ವಿಸರ್ಜನೆ ಬಳಿಕ ಗಿಡವಾಗಿ ಬೆಳೆಯಲಿದ್ದಾನೆ ಪರಿಸರ ಸ್ನೇಹಿ ಗಣಪ!
ಮಂಗಳೂರು, ಆ.21 : ಗಣೇಶ ವಿಸರ್ಜನೆ ಬಳಿಕ ಗಿಡವಾಗಿ ಮತ್ತೆ ಉದ್ಭವಿಸಿದರೆ ಹೇಗೆ?. ಹೀಗೊಂದು ಪರಿಕಲ್ಪನೆಯೇ ಚೆಂದ, ಇಂತಹ ಪರಿಸರ ಸ್ನೇಹಿ ಗಣೇಶನ ಪರಿಕಲ್ಪನೆಯೊಂದಿಗೆ ಮಂಗಳೂರಿನ ಸಂಘಟನೆಯೊಂದು ಜಾಗೃತಿ ಆರಂಭಿಸಿದೆ. ಪರಿಸರ ಸ್ನೇಹಿ ಗಣಪನನ್ನು ಪೂಜಿಸಿ ಎಂದು ಸಂದೇಶ ಸಾರುತ್ತಿದೆ.
ಹಿಂದೆ ಜೇಡಿ ಮಣ್ಣಿನಿಂದ ಗಣೇಶನ ವಿಗ್ರಹಗಳನ್ನು ತಯಾರಿಸಲಾಗುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ ಜೇಡಿ ಮಣ್ಣಿನ ಬದಲು ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣಗಳನ್ನು ಬಳಸಿ ಬೃಹತ್ ಗಣೇಶನ ವಿಗ್ರಹಗಳನ್ನು ತಯಾರಿಸಲಾಗುತ್ತಿದೆ.

ವಿಸರ್ಜನೆಯ ನಂತರ ಈ ಮಾರಕ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣಗಳು ಜಲಮಾಲಿನ್ಯ ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಗಣೇಶ ಚತುರ್ಥಿ ಬಂತೆಂದರೆ ಮುಂಬೈ, ಬೆಂಗಳೂರು, ಹೈದರಾಬಾದ್ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ಪರಿಸರ ಪ್ರೇಮಿ ಗಣೇಶ ಕೂರಿಸಿ ಎಂಬ ಕೂಗು ಕೇಳಿಬರುತ್ತದೆ.
ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಗಿಡವಾಗಿ ಶಾಶ್ವತವಾಗಿ ನೆಲೆ ನಿಲ್ಲುವ ಗಣಪನ ಪರಿಕಲ್ಪನೆ ಹುಟ್ಟು ಹಾಕಿದೆ. ಈ ಕುರಿತು ಅಭಿಯಾನವನ್ನು ಕೂಡ ಆರಂಭಿಸಿದೆ. ಜೇಡಿ ಮಣ್ಣಿನಿಂದ ಗಣೇಶನನ್ನು ತಯಾರಿಸಿ ಪ್ರಕೃತಿ ಸಹಜ ಬಣ್ಣ ಬಳಿಯಲಾಗುತ್ತದೆ. ಮೂರ್ತಿಯ ಮಧ್ಯೆ ಮರವಾಗಿ ಬೆಳೆಯುವ ಪುಟ್ಟ ಗಿಡವೊಂದನ್ನು ಇಡಲಾಗುತ್ತದೆ.
ಹಬ್ಬದ ದಿನದಂದು ಎಲ್ಲಾ ಧಾರ್ಮಿಕ ವಿಧಿ ವಿಧಾನಗಳಂತೆ ಪೂಜೆ ಸಲ್ಲಿಸಿದ ಬಳಿಕ ವಿಸರ್ಜನೆಯ ಸಂದರ್ಭದಲ್ಲಿ ಗಣೇಶನ ಮೂರ್ತಿಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡ ಗುಂಡಿಯನ್ನು ತೆಗೆದು ಅದರಲ್ಲಿ ನೀರು ತುಂಬಿಸಿ ಗಣೇಶನ ವಿಗ್ರಹವನ್ನು ವಿಸರ್ಜಿಸಬೇಕು. ಹೀಗೆ ವಿಸರ್ಜಿಸಿದ ಗಣೇಶನ ವಿಗ್ರಹದ ಜೇಡಿ ಮಣ್ಣು ನೀರಿನಲ್ಲಿ ಕರಗಿ ಗಣೇಶ ನಲ್ಲಿದ್ದ ಗಿಡ ಶಾಶ್ವತವಾಗಿ ಭೂಮಿಯಲ್ಲಿ ನೆಲೆ ನಿಲ್ಲುತ್ತದೆ.
'ಈ ರೀತಿಯ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆ ಹಬ್ಬದ ಸಡಗರ ಶಾಶ್ವತವಾಗಿ ನೆನಪಿಸುವಂತೆ ಮಾಡಬಹುದಾಗಿದೆ. ಹಬ್ಬದ ಸಂಭ್ರಮದೊಂದಿಗೆ ಪರಿಸರ ಕ್ಕೂ ಕೊಡುಗೆ ನೀಡಲು ಸಾಧ್ಯವಾಗಲಿದೆ' ಎಂದು ಹೇಳುತ್ತಾರೆ ರಾಷ್ಟ್ರೀಯ ಪರಿಸರ ಆಸಕ್ತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಧರ್ ಶೆಟ್ಟಿ.












Click it and Unblock the Notifications