ಜಿಗಣಿ- ಧರ್ಮಸ್ಥಳ ಭೀಷ್ಮನ ಪಾದಯಾತ್ರೆ: 360 ಕಿಮೀ ಪ್ರಯಣದ ರೋಚಕ ಕಥೆ
ಮಂಗಳೂರು, ನವೆಂಬರ್ 10: ದಾನಪರಂಪರೆಯ ತವರೂರು ಶ್ರೀ ಕ್ಷೇತ್ರ ಧರ್ಮಸ್ಥಳ. ಧರ್ಮಸ್ಥಳ ಚತುರ್ವಿಧ ದಾನಗಳಿಗೆ ಹೆಸರು ವಾಸಿಯಾದರೂ ಭಕ್ತರೂ ಧರ್ಮಸ್ಥಳಕ್ಕೆ ತಾವು ಬೆಳೆದ ಬೆಳೆ, ಸಾಕಿದ ಗೋವು ಇವುಗಳನ್ನೆಲ್ಲಾ ದಾನರೂಪದಲ್ಲಿ ಕ್ಷೇತ್ರಕ್ಕೆ ನೀಡುತ್ತಾರೆ.
ಗೋ ದಾನವನ್ನು ಹಲವು ಮಂದಿ ಮಾಡುತ್ತಾರೆ ಆದರೂ ಬೆಂಗಳೂರು ಮೂಲದ ಭಕ್ತ ಶ್ರೇಯಾಂಸ್ ಜೈನ್ ಮಾಡಿರುವ ಗೋದಾನ ಎಲ್ಲರ ಕಣ್ಣು ತೆರೆಸಿದೆ. ಬೆಂಗಳೂರಿನಿಂದ ಧರ್ಮಸ್ಥಳದವರೆಗೆ ತನ್ನ ಪ್ರೀತಿಯ ಎತ್ತು ಭೀಷ್ಮನ ಜೊತೆಗಿನ ಪಯಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ತಾನು ಪ್ರೀತಿಯಿಂದ ಸಾಕಿದ ಭೀಷ್ಮನನ್ನು ಧರ್ಮಸ್ಥಳಕ್ಕೆ ನೀಡುವ ಸಂದರ್ಭ ವಿಶೇಷವಾಗಿರಬೇಕು ಎಂದು ಶ್ರೇಯಾಂಸ್ ಜೈನ್ ಪಾದಯಾತ್ರೆ ಮಾಡಿದ್ದಾರೆ. ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿರುವ ಶ್ರೇಯಾಂಸ್ ವರ್ಕ್ ಫ್ರಮ್ ಹೋಮ್ ಮಾಡುತ್ತಾ ಪಾದಯಾತ್ರೆ ಮಾಡಿದ್ದು ಇನ್ನೂ ವಿಶೇಷವಾಗಿದೆ.

ಧರ್ಮಸ್ಥಳಕ್ಕೆ ಗಿರ್ ತಳಿಯ ಬಸವನನ್ನು ಒಪ್ಪಿಸಿದ ಜಿಗಣಿ ನಿವಾಸಿ
ಶ್ರೇಯಾಂಸ್ ಜೈನ್ ಬೆಂಗಳೂರು ನಗರ ಹೊರವಲಯದ ಜಿಗಣಿ ನಿವಾಸಿ. ಮೊದಲಿನಂದಲೂ ಹೈನುಗಾರಿಕೆ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಶ್ರೇಯಾಂಸ್ ಲಾಕ್ ಡೌನ್ನಲ್ಲಿ ಮೊದಲು ಜರ್ಸಿ ಹಸುವನ್ನು ಸಾಕಿದರು. ಬಳಿಕ ಶ್ರೇಯಾಂಸ್ ದೇಸಿ ತಳಿ ಗಿರ್ವೊಂದನ್ನು ಖರೀದಿಸಿದ್ದಾರೆ. ಆ ಗಿರ್ ತಳಿಗೆ ಹುಟ್ಟಿದ ಮೊದಲ ಕರು ಭೀಷ್ಮ. ಭೀಮ ಹುಟ್ಟಿದಾಗಲೇ ಶ್ರೇಯಾಂಸ್ ಜೈನ್ ಈ ಕರವನ್ನು ಮೂರು ವರ್ಷದ ಒಳಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಒಪ್ಪಿಸೋದಾಗಿ ಮನಸ್ಸಿನಲ್ಲಿ ಆಸೆ ಇಟ್ಟುಕೊಂಡಿದ್ದರು. ಅದೇ ರೀತಿ ಈಗ ಭೀಷ್ಮನಿಗೆ ಒಂದು ವರ್ಷ ಒಂಭತ್ತು ತಿಂಗಳು ಪ್ರಾಯವಾಗಿದ್ದು, ತನ್ನ ಮನದಾಸೆಯಂತೆ ಶ್ರೇಯಾಂಸ್ ಜೈನ್ ಬೆಂಗಳೂರಿನ ಜಿಗಣಿಯಿಂದ 36 ದಿನ 360 ಕಿಮೀ ನಡೆದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಗಿರ್ ತಳಿಯ ಬಸವನನ್ನು ಒಪ್ಪಿಸಿದ್ದಾರೆ.

