Dharmasthala Lakshadeepotsava : ನವೆಂಬರ್ 19ರಿಂದ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ: ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ
ಮಂಗಳೂರು, ನವೆಂಬರ್, 16: ಪವಿತ್ರ ತೀರ್ಥ ಕ್ಷೇತ್ರ ಧರ್ಮಸ್ಥಳ ಕಾರ್ತಿಕ ಮಾಸದ ದೀಪೋತ್ಸವಕ್ಕೆ ಸಜ್ಜಾಗಿದೆ. ನವೆಂಬರ್ 19 ರಿಂದ ನವೆಂಬರ್ 23ರವರೆಗೆ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ವೈಭವ ಜರುಗಲಿದೆ. ಅಲ್ಲದೇ ಲಕ್ಷಾಂತರ ಭಕ್ತರ ಸಮಾಗಮದ ಜೊತೆಗೆ ಅದ್ಭುತ ಕಾರ್ಯಕ್ರಮಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಾಕ್ಷಿಯಾಗಲಿದೆ.
ನವೆಂಬರ್ 22ರಂದು 90ನೇ ವರ್ಷದ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ನವೆಂಬರ್ 23ರಂದು ಲಕ್ಷದೀಪೋತ್ಸವದ ಅಂಗವಾಗಿ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ನಾಡಿನ ವಿದ್ವಾಂಸರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನವೆಂಬರ್22 ರಂದು ನಡೆಯುವ ಸರ್ವಧರ್ಮ ಸಮ್ಮೇಳನವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಉದ್ಘಾಟಿಸಲಿದ್ದಾರೆ. ಸಾಹಿತ್ಯ ಸಮ್ಮೇಳನವನ್ನು ಖ್ಯಾತ ಚಲನಚಿತ್ರ ನಿರ್ದೇಶಕ ಪಿ ಶೇಷಾದ್ರಿ ಅವರು ಉದ್ಘಾಟನೆ ಮಾಡಲಿದ್ದಾರೆ.
ಕೊರಗಜ್ಜನಿಗೆ ಅಗೇಲು ಸೇವೆಯ ಹರಕೆ ತೀರಿಸಿದ ಉಕ್ರೇನ್ ಕುಟುಂಬ
ಲಕ್ಷದೀಪೋತ್ಸವದ ಅಂಗವಾಗಿ ರಾತ್ರಿ ಇಡೀ ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತು ಪ್ರದರ್ಶನ, ಮನೋರಂಜನಾ ಕಾರ್ಯಕ್ರಮಗಳು ಧರ್ಮಸ್ಥಳದಲ್ಲಿ ನಡೆಯಲಿದೆ. ನವೆಂಬರ್ 19ರಂದು ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವ, ನವೆಂಬರ್ 20ರಂದು ಕರೆಕಟ್ಟೆ ಉತ್ಸವ, ನವೆಂಬರ್ 21ರಂದು ಲಲಿತೋದ್ಯಾನ ಉತ್ಸವ, ನವೆಂಬರ್ 22ರಂದು ಕಂಚಿಮಾರುಕಟ್ಟೆ ಉತ್ಸವ ಹಾಗೂ ಕೊನೆಯ ದಿನವಾದ ನವೆಂಬರ್ 23ರಂದು ಗೌರಿ ಮಾರುಕಟ್ಟೆ ಉತ್ಸವ ನಡೆಯಲಿದೆ.
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವಕ್ಕೆ ಸಿದ್ಧತೆ
ನವೆಂಬರ್ 19ರಂದು ಬೆಳಗ್ಗೆ 10:30ಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಸ್ತುಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನವೆಂಬರ್ 22ರಂದು ಸಂಜೆ 5ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಸಚಿವೆ ಸ್ಮೃತಿ ಇರಾನಿ ಸರ್ಮಧರ್ಮ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ವಿದ್ವಾಂಸರು, ನ್ಯಾಯವಾದಿಯೂ ಆದ ಎಂ.ಆರ್.ಸತ್ಯನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಂದನೀಯ ಫಾದರ್ ಮಾರ್ಸೆಲ್ ಪಿಂಟೊ, ಹಾಸಿಂಪೀರ ಇ ವಾಲೀಕಾರ, ಮುನಿರಾಜ ರೆಂಜಾಳ ಉಪನ್ಯಾಸ ಮಾಡಲಿದ್ದಾರೆ. ನವೆಂಬರ್ 23ರಂದು ಇದೇ ವೇದಿಕೆಯಲ್ಲಿ ಸಾಹಿತ್ಯ ಸಮ್ಮೇಳನವನ್ನು ಕನ್ನಡದ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ ಅವರು ಉದ್ಘಾಟಿಸಲಿದ್ದಾರೆ. ಇನ್ನು ಸತ್ಯೇಶ್ ಎನ್.ಬೆಳ್ಳೂರು, ರವೀಂದ್ರ ಭಟ್ ಐನಕೈ, ಡಾ.ಗೀತಾ ವಸಂತ ಉಪನ್ಯಾಸ ನೀಡಲಿದ್ದಾರೆ.
