ಸಮಾನತೆ ಹೆಸರಿನಲ್ಲಿ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ, ಅಯ್ಯಪ್ಪ ಭಕ್ತರ ಪರವಾಗಿ ನಿಂತ ಡಾ.ವೀರೇಂದ್ರ ಹೆಗ್ಗಡೆ
ಮಂಗಳೂರು, ಅಕ್ಟೋಬರ್. 23: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ಆರಂಭವಾಗಿವೆ. ಉಡುಪಿಯಿಂದ ಬೃಹತ್ ಜನಾಂದೋಲನ ರೂಪಿಸಲು ಸಿದ್ಧತೆ ಆರಂಭಗೊಂಡಿದೆ.
ಈ ನಡುವೆ ಇದೀಗ ಶಬರಿಮಲೆ ಭಕ್ತರ ಪರವಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಶಬರಿಮಲೆಗೆ ಹೋಗುವ ಪ್ರತಿಯೊಬ್ಬನೂ 48 ದಿವಸಗಳ ವ್ರತ ಕೈಗೊಳ್ಳಬೇಕೆಂಬ ನಿಯಮವಿದೆ. ಮನೋನಿಗ್ರಹ, ಸಂಯಮದ ಪಾಲನೆ ವ್ರತದ ಮುಖ್ಯ ಉದ್ದೇಶವಾಗಿದೆ. ಸಮಾನತೆಯ ಹೆಸರಿನಲ್ಲಿ ಮೂಲ ಉದ್ದೇಶ, ಪಾವಿತ್ರ್ಯಕ್ಕೆ ಧಕ್ಕೆ ತರುವುದು ಸರಿಯಲ್ಲ.
ವ್ರತ ನಿಷ್ಠರು ಮಹಿಳೆಯರು ಮಾಡಿದ ಆಹಾರವನ್ನು ಸ್ವೀಕರಿಸುವುದಿಲ್ಲ . ಇಂಥ ಕಠಿಣ ವ್ರತಾಚರಣೆಯನ್ನು ಆಚರಿಸುವ ಕ್ಷೇತ್ರಕ್ಕೆ ಮಹಿಳೆಯರು ಪ್ರವೇಶಿಸುವುದರಿಂದ ವ್ರತಧಾರಿಗಳ ಸಂಯಮಕ್ಕೆ ಧಕ್ಕೆ ಬರಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮನೆಯಲ್ಲೂ ದೇವರ ಆರಾಧನೆ ಮಾಡಬಹುದು
ಭಕ್ತಿಯಿದ್ದರೆ ಕ್ಷೇತ್ರಕ್ಕೆ ಹೋಗಿಯೇ ಆರಾಧನೆ ಮಾಡಬೇಕಿಲ್ಲ. ಮನೆಯಲ್ಲೂ ದೇವರ ಆರಾಧನೆ ಮಾಡಬಹುದು. ಕ್ಷೇತ್ರಗಳ ವಿಶೇಷತೆಯೇ ಸೌಂದರ್ಯವಾಗಿದೆ. ಅದನ್ನು ಸಮಾನತೆಯ ಹೆಸರಿನಲ್ಲಿ ಹಾಳು ಮಾಡಬಾರದು ಎಂದು ಹೆಗ್ಗಡೆಯವರು ತಿಳಿಸಿದ್ದಾರೆ.

ಈ ನಿಯಮ ವಿದೇಶಗಳಲ್ಲಿಯೂ ಇದೆ
ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರ ಪ್ರವೇಶ ನಿಷೇಧ ಕೇವಲ ಭಾರತದಲ್ಲಿ ಮಾತ್ರ ಇರುವುದಲ್ಲ, ಈ ನಿಯಮ ವಿದೇಶಗಳಲ್ಲಿಯೂ ಇದೆ . ಈ ನಿಯಮಗಳನ್ನು ಮುರಿಯುವ ಮೂಲಕ ಧಾರ್ಮಿಕ ಕ್ಷೇತ್ರಗಳ ಸೌಂದರ್ಯ ಹಾಳು ಮಾಡಬಾರದು ಎಂದು ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಮನಸ್ಸಿನ ಸಂಯಮ ಕಡಿಮೆಯಾಗಬಹುದು
ವ್ರತಧಾರಿಗಳು ಮಹಿಳೆಯರು ಮಾಡಿದ ಅಡುಗೆಯನ್ನು ಸ್ವೀಕಾರ ಮಾಡುವುದಿಲ್ಲ. ಕಠಿಣ ಬ್ರಹ್ಮಚರ್ಯ ಪಾಲನೆ ಮಾಡುತ್ತಾರೆ. ಶಬರಿಮಲೆ ವೃತಾಚರಣೆಗೆ ಪ್ರಸಿದ್ಧಿ ಪಡೆದಿದ್ದು, ಮಹಿಳೆಯರ ಪ್ರವೇಶದಿಂದ ಮನಸ್ಸಿನ ಸಂಯಮ ಕಡಿಮೆಯಾಗಬಹುದು ಎಂದು ವೀರೇಂದ್ರ ಹೆಗ್ಗಡೆ ವ್ರತದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ವಸ್ತುಸಂಗ್ರಹಾಲಯ ಲೋಕಾರ್ಪಣೆ
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಾಳೆ ಧರ್ಮಸ್ಥಳ ಪ್ರವಾಸ ಕೈಗೊಳ್ಳುತ್ತಿದ್ದು, ಧರ್ಮಸ್ಥಳದಲ್ಲಿ ನವೀಕರಣಗೊಂಡು ನೂತನವಾಗಿ ನಿರ್ಮಾಣವಾಗಿರುವ ಮಂಜೂಷಾ ವಸ್ತುಸಂಗ್ರಹಾಲಯ ಲೋಕಾರ್ಪಣೆಯಾಗಲಿದೆ.
ವಸ್ತು ಸಂಗ್ರಹಾಲಯದಲ್ಲಿ ವಿದೇಶ ಪ್ರವಾಸದ ವೇಳೆ ಸಂಗ್ರಹಿಸಿದ 200 ವರ್ಷಗಳ ಹಿಂದಿನ ವಸ್ತುಗಳಿದ್ದು, ಭಕ್ತರ ಜ್ಞಾನದ ವಿಸ್ತಾರ ಮಾಡಲು ಸಂಗ್ರಹಾಲಯ ನಿರ್ಮಾಣ ಮಾಡಲಾಗಿದೆ ಎಂದು ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆ ಮಾಧ್ಯಮದವರಿಗೆ ತಿಳಿಸಿದ್ದಾರೆ.












Click it and Unblock the Notifications