"ನನ್ನ ಪರಿಸ್ಥಿತಿಯನ್ನು ಬೆಂಗಳೂರಿನಲ್ಲಿರುವ ಮಗಳಿಗೆ ತಿಳಿಸಲು ಸಾಧ್ಯವೇ?"
ಮಂಗಳೂರು, ಆಗಸ್ಟ್.19: ಅತಿವೃಷ್ಟಿಯ ಜಲಪ್ರಳಯ ಸೃಷ್ಟಿಸಿದ ದುರಂತಗಳು ಒಂದೊಂದಾಗಿ ಬೆಳಕಿಗೆ ಬರತೊಡಗಿವೆ. ದಕ್ಷಿಣ ಕನ್ನಡ - ಕೊಡಗು ಗಡಿಭಾಗ ಸಂಪಾಜೆಯ ಜೋಡುಪಾಲ ವ್ಯಾಪ್ತಿಯ ಜನರ ಪಾಡು ನರಕವಾಗಿದೆ. ಗುಡ್ಡ ಕುಸಿತದಿಂದ ಮನೆಮಠ ಸೇರಿದಂತೆ ಎಲ್ಲವನ್ನೂ ಕಳಕೊಂಡು ಬಡ ಜನರು ಬೀದಿಗೆ ಬಿದ್ದಿದ್ದಾರೆ.
ಅಂದಹಾಗೆ ಜೋಡುಪಾಲದ 2ನೇ ಮೊಣ್ಣಂಗೇರಿ ನಿವಾಸಿ 60ರ ಹರೆಯದ ವೃದ್ಧೆ ಗಿರಿಜಾ ಶುಕ್ರವಾರ ರಾತ್ರಿ ಮನೆಯಲ್ಲಿ ಒಬ್ಬರೇ ಇದ್ದಾಗ ನೋಡ ನೋಡುತ್ತಲೇ ಕಲ್ಲು ಬಂಡೆಗಳು ನೀರಿನೊಂದಿಗೆ ಉರುಳಿ ಬಂದು ತನ್ನ ಮನೆಯನ್ನು ಸೀಳಿಕೊಂಡು ಹೋದದ್ದನ್ನು ಕಣ್ಣಾರೆ ಕಂಡಿದ್ದಾರೆ.
ಇದೇ ಸಂದರ್ಭದಲ್ಲಿ ಆ ಪ್ರಳಯಾಂತಕ ಕಗ್ಗತ್ತಲ ರಾತ್ರಿಯಲ್ಲೇ ಕಾಡಿನಿಂದ ಆನೆಗಳು ಘೀಳಿಟ್ಟಿವೆ. ಬೆಳಗಿನವರೆಗೂ ಅಲ್ಲೆ ಪಕ್ಕದಲ್ಲಿ ಕೂತ ಗಿರಿಜಾ ಬೆಳಗ್ಗೆ ಆರು ಗಂಟೆಗೆ ಅಲ್ಲಿಂದ ಹೊರಬಂದಿದ್ದಾರೆ.

"ನನ್ನ ಮಗಳು ಲತಾಮಣಿ ಬೆಂಗಳೂರಿನಲ್ಲಿ ಕೆಲಸದಲ್ಲಿ ಇದ್ದಾಳೆ. ಸಂಪರ್ಕಿಸಲು ಮೊಬೈಲ್ ನಂಬರ್ ಗೊತ್ತಿಲ್ಲ. ಏನು ಕೆಲಸ ಅನ್ನೋದೂ ಗೊತ್ತಿಲ್ಲ. ನನಗೆ ಹೀಗಾಗಿದ್ದು ಮಗಳಿಗೆ ಗೊತ್ತಿರಲಿಕ್ಕಿಲ್ಲ ಅಂತಾ ಅಲವತ್ತುಕೊಂಡಿದ್ದಾರೆ" ಗಿರಿಜಾ.
ಸದ್ಯಕ್ಕೆ ಗಿರಿಜಾ ಸಂಪಾಜೆಯ ಗಂಜಿಕೇಂದ್ರದಲ್ಲಿ ಇದ್ದಾರೆ. ಬೆಂಗಳೂರಿನ ಮಂದಿ ನನ್ನ ಪರಿಸ್ಥಿತಿಯನ್ನು ಮಗಳಿಗೆ ತಿಳಿಸಲು ಸಾಧ್ಯವೇ ಅಂತ ಕೇಳಿದ್ದಾರೆ.












Click it and Unblock the Notifications