ಧರ್ಮಾಧಿಕಾರಿಯಿಂದ ಜನರಿಗೆ ಆಮಂತ್ರಣ
ಅಲ್ಲದೆ ನಿತ್ಯವೂ ಇದೇ ವೇದಿಕೆ ಸೇರಿದಂತೆ, ವಸ್ತಪ್ರದರ್ಶನ ಮಂಟಪದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಿಂದ ಕಲಾ ಪ್ರದರ್ಶನ ನೆರವೇರಲಿದೆ. ಈ ಎಲ್ಲಾ ಕಾರ್ಯಕ್ರಮಗಳು ನಾಡಿನ ಗಣ್ಯರು, ಹಾಗೂ ಕಲಾವಿದರ ಸಹಭಾಗಿತ್ವದಲ್ಲಿ ನಡೆಯಲಿದೆ. ಆದ್ದರಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಜನರು ಪಾಲ್ಗೊಳ್ಳಬೇಕು ಎಂದು ಆಮಂತ್ರಣವನ್ನು ನೀಡಿದ್ದಾರೆ.
ಸರ್ವಧರ್ಮ ಸಮ್ಮೇಳನ ಆರಂಭ ಯಾವಾಗ?
ಧರ್ಮಸ್ಥಳದ ಲಕ್ಷದೀಪೋತ್ಸವದ ವಿಶೇಷ ಆಕರ್ಷಣೆಯೆಂದರೆ ಸರ್ವಧರ್ಮ ಸಮ್ಮೇಳನ ಆಗಿದೆ. 1933ರಿಂದ ನಡೆದುಕೊಂಡು ಬರುತ್ತಿರುವ ಸರ್ವಧರ್ಮ ಸಮ್ಮೇಳನವನ್ನು ಆರಂಭಿಸಿದವರು ದಿ.ಮಂಜಯ್ಯ ಹೆಗ್ಗಡೆಯವರಾಗಿದ್ದಾರೆ. ಲಕ್ಷದೀಪೋತ್ಸವದ ವೇಳೆ ಶ್ರೀ ಕ್ಷೇತ್ರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ, ಸಾಹಿತ್ಯ ಸಮ್ಮೇಳನ ಮತ್ತು ಸರ್ವಧರ್ಮ ಸಮ್ಮೇಳನಗಳು ನಡೆಯುತ್ತವೆ. ಆದ್ದರಿಂದಲೇ ಲಕ್ಷದೀಪೋತ್ಸವ ಕೇವಲ ಧಾರ್ಮಿಕ ಕಾರ್ಯಕ್ರಮವಾಗಿ ಉಳಿಯದೆ ಸಮಾಜಮುಖಿಯಾಗಿ ಬೆಳೆದು ನಿಂತಿದೆ. ಇದು ಸಾಂಸ್ಕೃತಿಕ ಹಾಗೂ ಬೌದ್ಧಿಕತೆಯ ಸಮಾಗಮವಾಗಿದೆ. ಇಂತಹ ಲಕ್ಷದೀಪೋತ್ಸವದಲ್ಲಿ ರಾಜ್ಯಾದ್ಯಂತ ಲಕ್ಷಾಂತರ ಜನ ಭಕ್ತರು ಭಾಗವಹಿಸುವ ಸಾಧ್ಯತೆ ಇದೆ.
ನವೆಂಬರ್ 23ರವರೆಗೂ ಕಾರ್ಯಕ್ರಮ
ಈಗಾಗಲೇ ರಾಜ್ಯಾದ್ಯಂತ ಹಲವು ಕಡೆ ಲಕ್ಷದೀಪೋತ್ಸವ ಕಾರ್ಯಕ್ರಗಳು ಜರುಗಿವೆ. ರಾಜ್ಯದ ಹಲವು ದೇವಸ್ಥಾನಗಳಲ್ಲಿ ನಡೆಯುವ ದೀಪೋತ್ಸವವನ್ನು ಸವಿಯಲು ಹೊರರಾಜ್ಯಗಳಿಂದಲೂ ಜನರು ಆಗಮಿಸುತ್ತಿದ್ದಾರೆ. ಅಲ್ಲದೇ ನವೆಂಬರ್ 19ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಲಕ್ಷದೀಪೋತ್ಸವ ಕಾರ್ಯಕ್ರಮ ಆರಂಭವಾಗಲಿದೆ. ಈ ಕಾರ್ಯಕ್ರಮ ನವೆಂಬರ್ 23ರವರೆಗೂ ನಡೆಯಲಿದ್ದು, 5 ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಭಕ್ತರು ಹೇಗೆ ಹರಿದುಬರುತ್ತಾರೆ ಅನ್ನುವುದನ್ನು ಕಾದುನೋಡಬೇಕಿದೆ.