ಮಂಗಳೂರಿನಲ್ಲಿ ಗಾಂಜಾ ದಂಧೆ ಪ್ರಕರಣ: ಮೆಡಿಕಲ್ ವಿದ್ಯಾರ್ಥಿನಿಯರು ಸೇರಿದಂತೆ 10 ಜನರು ಸಿಸಿಬಿ ವಶಕ್ಕೆ
ಮಂಗಳೂರು, ಜನವರಿ, 11: ಗಾಂಜಾ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮೆಡಿಕಲ್ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ಹತ್ತು ಜನರನ್ನು ಸಿಸಿಬಿ ಪೊಲೀಸರು ಬಲೆಗೆ ಬೀಳಿಸಿದ್ದಾರೆ.
ಕಡಲ ನಗರಿ ಮಂಗಳೂರಿನ ಸಿಸಿಬಿ ಪೊಲೀಸರು ಬೃಹತ್ ಪ್ರಮಾಣದ ಗಾಂಜಾ ದಂಧೆಯನ್ನು ಬಹಿರಂಗಗೊಳಿಸಿದ್ದಾರೆ. ಪ್ರಕರಣದಲ್ಲಿ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಮೆಡಿಕಲ್ ವಿದ್ಯಾರ್ಥಿನಿಯರು, ವೈದ್ಯರು ಸೇರಿ ಕೆಲ ಪೆಡ್ಲರ್ಗಳು ಭಾಗಿಯಾಗಿದ್ದು, ಈಗಗಲೇ ಸಿಸಿಬಿ ಪೊಲೀಸರನ್ನು ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ನಗರದ ಪ್ರತಿಷ್ಠಿತ ಕೆ.ಎಂ.ಸಿ ಅತ್ತಾವರ, ಕೆ.ಎಂ.ಸಿ ಮಣಿಪಾಲ, ದೇರಳಕಟ್ಟೆಯ ಯೆನೇಪೋಯಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಮತ್ತು ವೈದ್ಯರು ಗಾಂಜಾ ದಂಧೆಯಲ್ಲಿ ಭಾಗಿಯಾಗಿರುವುದು ಬಹಿರಂಗಗೊಂಡಿದೆ. ಇದರಲ್ಲಿ ನಾಲ್ವರು ವೈದ್ಯಕೀಯ ವಿದ್ಯಾರ್ಥಿನಿಯರು, ಇಬ್ಬರು ವೈದ್ಯರು, ಇಬ್ಬರು ವಿದ್ಯಾರ್ಥಿಗಳು ಸೇರಿ ಒಟ್ಟು 10 ಜನರನ್ನು ಸಿಸಿಬಿ ಪೊಲೀಸರು ಬಲೆಗೆ ಬೀಳಿಸಿದ್ದಾರೆ.
MBBS ವಿದ್ಯಾರ್ಥಿನಿಯರು ಬಲೆಗೆ ಬಿದ್ದಿದ್ದು ಹೇಗೆ?
ಗಾಂಜಾ ಪೆಡ್ಲರ್ಗಳು, ವೈದ್ಯಕೀಯ ವಿದ್ಯಾರ್ಥಿನಿಯರು, ವೈದ್ಯರನ್ನು ವಶಕ್ಕೆ ಪಡೆಯಲಾಗಿದೆ. ಗಾಂಜಾ ಸೇವನೆ ಹಾಗೂ ಪೆಡ್ಲಿಂಗ್ ಪ್ರಕರಣದಲ್ಲಿ 10 ಜನರನ್ನು ಬಂಧಿಸಲಾಗಿದೆ. ಯು.ಕೆ ಮೂಲದ ಗಾಂಜಾ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜೀ (38) ಎಂಬುವವನು ನಗರದ ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿ ರೂಂ ಬಾಡಿಗೆ ಪಡೆದುಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದರು ಎನ್ನುವುದು ಗೊತ್ತಾಗಿದೆ. ಬಳಿಕ ಖಚಿತ ಮೇರೆಗೆ ಸಿಸಿಬಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಡ್ರಗ್ ಪೆಡ್ಲಿಂಗ್ ಪ್ರಕರಣದಲ್ಲಿ ರಾಮ್ ಜೀ ಅನ್ನು ವಶಕ್ಕೆ ಪಡೆದಾಗ ಮತ್ತಷ್ಟು ಬಯಾನಕ ವಿಚಾರಗಳು ಬಹಿರಂಗಗೊಂಡಿವೆ. ಈ ಮಾಹಿತಿ ಆಧಾರದಲ್ಲಿ ಜಾಡು ಹಿಡಿದ ಪೊಲೀಸರು ಮೆಡಿಕಲ್ ವಿದ್ಯಾರ್ಥಿನಿಯರು, ವೈದ್ಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಬಂಧಿಸಲಾದ ವಿದ್ಯಾರ್ಥಿಗಳ ವಿವರ
