Breaking News: ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ ಸಾವು, ನದಿಯಲ್ಲಿ ಶವ ಪತ್ತೆ
ಮಂಗಳೂರು, ಅಕ್ಟೋಬರ್ 07: ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ ಮುಮ್ತಾಜ್ ಅಲಿ (52) ನಾಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಸೋಮವಾರ ಬೆಳಗ್ಗೆ ಅವರ ಶವ ನದಿಯಲ್ಲಿ ಪತ್ತೆಯಾಗಿದೆ. ಭಾನುವಾರ ಮುಂಜಾನೆ ಮಂಗಳೂರು ನಗರದ ಕೂಳೂರಿನ ಸೇತುವೆ ಮೇಲೆ ಮುಮ್ತಾಜ್ ಅಲಿ ಕಾರು ಪತ್ತೆಯಾಗಿತ್ತು, ಅವರು ನಾಪತ್ತೆಯಾಗಿದ್ದರು. ನಾಪತ್ತೆ ಪ್ರಕರಣದ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಓರ್ವ ಮಹಿಳೆ ಸೇರಿದಂತೆ 6 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸೋಮವಾರ ಬೆಳಗ್ಗೆ ಕೂಳೂರಿನ ಸೇತುವೆ ಸಮೀಪ ಉದ್ಯಮಿ ಮುಮ್ತಾಜ್ ಅಲಿ ಶವ ಪತ್ತೆಯಾಗಿದೆ. ಪೊಲೀಸರು ಶವವನ್ನು ವಶಕ್ಕೆ ಪಡೆದುಕೊಂಡು ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ. ಅವರು ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಎಂದು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಉದ್ಯಮಿ ಮುಮ್ತಾಜ್ ಅಲಿ ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಮನೆಯಿಂದ ಹೊರಟಿದ್ದರು. ಅವರಿಗೆ ಸೇರಿದ ಬಿಎಂಡಬ್ಲ್ಯು ಕಾರು ಡ್ರೈವರ್ ಭಾಗದಲ್ಲಿ ಅಪಘಾತವಾದ ಸ್ಥಿತಿಯಲ್ಲಿ 5 ಗಂಟೆಗೆ ಕೂಳೂರಿನ ಸೇತುವೆ ಮೇಲೆ ಪತ್ತೆಯಾಗಿತ್ತು. ಆದ್ದರಿಂದ ನದಿಗೆ ಹಾರಿರುವ ಶಂಕೆಯಿಂದ ಪೊಲೀಸರು, ಎಸ್ಡಿಆರ್ಎಫ್, ಎನ್ಡಿಆರ್ಎಫ್, ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯವನ್ನು ಆರಂಭಿಸಿದ್ದರು.
ತಣ್ಣೀರುಬಾವಿಯ ಮುಳುಗು ತಜ್ಞರ ತಂಡ ಸೋಮವಾರ ಬೆಳಗ್ಗೆ ಶವವನ್ನು ಪತ್ತೆ ಹಚ್ಚಿದೆ. ಸುಮಾರು 28 ಗಂಟೆಗಳ ಕಾರ್ಯಾಚರಣೆ ಬಳಿಕ ಮುಮ್ತಾಜ್ ಅಲಿ ಶವ ಪತ್ತೆಯಾಗಿದೆ. ಮುಮ್ತಾಜ್ ಅಲಿ ನದಿಗೆ ಹಾರಿದ್ದಾರೆ ಎಂದು ಭಾನುವಾರವೇ ಶಂಕಿಸಲಾಗಿತ್ತು. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅರ್ಗವಾಲ್ ಸಹ ಈ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ನದಿಯಲ್ಲಿ ಹುಡುಕಾಟವನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದರು.
ಹಣಕ್ಕಾಗಿ ಬೇಡಿಕೆ, ಬ್ಲಾಕ್ ಮೇಲ್: ಮುಮ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮುಮ್ತಾಜ್ ಅಲಿ ಅವರನ್ನು ನಿರಂತರವಾಗಿ ಬೆದರಿಸಿ, ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ, ಲಕ್ಷಾಂತರ ರೂಪಾಯಿ ಹಣವನ್ನು ಪಡೆದುಕೊಂಡಿದ್ದಾರೆ ಎಂದು ಮಹಿಳೆ ಸೇರಿದಂತೆ 6 ಮಂದಿಯ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೈದರ್ ಅಲಿ ಎಂಬುವವರು ನೀಡಿದ ದೂರಿನ ಅನ್ವಯ ಕಾವೂರು ಪೊಲೀಸರು ಆರು ಜನರ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಾಫಾ, ಶುಐಬ್, ಸಿರಾಜ್ ಎಂಬುವವರ ವಿರುದ್ಧ ಎಫ್ಐಆರ್ ಆಗಿದೆ.
ಮುಮ್ತಾಜ್ ಅಲಿ ಹಲವು ವರ್ಷಗಳಿಂದ ಸಮಾಜ ಸೇವೆ, ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಅವರ ಪ್ರಸಿದ್ದಿ ಹಾಳು ಮಾಡಲು ಆರೋಪಿಗಳು ಸೇರಿಕೊಂಡು ಷಡ್ಯಂತ್ರ ರೂಪಿಸಿ ಮುಮ್ತಾಜ್ ಅಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
2024ರ ಜುಲೈ ಬಳಿಕ ಮುಮ್ತಾಜ್ ಅಲಿ ಬಳಿ ಬೆದರಿಸಿ 50 ಲಕ್ಷಕ್ಕಿಂತಲೂ ಹೆಚ್ಚಿನ ಹಣ ಸುಲಿಗೆ ಮಾಡಿದ್ದಾರೆ. 25 ಲಕ್ಷ ರೂ.ಗಳನ್ನು ಚೆಕ್ ಮೂಲಕವೇ ಪಡೆದಿದ್ದಾರೆ. ಮುಮ್ತಾಜ್ ಅಲಿ ಮೇಲೆ ದೈಹಿಕವಾಗಿಯೂ ಹಲ್ಲೆ ಮಾಡಲಾಗಿದೆ. ರಾಜಕೀಯವಾಗಿಯೂ ಅವರನ್ನು ಮುಗಿಸಲು ಸಂಚು ರೂಪಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ದೂರಿನಲ್ಲಿ ವಿವರಣೆ ನೀಡಲಾಗಿದೆ.












Click it and Unblock the Notifications