ವಾರಾಂತ್ಯದಲ್ಲಿ ನೆಟ್ವರ್ಕ್ ಇಲ್ಲದ ಊರುಗಳು ಶ್ರೇಯಾಂಸ್ ಆಯ್ಕೆ
ತನ್ನ ಅಪೂರ್ವ ಪಾದಯಾತ್ರೆ ಬಗ್ಗೆ ಶ್ರೇಯಾಂಸ್ ಜೈನ್ ಪೂರ್ಣ ಮಾಹಿತಿ ನೀಡಿದ್ದಾರೆ. ಪಾದಾಯಾತ್ರೆ ನಡೆಸುವ ಸಂದರ್ಭದಲ್ಲಿ ಯಾವ ದಾರಿಯಿಂದ ಸಾಗಿದರೆ ಬೇಗ ರೀಚ್ ಆಗುತ್ತೇನೆ ಎಂಬ ಯೋಜನೆ ಮೊದಲೇ ಮಾಡಿದ್ದೆ. ಹೈವೇ ಬದಲು ಹಳ್ಳಿ ದಾರಿಯನ್ನು ಆಯ್ಕೆ ಮಾಡಿದ್ದೆ. ಲ್ಯಾಪ್ ಟಾಪ್ ಕೆಲಸ ಇದ್ದ ಕಾರಣ ನೆಟ್ ವರ್ಕ್ ಇರುವ ಊರನ್ನು ವಾರದ ದಿನ, ನೆಟ್ ವರ್ಕ್ ಇಲ್ಲದ ಊರನ್ನು ವಾರಾಂತ್ಯದಲ್ಲಿ ನಡೆಯುತ್ತಿದ್ದೆ. ಪಾದಯಾತ್ರೆ ಮಾಡಬೇಕು ಎಂಬುದು ಆಸೆಯಾಗಿತ್ತು. ಭೀಷ್ಮನಿಗೆ ಅನಾರೋಗ್ಯ ಆದರೆ ಗಾಡಿ ಮಾಡೋದು ಎನ್ನುವುದು ಕೂಡಾ ಮನಸ್ಸಿನಲ್ಲಿ ಫಿಕ್ಸ್ ಆಗಿತ್ತು. ಪಾದಯಾತ್ರೆ ಆರಂಭಿಸಿ ಹದಿನೈದು ಬಳಿಕ ಭೀಮ ಬಹಳ ಸುಸ್ತಾದ. ದೃಷ್ಟಿ ತೆಗೆದ ಬಳಿಕ ಮತ್ತೆ ಆಕ್ಟೀವ್ ಆದ. ಆ ಮೇಲೆ ಪ್ರತಿದಿನ ಭೀಮನ ದೃಷ್ಟಿ ತೆಗೆಯುತ್ತಿದ್ದೆ. ಹುಲ್ಲಿನ ಮೇಲೆಯೇ ನಡೆಸಿಕೊಂಡು ಬಂದಿದ್ದೇನೆ. ಮುಂಜಾನೆ 4 ಗಂಟೆಯಿಂದ ಮತ್ತು ಬೆಳಗ್ಗೆ 9 ಗಂಟೆ ತನಕ ಪಾದಯಾತ್ರೆ ಮಾಡಿ ಆ ಬಳಿಕ ಆಫೀಸ್ ಕೆಲಸ ಮಾಡುತ್ತಿದ್ದೆ ಎಂದರು.