ವಿದ್ಯಾರ್ಥಿನಿಯರಾದ ಡಾ. ನದಿಯಾ ಸಿರಾಜ್ (24), ಡಾ.ವರ್ಷಿಣಿ ಪ್ರತಿ (26), ಡಾ.ರಿಯಾ ಚಡ್ಡ (22), ಡಾ.ಹೀರಾ ಬಸಿನ್ (23) ಹಾಗೂ ವೈದ್ಯ ಡಾ.ಸಮೀರ್ (32), ಮಣಿಮಾರನ್ ಮುತ್ತು (28), ಸ್ಥಳೀಯ ಮಹಮ್ಮದ್ ರವೂಪ್ ಅಲಿಯಾಸ್ ಗೌಸ್ (34) ಬಂಧಿಸಲಾಗಿದೆ. ವಿದ್ಯಾರ್ಥಿಗಳಾದ ಡಾ. ಭಾನು ದಹಿಯಾ (27), ಡಾ.ಕ್ಷಿತಿಜ್ ಗುಪ್ತ (23) ಇವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೆಯೇ ಇವರ ಬಳಿ ಇದ್ದ ಎರಡು ಕೆ.ಜಿ ಗಾಂಜಾ, ಒಂದು ನಕಲಿ ಪಿಸ್ತೂಲ್ ಮತ್ತು ಡ್ರ್ಯಾಗರ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ದಂಧೆಯಲ್ಲಿ ಬಂಧಿತನಾದ ಪ್ರಮುಖ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜೀ (38) ಯು.ಕೆ ಪ್ರಜೆಯಾಗಿದ್ದು, ಈತನಿಗೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಾರಿಪಳ್ಳದ ಮಹಮ್ಮದ್ ರವೂಪ್ ಅಲಿಯಾಸ್ ಗೌಸ್ (34) ಸಾಥ್ ನೀಡಿದ್ದ ಎನ್ನುವುದು ಬಹಿರಂಗಗೊಂಡಿದೆ. ಈ ಇಬ್ಬರು ಖತರ್ನಾಕ್ಗಳು ಸೇರಿಕೊಂಡು ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ವೈದ್ಯರನ್ನೇ ಗುರಿಯಾಗಿಸಿಕೊಂಡಿದ್ದರು. ಅದರಲ್ಲೂ ನಾಲ್ವರು ವಿದ್ಯಾರ್ಥಿನಿಯರು ಬಂಧನ ಆಗಿರುವುದು ಕೂಡ ಇದೀಗ ಎಲ್ಲೆಡೆ ಆತಂಕ ಸೃಷ್ಟಿಸಿದೆ.
ದಂಧೆಯಲ್ಲಿ ಭಾಗಿಯಾದವರ ಉದ್ಯೋಗದ ವಿವರ
ಕೇರಳ ಮೂಲದ ಡಾ. ನದಿಯಾ ಸಿರಾಜ್ (24) ಕೆ.ಎಂ.ಸಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಇಂಟರ್ನಿ ಆಗಿದ್ದಳು. ಇನ್ನು ಆಂಧ್ರ ಪ್ರದೇಶದ ಡಾ.ವರ್ಷಿಣಿ ಪ್ರತಿ (26) ಕೆ.ಎಂ.ಸಿ ಮೆಡಿಕಲ್ ಕಾಲೇಜಿನಲ್ಲಿ MBBS ಇಂಟರ್ನಿ ಆಗಿದ್ದಳು. ಪಂಜಾಬ್ ಮೂಲದ ಡಾ.ರಿಯಾ ಚಡ್ಡ (22) ಕೆ.ಎಂ.ಸಿ ಡೆಂಟಲ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಬಿಡಿಎಸ್ ಶಿಕ್ಷಣ ಪಡೆಯುತ್ತಿದ್ದಳು. ಪುಣೆಯ ಡಾ.ಹೀರಾ ಬಸಿನ್ ಕೆ.ಎಂ.ಸಿ ಮೆಡಿಕಲ್ ಕಾಲೇಜಿನ ನಾಲ್ಕನೇ ವರ್ಷದ MBBS ವಿದ್ಯಾರ್ಥಿನಿ ಆಗಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಾಗೆಯೇ ಕೇರಳ ಮೂಲದ ವೈದ್ಯ ಡಾ.ಸಮೀರ್ (32) ಕೆ.ಎಂ.ಸಿ ಆಸ್ಪತ್ರೆಯ ಮೆಡಿಕಲ್ ಅಧಿಕಾರಿ ಆಗಿದ್ದು, ತಮಿಳುನಾಡಿನ ಮಣಿಮಾರನ್ ಮುತ್ತು (28) ಕೆ.ಎಂ.ಸಿ ಆಸ್ಪತ್ರೆಯ ವೈದ್ಯನಾಗಿದ್ದಾನೆ. ಜೊತೆಗೆ ವಿದ್ಯಾರ್ಥಿಗಳಾದ ಪಂಜಾಬ್ನ ಡಾ. ಭಾನು ದಹಿಯಾ (27) ದೇರಳಕಟ್ಟೆಯ ಯೆನೇಪೋಯಾ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿ ಆಗಿದ್ದಾನೆ. ಮತ್ತು ದೆಹಲಿ ಮೂಲದ ಡಾ.ಕ್ಷಿತಿಜ್ ಗುಪ್ತ (23) ಕೆ.ಎಂ.ಸಿಯ ವೈದ್ಯ ವಿದ್ಯಾರ್ಥಿ ಆಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.