ನೆರೆ ಪರಿಹಾರ ನಿಧಿಗೆ ಧರ್ಮಸ್ಥಳದಿಂದ 25 ಕೋಟಿ ರೂಪಾಯಿ
ಮಂಗಳೂರು ಆಗಸ್ಟ್ 17: ಭಾರೀ ಮಳೆಯಿಂದ ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿ ಜನ ಜೀವನ ತತ್ತರಿಸಿ ಹೋಗಿದೆ. ಎಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತರಿಗೆ ರಾಜ್ಯದೆಲ್ಲೆಡೆಯಿಂದ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಮಠ ಮಂದಿರಗಳೂ ಲಕ್ಷಾತರ ರೂಪಾಯಿ ದೇಣಿಗೆ ನೀಡಿವೆ.
ಈ ನಡುವೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ್ದಾರೆ. ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಕೋಟಿ ರೂಪಾಯಿ ನೆರವನ್ನು ಡಾ.ವಿರೇಂದ್ರ ಹೆಗ್ಗಡೆ ಘೋಷಣೆ ಮಾಡಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಶ್ರಮಿಕ ಕಾಳಜಿಯ ರಿಲೀಫ್ ಫಂಡ್ ಗೆ 50 ಲಕ್ಷ ರೂಪಾಯಿಯನ್ನು ಶಾಸಕರ ಮೂಲಕ ಹಸ್ತಾಂತರ ಮಾಡಿದ್ದಾರೆ.
ಈ ಕುರಿತು ಧರ್ಮಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಾ. ವೀರೇಂದ್ರ ಹೆಗ್ಗಡೆ, "ಪಶ್ಚಿಮಘಟ್ಟ ಅಧ್ಯಯನ ಪೀಠ ಸ್ಥಾಪನೆಗೆ 2 ಕೋಟಿ ರೂಪಾಯಿ ಮೀಸಲಾಗಿರಿಸಿದ್ದು, ವಿಪತ್ತು ನಿರ್ವಹಣಾ ವೇದಿಕೆ ಸ್ಥಾಪನೆ ಮಾಡಿ 2 ಲಕ್ಷ ಸದಸ್ಯರಿಗೆ ತರಬೇತಿ ನೀಡಲಾಗುವುದು" ಎಂದು ಹೇಳಿದರು. ಈ ಸಂದರ್ಭದಲ್ಲಿ ಹೇಮಾವತಿ ವಿ.ಹೆಗ್ಗಡೆ, ಶಾಸಕ ಹರೀಶ್ ಪೂಂಜ, ಡಾ.ಎಲ್.ಎಚ್. ಮಂಜುನಾಥ್ ಉಪಸ್ಥಿತರಿದರು.












Click it and Unblock the Notifications