ಮಂಗಳೂರು: ಫೇಲಾಗಿದ್ದಕ್ಕೆ ನೊಂದ ವಿದ್ಯಾರ್ಥಿ ಆತ್ಮಹತ್ಯೆ
ಮಂಗಳೂರು, ಮೇ.20: ಒಂದಲ್ಲ ಎರಡಲ್ಲ ಸುಮಾರು 6 ಸಬ್ಜೆಕ್ಟ್ ಬ್ಯಾಕ್ ಇಟ್ಟುಕೊಂಡಿದ್ದ ವಿದ್ಯಾರ್ಥಿಯೊಬ್ಬ, ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಜಾರುವಿನಲ್ಲಿ ಸಂಭವಿಸಿದೆ. ಇಲ್ಲಿನ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ನಪಾಸಾಗಿದ್ದಕ್ಕೆ ಬೇಸರಗೊಂಡು ಖ್ವಾರಿಯ ಹೊಂಡಕ್ಕೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.
ಮೃತಪಟ್ಟ ಯುವಕನನ್ನು ಶಿಶಿಲದ ಕೊಕ್ಕಡ ನಿವಾಸಿ 25 ವರ್ಷ ವಯಸ್ಸಿನ ಶಶಿಕುಮಾರ್ ಎಂದು ಗುರುತಿಸಲಾಗಿದೆ. ಬಜ್ಪೆ ಬಳಿಯ ಕೆಂಜಾರುವಿನ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ. ಶಶಿಕುಮಾರ್ ಅವರ ತಂದೆ ಶಿವಕುಮಾರ್ ಅವರು ಶಿಶಿಲದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಕರಂಬೂರು ಬಳಿ ಬಾಡಿಗೆ ಮನೆ ಮಾಡಿಕೊಂಡು ಇನ್ನಿಬ್ಬರು ಸ್ನೇಹಿತರೊಡನೆ ಶಿವಕುಮಾರ್ ವಾಸವಾಗಿದ್ದ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ನಡೆದ ಇಂಟರ್ನಲ್ಸ್ ನಲ್ಲಿ ಫೇಲ್ ಆಗಿದ್ದ ಶಶಿಕುಮಾರ್ ಮೊದಲೆರಡು ವರ್ಷಗಳ ಪರೀಕ್ಷೆಯಲ್ಲೂ ಉತ್ತಮ ಶ್ರೇಣಿ ಪಡೆಯುವಲ್ಲಿ ವಿಫಲನಾಗಿದ್ದ. ಒಟ್ಟಾರೆ ಆರು ವಿಷಯಗಳಲ್ಲಿ ಫೇಲ್ ಆಗಿದ್ದ ಎಂದು ತಿಳಿದು ಬಂದಿದೆ. ಈ ಮುಂಚೆ ರೂಮಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಶಶಿಕುಮಾರ್ ನನ್ನು ರೂಮ್ ಮೇಟ್ ಗಳು ಬಚಾವ್ ಮಾಡಿದ್ದರು.
ಆದರೆ, ಗೆಳೆಯರ ಕಣ್ತಪ್ಪಿಸಿ ರೂಮಿನಿಂದ ಹೊರ ಬಿದ್ದ ಶಶಿಕುಮಾರ್ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಆತನ ತಂದೆಗೆ ಗೆಳೆಯರು ವಿಷಯ ತಿಳಿಸಿದ್ದರು. ಕ್ವಾರಿ ಬಳಿ ಆತ ಹೆಚ್ಚು ಕಾಲ ಕಳೆಯುತ್ತಿದ್ದ, ಪರೀಕ್ಷೆ ಅಲ್ಲೆ ಕುಳಿತು ಓದಿಕೊಳ್ಳುತ್ತಿದ್ದ ಎಂಬುದನ್ನು ಅರಿತು ಎಲ್ಲರೂ ಕ್ವಾರಿ ಬಳಿ ಹೋಗಿ ನೋಡಿದಾಗ ಶಶಿಕುಮಾರ್ ದೇಹ ಹೆಣವಾಗಿ ತೇಲುತ್ತಿರುವುದು ಕಂಡು ಬಂದಿದೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ. ಸಾಂದರ್ಭಿಕ ಸಾಕ್ಷಿಗಳ ಪ್ರಕಾರ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ನೊಂದು ಈ ರೀತಿ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ, ತನಿಖೆ ಮುಂದುವರೆದಿದೆ ಎಂದು ಬಜ್ಪೆ ಠಾಣೆ ಪೊಲೀಸರು ಹೇಳಿದ್ದಾರೆ.












Click it and Unblock the Notifications