ಕೇರಳದಲ್ಲಿ ಗಡಿನಾಡ ಕನ್ನಡಿಗರ ಧ್ವನಿಯಾಗಿದ್ದ ಚೆರ್ಕಳಂ ಅಬ್ದುಲ್ಲ ಇನ್ನಿಲ್ಲ
ಮಂಗಳೂರು ಜುಲೈ 27: ಕೇರಳ ವಿಧಾನಸಭೆಯಲ್ಲಿ ಕನ್ನಡದ ಕಹಳೆ ಮೊಳಗಿಸಿದ್ದ ಮಂಜೇಶ್ವರ ಮಾಜಿ ಶಾಸಕ ಚೆರ್ಕಳಂ ಅಬ್ದುಲ್ಲ ಇಂದು ವಿಧಿವಶರಾಗಿದ್ದಾರೆ. ಇಂದು ಮುಂಜಾನೆ ಅವರು ತಮ್ಮ ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಕೆಲದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಚೆರ್ಕಳಂ ಅಬ್ದುಲ್ಲ ಇಂದು ಮುಂಜಾನೆ ವಿಧವಶರಾದರು.
1987ರಿಂದ ಮೊದಲ್ಗೊಂಡು 2006ರ ತನಕ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. 2001ರಿಂದ2004ರ ತನಕ ಕೇರಳ ರಾಜ್ಯದ ಸ್ಥಳಿಯಾಡಳಿತ ಖಾತೆ ಸಚಿವರಾಗಿ ಜನ ಮನ್ನಣೆ ಗಳಿಸಿದ್ದ ಇಂಡಿಯನ್ ಮುಸ್ಲಿಂ ಲೀಗ್ ನ ಹಿರಿಯ ಮುಖಂಡ ಹಾಜೀ ಚೆರ್ಕಳಂ ಅಬ್ದುಲ್ಲ ಇನ್ನು ನೆನಪು ಮಾತ್ರ.
ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಅಣ್ಣ ನಿಧನ
ಅಭಿವೃದ್ಧಿಯಿಂದ ಹಿಂದುಳಿದಿದ್ದ ಮಂಜೇಶ್ವರವನ್ನು ಕೇರಳ ರಾಜ್ಯದ ಅಭಿವೃದ್ಧಿಯ ಭೂಪಟದಲ್ಲಿ ಗೋಚರಿಸುವಂತೆ ಮಾಡಿದ ಸಾಧನೆ ಚೆರ್ಕಳಂ ಅಬ್ದುಲ್ಲರಿಗೆ ಸಲ್ಲುತ್ತದೆ. ಗಡಿನಾಡಿನ ಕನ್ನಡಿಗರ ಆಶಾಕಿರಣವಾಗಿ ಮೂಡಿದ್ದ ಚೆರ್ಕಳಂ ಅಬ್ದುಲ್ಲ ಅವರು 2001ರಲ್ಲಿ ಎ.ಕೆ.ಆಂಟನಿ ಅವರ ಸಚಿವ ಸಂಪುಟದಲ್ಲಿ ಸ್ಥಳಿಯಾಡಳಿತ ಖಾತೆ ಸಚಿವರಾಗಿ ಕನ್ನಡ ದಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಕೇರಳದ ಗಡಿನಾಡ ಕನ್ನಡಿಗರ ಹೃದಯ ಸ್ಪರ್ಶಿಸಿದ್ದರು.
ಕೇರಳ ರಾಜ್ಯದಲ್ಲಿ ಕನ್ನಡಿಗರ ಪರ ಧ್ವನಿಯಾಗಿದ್ದ ಚೆರ್ಕಳಂ ಅಬ್ದುಲ್ಲ ಕೇರಳ ವಿಧಾನಸಭೆಯಲ್ಲಿ ಸದಾ ಕನ್ನಡದ ಕಂಪು ಬೀರುತ್ತಿದ್ದವರು. ಚೆರ್ಕಳಂ ಅಬ್ದುಲ್ಲ ಅವರ ನಿಧನದ ಶೋಕಾರ್ಥ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.