ಕೋಮಾ ಸ್ಥಿತಿಗೆ ತಲುಪಿದ ಮಾಜಿ ಕೇಂದ್ರ ಸಚಿವ ವಿ.ಧನಂಜಯ ಕುಮಾರ್
ಮಂಗಳೂರು, ಡಿಸೆಂಬರ್ 06: ಬಿಜೆಪಿಯಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 4 ಬಾರಿ ಸತತವಾಗಿ ಗೆಲುವು ಸಾಧಿಸಿದ್ದ ಧನಂಜಯ ಕುಮಾರ್ ನೆನೆಪಿದೆಯೇ? ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿ ಸದ್ದು ಮಾಡಿದ್ದ ಮಾಜಿ ಕೇಂದ್ರ ಸಚಿವ ವಿ. ಧನಂಜಯ ಕುಮಾರ್ ಇದೀಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಿ. ಧನಂಜಯ ಕುಮಾರ್ ಅವರನ್ನು ಕೆಲ ತಿಂಗಳುಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆದರೆ ಒಂದು ಮಾಹಿತಿಯ ಪ್ರಕಾರ ಇತ್ತೀಚೆಗೆ ಅವರ ಆರೋಗ್ಯ ತೀರಾ ಬಿಗಡಾಯಿಸಿದ ಕಾರಣ ಧನಂಜಯ ಕುಮಾರ್ ಕೋಮಾ ಸ್ಥಿತಿಯಲ್ಲಿದ್ದು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. 67 ವರ್ಷದ ಧನಂಜಯ ಕುಮಾರ್ ಈಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಗುರುತು ಹಿಡಿಯಲಾರದಷ್ಟು ಅವರು ಕೃಶರಾಗಿದ್ದಾರೆ.
ವೇಣೂರಿನ ಜೈನ ಮನೆತನದಲ್ಲಿ ಜನಿಸಿದ ಧನಂಜಯ್ ಕುಮಾರ್ ಉಡುಪಿ ವೈಕುಂಠ ಬಾಳಿಗ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಮಂಗಳೂರಿನಲ್ಲಿ ವೃತ್ತಿ ಅರಂಭಿಸಿದರು. ಆ ನಂತರ ಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿದರು.
ಬಳಿಕ ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ, ಯುವಮೋರ್ಚಾದ ರಾಜ್ಯಾಧ್ಯಕ್ಷ , ಅಖಿಲ ಭಾರತ ಉಪಾಧ್ಯಕ್ಷ ಸಹಿತ ಹಲವು ಹುದ್ದೆಗಳನ್ನು ನಿರ್ವಹಿಸಿದರು.

ಪ್ರಥಮ ಬಾರಿಗೆ ಸಂಸದ
1983ರ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಗೆದ್ದು ಶಾಸಕರಾದರು. ಬಳಿಕ 85ರ ಚುನಾವಣೆಯಲ್ಲಿ ಪರಾಭವಗೊಂಡರು. 1989 ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದರು. ಆದರೆ 1991 ರಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ಧನ ಪೂಜಾರಿ ಅವರನ್ನು ಸೋಲಿಸುವ ಮೂಲಕ ಪ್ರಥಮ ಬಾರಿಗೆ ಸಂಸದರಾದರು.

ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗ
ಆ ನಂತರ 1996, 98, 99ರ ಚುನಾವಣೆಯಲ್ಲಿ ಸತತವಾಗಿ ಗೆಲುವು ಸಾಧಿಸಿದರು. 1998ರಲ್ಲಿ ವಾಜಪೇಯಿ ಸರಕಾರದಲ್ಲಿ ಕ್ಯಾಬಿನೆಟ್ ಸಚಿವ, 1999 ರಲ್ಲಿ ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವರಾಗಿದ್ದ ವಿ.ಧನಂಜಯ ಕುಮಾರ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗ.

ಧನಂಜಕುಮಾರ್ ಮೇಲೇಳಲೇ ಇಲ್ಲ
ಅಲ್ಪಸಂಖ್ಯಾತ ಜೈನ ಸಮುದಾಯದ ಧನಂಜಯ ಕುಮಾರ್, ಕೆಲ ವರ್ಷಗಳ ಹಿಂದೆ ಬಿಜೆಪಿ ಭೀಷ್ಮ ಅಡ್ವಾಣಿ ಅವಕೃಪೆಗೆ ಈಡಾಗಿ ರಾಜಕೀಯ ಅವನತಿಯತ್ತ ಮುಖ ಮಾಡಿದರು. ರಾಜಕೀಯ ಬದಲಾವಣೆಯಿಂದ ಕಾಂಗ್ರೆಸ್, ಜೆಡಿಎಸ್ ಗೂ ಎಡತಾಕಿದರಾದರೂ ಈ ಘಟನೆ ಬಳಿಕ ಮತ್ತೆ ರಾಜಕೀಯವಾಗಿ ಧನಂಜಕುಮಾರ್ ಮೇಲೇಳಲೇ ಇಲ್ಲ.

ಜೀವನ್ಮರಣದ ನಡುವೆ ಹೋರಾಟ
ಈಗ ಕಳೆದ ನಾಲ್ಕು ತಿಂಗಳಿಂದಲೂ ಧನಂಜಯ ಕುಮಾರ್ ಕೋಮಾ ಸ್ಥಿತಿಯಲ್ಲಿದ್ದಾರೆ. ಮಂಗಳೂರಿನ ಆಸ್ಪತ್ರೆ ಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.












Click it and Unblock the Notifications