ಅಪಘಾತವಾದ ಯುವಕನಿಗೂ ಚಿಕಿತ್ಸೆ ನೀಡದ ವೈದ್ಯರು
ಮಂಗಳೂರು, ಜೂನ್ 17: ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ಯುವಕನಿಗೆ ವೈದ್ಯರು ಚಿಕಿತ್ಸೆ ನೀಡದೆ ನಿರ್ಲಕ್ಷ ತೋರಿದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾತ್ರಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ವೆನ್ಲಾಕ್ ಆಸ್ಪತ್ರೆಗೆ ತರಲಾಗಿತ್ತು. ಆದರೆ ರೋಗಿಯನ್ನು ಸ್ವೀಕರಿಸದೆ, ಪ್ರಥಮ ಚಿಕಿತ್ಸೆಯನ್ನೂ ನೀಡದೆ ಬೇರೆ ಖಾಸಗಿ ಆಸ್ಪತ್ರೆಗೆ ಹೋಗುವಂತೆ ಹೇಳಿ ಒಂದೂವರೆ ಗಂಟೆಗಳ ಕಾಲ ಸತಾಯಿಸಿದ ಘಟನೆ ನಡೆದಿದೆ.
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆ ಎಂದರೆ 5 ಜಿಲ್ಲೆಗಳ ಬಡವರ ಪಾಲಿಗೆ ಆಶಾಕಿರಣ ಎಂದೇ ಹೇಳಲಾಗುತ್ತದೆ. ಆದರೆ ಇಲ್ಲಿಯ ವೈದ್ಯರು ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ಯುವಕನಿಗೆ ಚಿಕಿತ್ಸೆ ನೀಡದೇ ಸಾಗಹಾಕಿದ್ದಾರೆ. ಈ ವೇಳೆ, ರೋಗಿಯನ್ನು ಕರೆತಂದಿದ್ದ ಯುವಕರು ವೈದ್ಯರ ನಿರ್ಲಕ್ಷವನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿ, ಆಸ್ಪತ್ರೆಯಲ್ಲಿದ್ದ ಡ್ಯೂಟಿ ವೈದ್ಯರು ಮತ್ತು ನರ್ಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಯುವಕನನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆತಂದು ಒಂದೂವರೆ ಗಂಟೆಯಾದರೂ ವೈದ್ಯರು ತಿರುಗಿ ನೋಡದೆ ಸತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ರೋಗಿಯನ್ನು ಆ ಬಳಿಕ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಹೀಗೆ ತುರ್ತು ಪರಿಸ್ಥಿತಿಯಲ್ಲಿದ್ದ ಯುವಕನಿಗೆ ಚಿಕಿತ್ಸೆ ನೀಡದೆ ಸತಾಯಿಸಿದ ವಿಡಿಯೋ ಈಗ ಜಾಲತಾಣದಲ್ಲಿ ಹರಿದಾಡಿದ್ದು, ವೆನ್ಲಾಕ್ ಜಿಲ್ಲಾಸ್ಪತ್ರೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಗೆ ಅಲ್ಲಿ ಭದ್ರತೆಗೆ ನಿಯೋಜಿಸಿದ್ದ ಪೊಲೀಸರೂ ಸಾಕ್ಷಿಯಾಗಿದ್ದಾರೆ.












Click it and Unblock the Notifications