ರಸ್ತೆ, ಚರಂಡಿ ಸಣ್ಣಪುಟ್ಟ ಸಮಸ್ಯೆ ಬಿಟ್ಟು, ಲವ್ ಜಿಹಾದ್ ವಿರುದ್ಧ ಹೋರಾಡಿ: ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್
ಮಂಗಳೂರು, ಜ. 03: ರಾಜ್ಯದಲ್ಲಿ ರಸ್ತೆ ಗುಂಡಿಗಳು, ಅಸಮರ್ಪಕ ಚರಂಡಿ ನಿರ್ಮಾಣಗಳಿಂದ ಬಲಿಯಾದವರು ಅದೇಷ್ಟೋ ಮಂದಿ. ಇಂದಿಗೂ ಮಳೆಗಾಲ ಶುರುವಾದರೇ ರಸ್ತೆ ಗುಂಡಿಗಳಿಗೆ ಒಬ್ಬರಲ್ಲ ಒಬ್ಬರು ಬಲಿಯಾಗುತ್ತಲೇ ಇದ್ದಾರೆ. ರಸ್ತೆ ಗುಂಡಿಗಳು, ತೆರೆದ ಚರಂಡಿಗಳು ದೊಡ್ಡ ಸಮಸ್ಯೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮ ಕಾರ್ಯಕರ್ತರಿಗೆ ಈ ಸಮಸ್ಯೆಗಳನ್ನು ಬಿಟ್ಟು ಲವ್ ಜಿಹಾದ್ ಬಗ್ಗೆ ಹೋರಾಡುವಂತೆ ಕರೆ ನೀಡಿದ್ದಾರೆ.
ಹೌದು, ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಲೋಕಸಭಾ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ವಿವಾದಿತ ಹೇಳಿಕೆ ನೀಡಿದ್ದು, ' ಪಕ್ಷದ ಕಾರ್ಯಕರ್ತರು ಲವ್ ಜಿಹಾದ್ ವಿಷಯದ ವಿರುದ್ಧ ಹೋರಾಡಬೇಕೇ ಹೊರತು ರಸ್ತೆ ಮತ್ತು ಚರಂಡಿ ಸಮಸ್ಯೆಗಳ ಬಗ್ಗೆ ಅಲ್ಲ' ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.
ಮುಂದಿನ ಚುನಾವಣೆಯೊಳಗೆ ಸಿದ್ಧರಾಮಯ್ಯ ಜೈಲು ಪಾಲು: ನಳಿನ್ ಕುಮಾರ್ ಕಟೀಲ್ ಭವಿಷ್ಯ
ಮಂಗಳೂರಿನ 'ಬೂತ್ ವಿಜಯ ಅಭಿಯಾನ'ದಲ್ಲಿ ಸೋಮವಾರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಂಸದರು ಈ ವಿವಾದಿತ ಹೇಳಿಕೆ ನೀಡಿದ್ದಾರೆ.
'ರಸ್ತೆ, ಮೋರಿ ಮತ್ತು ಚರಂಡಿಯಂತಹ ಸಣ್ಣ ಸಮಸ್ಯೆಗಳ ಬಗ್ಗೆ ಮಾತನಾಡಬೇಡಿ. ವಿಧಾನಸೌಧದೊಳಗೆ ವೇದವ್ಯಾಸರು ಹೋದಾಗ ಕೈ ಎತ್ತಲಿಲ್ಲ ಎಂದು ಚರ್ಚೆ ಮಾಡಬೇಡಿ. ನಳಿನ್ ಕುಮಾರ್ ಅವರಿಗೆ ವಿಷಯ ಎತ್ತುವ ಹಕ್ಕು ಇಲ್ಲ ಎಂದು ಹೇಳಬೇಡಿ. ನಳಿನ್ ಕುಮಾರ್ ಕಟೀಲ್ ಅವರ ಹಕ್ಕುಗಳಿಂದ ನಿಮಗೆ ಬಂಗಾರ ಸಿಗುವುದಿಲ್ಲ. ನೀವು ನಿಮ್ಮ ಮಕ್ಕಳ ಬದುಕಿನ ಪ್ರರ್ಶನೆ ಲವ್ ಜಿಹಾದ್. ಅದನ್ನು ನಿಲ್ಲಿಸಬೇಕಿದ್ದರೇ ಭಾರತೀಯ ಜನತಾ ಪಕ್ಷ ಬೇಕು. ಲವ್ ಜಿಹಾದ್ ತೊಲಗಲು ಭಾರತೀಯ ಜನತಾ ಪಕ್ಷ ಬೇಕು" ಎಂದು ಆಕ್ರೋಶ ಭರಿತ ಭಾಷಣ ಮಾಡಿದ್ದಾರೆ.
‘So I am asking you people don't speak about SMALL issues like road and sewage.. If your worried of your children’s future and if you want to stop Love jihad,then we need BJP for that. To get rid of Love Jihad, we need BJP’:BJP Karnataka president: Naleen Kateel. Priorities set? pic.twitter.com/QnM39usrlW
— Rajdeep Sardesai (@sardesairajdeep) January 3, 2023
ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
"ಇದು ತೀರಾ ಕೀಳುಮಟ್ಟದ್ದು. ಅವರು ಅಭಿವೃದ್ಧಿಯನ್ನು ನೋಡುತ್ತಿಲ್ಲ, ದ್ವೇಷವನ್ನು ನೋಡುತ್ತಿದ್ದಾರೆ. ದೇಶವನ್ನು ವಿಭಜಿಸುತ್ತಾರೆ. ಕೇವಲ ಭಾವನೆಗಳ ಬಗ್ಗೆ ಮಾತನಾಡುತ್ತಾರೆ. ನಾವು ಅಭಿವೃದ್ಧಿಯ ಬಗ್ಗೆ ಜನರೊಂದಿಗೆ ಮಾತನಾಡುತ್ತೇವೆ ಮತ್ತು ಅವರ ಹೊಟ್ಟೆ ತುಂಬಿಸುತ್ತೇವೆ. ನಾವು ಉದ್ಯೋಗ ಸೃಷ್ಟಿಯನ್ನು ಬಯಸುತ್ತೇವೆ, ಬೆಲೆಗಳು ಏರಿಕೆಯಾಗಬಾರದು ಎಂದು ಬಯಸುತ್ತೇವೆ. ಜನ ಸಾಮಾನ್ಯರಿಗೆ ಸಮಸ್ಯೆಯಾಗಬಾರದು ಎಂದು ಬಯಸುತ್ತಿದ್ದೇವೆ" ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, 'ನಳಿನ್ ಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಸತ್ಯವನ್ನೇ ಹೇಳಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಬಿಜೆಪಿ ಏನೂ ಮಾಡಿಲ್ಲ. ಜನರು ಬಯಸಿದ ಕೆಲಸ ಮಾಡಲು ಆಗದಿದ್ದಾಗ, ಕೋಮು ಸಮಸ್ಯೆಗಳ ಕಡೆಗೆ ತಿರುಗುತ್ತಾರೆ. ಮಂಗಳೂರಿನಲ್ಲಿ ಶಾಂತಿ ಕದಡಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.