತ್ಸವದಂದು ನಡೆಯುವ ಮೀನು ಹಿಡಿಯುವ ಸಂಪ್ರದಾಯ ವರ್ಷಂಪ್ರತಿಯಂತೆ ಈ ಬಾರಿಯೂ ನಡೆಯಿತು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ತುಳುನಾಡಿನಲ್ಲಿ ಎರ್ಮಾಳು ಜೆಪ್ಪು ಖಂಡೇವು ಅಡೆಪು ನಾಣ್ಣುಡಿ ಇದೆ. ಉಡುಪಿ ಜಿಲ್ಲೆಯ ಎರ್ಮಾಳು ದೇವಳದಲ್ಲಿ ಜಾತ್ರೆ ಪ್ರಾರಂಭಗೊಳ್ಳುವ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯ ದೈವ ದೇವಸ್ಥಾನಗಳ ಜಾತ್ರೆಗಳು ಪ್ರಾರಂಭಗೊಂಡು ಸುರತ್ಕಲ್ ಸಮೀಪದ ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ಕ್ಷೇತ್ರದ ಜಾತ್ರೆಯೊಂದಿಗೆ ಎಲ್ಲಾ ಜಾತ್ರೆಗಳು ಮುಕ್ತಾಯವಾಗುತ್ತದೆ.
ಚೇಳಾಯರು ಗ್ರಾಮದ ಖಂಡಿಗೆಯ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಸು ಕ್ಷೇತ್ರವು ಪಾವಂಜೆ ರಾಷ್ಟ್ರೀಯ ಹೆದ್ದಾರಿ ಸೇತುವೆ ಸಮೀಪ ನಂದಿನಿ ನದಿಯ ತಟದಲ್ಲಿದ್ದು, ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಪ್ರತಿ ವರ್ಷ ಮೇ ತಿಂಗಳಲ್ಲಿ ಬರುವ ವೃಷಭ ಸಂಕ್ರಮಣದಂದು ನಡೆಯುತ್ತದೆ. ಈ ನದಿಯಲ್ಲಿ ಮೀನು ಹಿಡಿಯುವ ಪದ್ಧತಿ ಹಿಂದಿನಿಂದಲೂ ದೊಡ್ದ ಮಟ್ಟದಲ್ಲಿ ನಡೆಯುತ್ತದೆ.

ನದಿಗೆ ಪ್ರಸಾದ ಹಾಕುವ ಮೂಲಕ ಚಾಲನೆ
ವೃಷಭ ಸಂಕ್ರಮಣದಂದು ಬೆಳಗ್ಗೆ 7 ಗಂಟೆ ಸುಮಾರಿಗೆ ದೈವಸ್ಥಾನಕ್ಕೆ ಸಂಭಂದಪಟ್ಟವರು ದೈವಕ್ಕೆ ಪ್ರಾರ್ಥನೆ ಸಲ್ಲಿಸಿ, ನಂದಿನಿ ನದಿಯ ದಡಕ್ಕೆ ಆಗಮಿಸಿ ನದಿಗೆ ಪ್ರಸಾದ ಹಾಕಿ ಮೀನು ಹಿಡಿಯುವ ಸಂಪ್ರದಾಯಕ್ಕೆ ಚಾಲನೆ ದೊರೆಯುತ್ತದೆ.

ಹಿರಿಯರ ಪ್ರೇತಾತ್ಮಗಳಿಗೆ ಬಡಿಸುತ್ತಾರೆ
ಜನರು ಅಂದು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನದವರೆಗೂ ಮೀನು ಹಿಡಿಯುತ್ತಾರೆ, ಹಿಡಿದ ಮೀನನ್ನು ಮನೆಗೆ ತೆಗೆದು ಕೊಂಡು ಹೋಗಿ, ಸತ್ತ ತಮ್ಮ ಹಿರಿಯರ ಪ್ರೇತಾತ್ಮಗಳಿಗೆ ಬಡಿಸುವ ಕ್ರಮ ಇಲ್ಲಿಯ ಜನರಲ್ಲಿದೆ.ಇದು ಈಗಲೂ ಹೆಚ್ಚಿನ ಮನೆಗಳಲ್ಲಿ ಆಚರಿಸಿಕೊಂಡೂ ಬರುತ್ತಿದ್ದಾರೆ.

