ಉಕ್ಕಿಹರಿಯುತ್ತಿದ್ದಾಳೆ ನೇತ್ರಾವತಿ 100ಕ್ಕೂ ಹೆಚ್ಚು ಮನೆಗಳು ಜಲಾವೃತ
ಮಂಗಳೂರು ಆಗಸ್ಟ್ 10: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 5 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಇಂದು ಕೂಡ ಭಾರೀ ಮಳೆ ಮುಂದುವರೆದಿದೆ. ಜಿಲ್ಲೆಯ ಜೀವ ನದಿ ಎಂದೇ ಕರೆಯಲಾಗುವ ನೇತ್ರಾವತಿ ಉಗ್ರ ರೂಪತಾಳಿದ್ದಾಳೆ. ಈ ಪರಿಣಾಮ ಬಂಟ್ಳಾಳ ಸೇರಿದಂತೆ ನದಿ ತೀರದ ಮನೆಗಳಿಗೆ ನೀರು ನುಗ್ಗಿದೆ.
ಬಂಟ್ವಾಳದಲ್ಲಿ 100ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ. ತಡರಾತ್ರಿ ನೇತ್ರಾವತಿ ನೀರಿನ ಮಟ್ಟ 11.6 ಮೀಟರ್ ಮುಟ್ಟಿದ್ದು ನದಿ ತೀರದ 58 ಮನೆಗಳು ಜಲಾವೃತಗೊಂಡಿದ್ದವು. ಬೆಳ್ತಂಗಡಿ ಸಹಿತ ಘಟ್ಟಪ್ರದೇಶಗಳಲ್ಲಿ ಇಂದು ಭಾರೀ ಮಳೆಯಾಗುತ್ತಿರುವ ಪರಿಣಾಮ ಬಂಟ್ವಾಳ ತಾಲೂಕಿನ ಕೆಲ ಪ್ರದೇಶ ಹಾಗೂ ನೆರೆ ನೀರು ನುಗ್ಗಿದೆ. ಅಜಿಲಮೊಗರು, ನಾವೂರು, ಬಂಟ್ವಾಳ ಸಮೀಪದ ಜಕ್ರಿಬೆಟ್ಟು, ಕಡೇಶಿವಲಾಯ, ಬಡ್ಡಕಟ್ಟೆ, ವಿ.ಪಿ.ರಸ್ತೆ, ಕಂಚಿಕಾರಪೇಟೆ, ಬಸ್ತಿಪಡ್ಪು, ಭಂಡಾರಿಬೆಟ್ಟು, ನಂದರಬೆಟ್ಟು, ಬ್ರಹ್ಮರಕೊಟ್ಲು ಹಾಗೂ ಬರಿಮಾರು-ಬುಡೋಳಿ ಸಂಪರ್ಕ ರಸ್ತೆ ಮೊದಲಾದೆಡೆ ನೀರಿನಿಂದ ಮುಳುಗಡೆಯಾಗಿದೆ.

ಕಳೆದ 2 ದಿನಗಳಿಂದ ಮುಳುಗಡೆ ಪ್ರದೇಶದ ಸುಮಾರು 300ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬಂಟ್ವಾಳ ಪ್ರವಾಸಿ ಮಂದಿರ, ಪಾಣೆಮಂಗಳೂರು ಪ್ರೌಢಶಾಲೆಯಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಬಂಟ್ವಾಳ ಬಡ್ಡಕಟ್ಟೆ ಮೀನು ಮಾರ್ಕೆಟ್, ಬಸ್ ತಂಗುದಾಣ ಪ್ರದೇಶ, ಆಲಡ್ಕ, ಜಕ್ರಿಬೆಟ್ಟು, ಬಸ್ತಿಪಡ್ಪ ಬಳಿ ಕೇಂದ್ರದ ಮಾಜಿ ಹಾಗು ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ದನ ಪೂಜಾರಿ ಅವರ ಮನೆಗೂ ನೇತ್ರಾವತಿ ನದಿ ನೀರು ನುಗ್ಗಿದ್ದು ಅವರನ್ನು ಎನ್ ಡಿ ಆರ್ ಎಫ್ ತಂಡ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸೇರಿದಂತೆ ಜಿಲ್ಲೆಯ ಇತರ ಹಿರಿಯ ಅಧಿಕಾರಿಗಳು ಹಾಗು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳದಲ್ಲಿಯೇ ಮೊಕ್ಕಾಂ ಹೂಡಿದ್ದು ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.











Click it and Unblock the Notifications