ಮಂಗಳೂರು: ಇಬ್ಬರು ಆರೋಪಿಗಳ ಮೇಳೆ ಪೊಲೀಸರಿಂದ ಬೆಳ್ಳಂಬೆಳಗ್ಗೆ ಫೈರಿಂಗ್
ಮಂಗಳೂರು, ಜೂ.11: ಮಂಗಳೂರು ಪೊಲೀಸರು ಬೆಳ್ಳಂಬೆಳಗ್ಗೆ ಫೈರಿಂಗ್ ನಡೆಸಿದ್ದಾರೆ. ಇತ್ತೀಚೆಗೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರೌಡಿ ಶೀಟರ್ ರಾಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವ ವೇಳೆಯಲ್ಲಿ ಆರೋಪಿಗಳು ಪೊಲೀಸರ ಮೇಲೆ ದಾಳಿ ಮಾಡಿದ್ದು, ಈ ವೇಳೆ ಪೊಲೀಸರು ಆರೋಪಿಗಳ ಮೇಲೆ ಫೈರ್ ಮಾಡಿದ್ದಾರೆ.
ಮಂಗಳೂರು ನಗರ ಹೊರವಲಯದ ಗ್ಲೋಬಲ್ ಹೆರಿಟೇಜ್ ಲೇಔಟ್ ನಲ್ಲಿ ಘಟನೆಯಯಾಗಿದ್ದು, ರಾಜಾ ಕೊಲೆ ಆರೋಪಿಗಳಾದ ಅರ್ಜುನ್ ಮೂಡುಶೆಡ್ಡೆ ಮತ್ತು ಮನೋಜ್ ಯಾನ್ ಬಿಂದಾಸ್ ಮನೋಜ್ ಈ ಲೇಔಟ್ ನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿದೆ.
ಮೂವರು ಸಿಸಿಬಿ ಪೊಲೀಸರಿಗೆ ಗಾಯ
ಈ ವೇಳೆ ಪೊಲೀಸರು ಮತ್ತು ಆರೋಪಿಗಳ ನಡುವೆ ಘರ್ಷಣೆಯಾಗಿದ್ದು,ಆರೋಪಿಗಳು ಹರಿತವಾದ ಆಯುಧದಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಮೂವರು ಸಿಸಿಬಿ ಪೊಲೀಸರಿಗೆ ಗಾಯವಾಗಿದೆ.ಆರೋಪಿಗಳು ಹರಿತವಾದ ಆಯುಧ ಬಳಸುತ್ತಿದ್ದಂತೆಯೇ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಆರೋಪಿಗಳ ಮೇಲೆ ಫೈರ್ ಮಾಡಿದ್ದಾರೆ. ಒಟ್ಟು ಐದು ಸುತ್ತು ಫೈರ್ ಆಗಿದ್ದು ಮೂರು ಸುತ್ತು ಗಾಳಿಯಲ್ಲಿ ಗುಂಡು ಮತ್ತು ಎರಡು ಸುತ್ತು ಇಬ್ಬರು ಆರೋಪಿಗಳ ಕಾಲಿಗೆ ಫೈರ್ ಮಾಡಿದ್ದಾರೆ.
ಘಟನೆಯಲ್ಲಿ ಸಿಸಿಬಿ ಪಿಎಸ್ಐ ನಾಗೇಂದ್ರ,ಸಿಸಿವಿ ಎಎಚ್ ಸಿ ಸಂತೋಷ್, ಎಎಸ್ಐ ಡೇವಿಡ್ ಎಂಬುವವರಿಗೆ ಕೈಗೆ ಮತ್ತು ಮುಖದ ಭಾಗಕ್ಕೆ ಗಾಯವಾಗಿದೆ. ಗಾಯಾಳು ಪೊಲೀಸರನ್ನು ಸುರತ್ಕಲ್ ನ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಘವೇಂದ್ರನ ಕೊಲೆಯ ಪ್ರತೀಕಾರಕ್ಕಾಗಿ ಹಲ್ಲೆ
Recommended Video
ಜೂನ್ ಆರರಂದು ಪಣಂಬೂರು ಸಮೀಪ ರೌಡಿ ಶೀಟರ್ ರಾಜಾ@ರಾಘವೇಂದ್ರ(28) ಕೊಲೆಯಾಗಿತ್ತು. ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು.ಆಸ್ಪತ್ರೆ ಗೆ ಸೇರಿಸುವಷ್ಟರಲ್ಲಿ ರಾಜಾ ಸಾವನ್ನಪ್ಪಿದ್ದ. ಬೈಕ್ ನಲ್ಲಿ ಬಂದು ಹಲ್ಲೆ ನಡೆಸಿ ಪರಾರಿಯಾದ ಆರೋಪಿಗಳ ಬಗ್ಗೆ ರಾಜಾ ಪೊಲೀಸರಿಗೆ ಮಾಹಿತಿ ನೀಡಿದ್ದ. ಗಂಭೀರವಾಗಿ ಗಾಯವಾದರೂ ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಬಿದ್ದಿದ್ದ ರಾಜಾ ನ ಬಳಿ ಸ್ಥಳೀಯರು ಸಹಾಯಕ್ಕೆ ಬಾರದ ಹಿನ್ನಲೆಯಲ್ಲಿ ರಾಜಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಎರಡು ಕೊಲೆ ಪ್ರಕರಣದ ಆರೋಪಿಯಾಗಿದ್ದ ರಾಜಾ ಅಲಿಯಾಸ್ ರಾಘವೇಂದ್ರನ ಮೇಲೆ ಕೊಲೆಯ ಪ್ರತೀಕಾರಕ್ಕಾಗಿ ಹಲ್ಲೆ ಮಾಡಲಾಗಿತ್ತು.