ಜಾತ್ರೆಯ ಮೀನು ಅತ್ಯಂತ ರುಚಿಕರ
ವರ್ಷದಲ್ಲಿ ಒಂದು ದಿನ ಇಲ್ಲಿನ ಮೀನನ್ನು ಪದಾರ್ಥ ಮಾಡಿ ತಿನ್ನುವುದೇ ಇಲ್ಲಿನ ದೈವದ ಪ್ರಸಾದವೆಂದು ಭಕ್ತರು ನಂಬುವುದರಿಂದ ಜಾತ್ರೆಗೆ ವಿಶೇಷ ಪ್ರಾಮುಖ್ಯತೆ . ಅಲ್ಲದೇ, ಇಲ್ಲಿನ ಮೀನು ಅತ್ಯಂತ ರುಚಿಕರವಾಗಿರುತ್ತದೆ ಎಂಬ ನಂಬಿಕೆ ಇದೆ. ಜಾತಿ ಮತ ಬೇಧವಿಲ್ಲದೆ ಉಭಯ ಜಿಲ್ಲೆಯ ಹೆಚ್ಚಿನವರು ಇದರಲ್ಲಿ ಭಾಗವಹಿಸುತ್ತಾರೆ, ಕೆಲವರು ವ್ಯಾಪಾರದ ದೃಷ್ಟಿಯಿಂದ ಇಲ್ಲಿ ಹಿಡಿದ ಮೀನನ್ನು ಅಲ್ಲಿಯೇ ಮಾರುತ್ತಾರೆ.

ಈ ಅವಧಿಯಲ್ಲಿ ಮೀನು ಹಿಡಿಯುವುದಕ್ಕೆ ನಿಷೇಧ
ಮೇಷ ಸಂಕ್ರಮಣ ವೃಷಭ ಸಂಕ್ರಮಣದವರೆಗಿನ ಒಂದು ತಿಂಗಳ ಅವಧಿಯಲ್ಲಿ ಈ ನದಿಯಲ್ಲಿ ಮೀನು ಹಿಡಿಯುವುದಕ್ಕೆ ನಿಷೇಧವಿದೆ. ಈ ಸಂದರ್ಭ ಮೀನು ಹಿಡಿಯುವ ಕ್ರಮ ಇಲ್ಲ, ಹಲವು ವರ್ಷದ ಹಿಂದೆ ನಿಷೇಧದ ಸಂದರ್ಭ ಮೀನು ಹಿಡಿಯಲು ಕೆಲವರು ಮುಂದಾದಾಗ ಮೀನು ಹಿಡಿಯುವ ಬಲೆಗೆ ನಾಗರ ಹಾವು ಬಂದ ಉದಾಹರಣೆ ಇದೆ ಎಂಬುದನ್ನು ಹಿರಿಯರು ಹೇಳುತ್ತಾರೆ.
ಬೆಳಗ್ಗೆ ಮೀನು ಹಿಡಿಯುವ ಜಾತ್ರೆಯಾದರೆ ಕ್ಷೇತ್ರದಲ್ಲಿ ರಾತ್ರಿ ಧಾರ್ಮಿಕ ಕಾರ್ಯಕ್ರಮ ಬಳಿಕ ಧ್ವಜಾವರೋಹಣ ನಡೆಯುತ್ತದೆ. ಅಲ್ಲಿಗೆ ತುಳುನಾಡಿನಲ್ಲಿ ಹೆಚ್ಚಿನ ಜಾತ್ರೆ, ನೇಮೋತ್ಸವಗಳು ಅಂತ್ಯಗೊಳ್ಳುತ್ತದೆ.












Click it and Unblock the Notifications