ಡಿವಿ ಸದಾನಂದ ಗೌಡರಿಗೂ ತಟ್ಟಿದ ಹಳೆ ನೋಟಿನ ಬಿಸಿ
ಮಂಗಳೂರು, ನವೆಂಬರ್ 22 : ಹಳೆಯ ನೋಟುಗಳ ಬಿಸಿ ಶ್ರೀಸಾಮಾನ್ಯರಿಗೆ ಮಾತ್ರವಲ್ಲ ಸ್ವತಃ ಕೇಂದ್ರ ಸಚಿವರಿಗೂ ತಟ್ಟಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಕೇಂದ್ರ ಕಾನೂನು ಸಚಿವ ಡಿವಿ ಸದಾನಂದ ಗೌಡರೇ ನೋಟಿನ ಬಿಸಿ ಅನುಭವಿಸಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಸಹೋದರ ಡಿ.ವಿ ಭಾಸ್ಕರ್ ಮಂಗಳವಾರ ಮೃತಪಟ್ಟರು. ಆದರೆ ಆಸ್ಪತ್ರೆಯವರು ಹಳೆ ನೋಟು ಸ್ವೀಕರಿಸುವುದಿಲ್ಲ ಎಂಬ ಕಾರಣಕ್ಕೆ ಮೃತದೇಹವನ್ನು ಪರಿವಾರಕ್ಕೆ ನೀಡಿರಲಿಲ್ಲ ಚೆಕ್ ನೀಡಿದ ಬಳಿಕ ದೇಹವನ್ನು ಒಪ್ಪಿಸಿದ್ದಾರೆ.
ಭಾಸ್ಕರ್ ವಕೀಲರಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದರು. ಕೆಲ ವರ್ಷಗಳ ಬಳಿಕ ವೃತ್ತಿಯನ್ನು ಬಿಟ್ಟು ಕೃಷಿಯಲ್ಲಿ ತೊಡಗಿಕೊಂಡಿದ್ದರು. ಅನಾರೋಗ್ಯದ ಹಿನ್ನೆಲೆ ಅವರು ನಗರದ ಕೆಎಮ್ ಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರ ಗುಂಡ ವೆಂಕಪ್ಪ ಗೌಡ ಹಾಗೂ ಕಮಲಮ್ಮ ಅವರ ಮೂರನೆ ಪುತ್ರನಾಗಿರುವ ಭಾಸ್ಕರ್ ಕಾಮಾಲೆ ರೋಗಕ್ಕೆ ತುತ್ತಾಗಿ 15 ದಿನಗಳಿಂದ ಆಸ್ಪತ್ರೆಯಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟರು.
ಸದಾನಂದ ಗೌಡರ ತಮ್ಮನ ಮೃತದೇಹವನ್ನು ಕೆಎಂಸಿ ಆಸ್ಪತ್ರೆಯ ಸಿಬ್ಬಂದಿಗಳು ನೀಡಲು ನಿರಾಕರಿಸಿದರು. ಇದಕ್ಕೆ ಮೂಲ ಕಾರಣವೆಂದರೆ ಹಣ ವಿನಿಮಯದ ಕೊರತೆ. ಹಳೆಯ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂದು ಕೆಎಂಸಿ ಆಸ್ಪತ್ರೆಯ ಸಿಬ್ಬಂದಿಗಳು ತಾಕೀತು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮೃತದೇಹವನ್ನು ಕೊಡಲಿಲ್ಲ. ಆಸ್ಪತ್ರೆಯ ಬಿಲ್ ಪಾವತಿ ಮಾಡಿ ಮೃತದೇಹ ಮರಳಿಸುತ್ತೇವೆ ಎಂದು ಆಸ್ಪತ್ರೆಯ ಸಿಬ್ಬಂದಿಗಳು ತಿಳಿಸಿದರು. ಅದರಂತೆ ಸದಾನಂದ ಗೌಡರು ಚೆಕ್ ನೀಡಿ ತಮ್ಮನ ಮೃತದೇಹ ಪಡೆದಿದ್ದಾರೆ.
ಮೃತರು ಪತ್ನಿ ವೀಣಾ, ಮಕ್ಕಳಾದ ಪ್ರತೀಕ್ , ಆಶೀಕ್ , ಸಾಗರಿಕಾ, ಸಹೋದರರಾದ ಡಿ.ವಿ. ಸದಾನಂದ ಗೌಡ, ಡಿ. ವಿ. ಸುರೇಶ್ ಗೌಡ, ಸಹೋದರಿ ರತ್ನಾವತಿಯವರನ್ನು ಅಗಲಿದ್ದಾರೆ.












Click it and Unblock the Notifications