ಮುಗ್ಧ ಭೀಷ್ಮನಿಗೆ ಗುಮ್ಮಲು ಕಲಿಸಿದ್ರಂತೆ ಶ್ರೇಯಾಂಸ್
ಬಾಲ್ಯದ ದಿನಗಳನ್ನು ಕಳಸ ಸಮೀಪದ ಹಿರೇಬೈಲ್ನಲ್ಲಿ ದೊಡ್ಡಮ್ಮನ ಮನೆಯಲ್ಲಿ ಕಳೆದೆ. ಆ ಬಳಿಕ ಉಜಿರೆ ಸಿದ್ಧವನ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಗೋವುಗಳ ಬಗ್ಗೆ ಚಿಕ್ಕಂದಿನಿಂದಲೂ ಆಸಕ್ತಿ ಇತ್ತು.ಆ ಪ್ರೀತಿ ಗೋವು ಸಾಕಲು ಕಾರಣ ಆಗಿದೆ. ಭೀಷ್ಮನನ್ನು ಧರ್ಮಸ್ಥಳದಲ್ಲಿ ಬಿಡುವುದರಿಂದ ನನಗೆ ಬೇಜಾರಿಲ್ಲ. ಭೀಷ್ಮನನ್ನು ನನಗಿಂತ ಎರಡು ಪಟ್ಟು ಚೆನ್ನಾಗಿ ಧರ್ಮಸ್ಥಳದಲ್ಲಿ ನೋಡಿಕೊಳ್ಳುತ್ತಾರೆ. ನನ್ನ ಅಪ್ಪ-ಅಮ್ಮ ಧರ್ಮಸ್ಥಳ ಬೀಡಿನಲ್ಲಿ ಅಡುಗೆ ಕೆಲಸ ಮಾಡುತ್ತಾರೆ ಎಂದರು.
ಭೀಷ್ಮ ಹಾಡು ಹೇಳುವಾಗ ಡ್ಯಾನ್ಸ್ ಮಾಡುತ್ತಾನೆ. ಅವನಿಗೆ ನಾನೇ ಗುಮ್ಮಲು ಕಲಿಸಿದ್ದೆ. ಆದರೆ ನನಗೆ ಮಾತ್ರ ಗುಮ್ಮುತ್ತಾನೆ. ಬೇರೆ ಯಾರಿಗೂ ಗುಮ್ಮಲ್ಲ. ಬಹಳ ಸಾಧು ಭೀಷ್ಮ. ಪಾದಯಾತ್ರೆಯ ಸಂದರ್ಭದಲ್ಲಿ ಭೀಷ್ಮನನ್ನು ಪ್ರತಿಯೊಬ್ಬರು ಚೆನ್ನಾಗಿ ನೋಡಿಕೊಂಡರು. ಅಕ್ಕಿ-ಬೆಲ್ಲ, ಬಾಳೆ ಹಣ್ಣು ಕೊಡುತ್ತಿದ್ದರು. ಮುಸ್ಲಿಮರು ಕೂಡಾ ಅಕ್ಕಿ-ಬೆಲ್ಲ ಕೊಟ್ಟಿದ್ದಾರೆ.

ಮೂಗುದಾರ, ಹಗ್ಗ ಇಲ್ಲದೆ ಹಿಂಬಾಲಿಸಿದ ಭೀಷ್ಮ
36 ದಿನದ ಪಾದಯಾತ್ರೆಯಲ್ಲಿ ಹೊಟೇಲ್ನಲ್ಲಿ ಖರ್ಚು ಇಲ್ಲ. ಯಾರೂ ಹಣ ತೆಗೆದು ಕೊಳ್ಳಲು ಒಪ್ಪಲಿಲ್ಲ. ಆದರೂ ಒತ್ತಾಯ ಮಾಡಿ ಹಣ ಕೊಟ್ಟಿದ್ದೇನೆ. ಒಟ್ಟಾರೆ ಒಂದು ಸಾವಿರನೂ ಖರ್ಚು ಆಗಿಲ್ಲ. ಶಾಲಾ ಕಾಲೇಜು, ಗ್ರಾಮ ಪಂಚಾಯತ್, ಅಪರಿಚಿತರ ಮನೆ, ಬಸ್ ಸ್ಟ್ಯಾಂಡ್ನಲ್ಲಿ ಮಲಗಿದ್ದೇನೆ ಎಂದು ತಮ್ಮ ಪಯಣದ ಬಗ್ಗೆ ಶ್ರೇಯಾಂಸ್ ಜೈನ್ ಹೇಳಿದರು. ಪಾದಯಾತ್ರೆಯ ಸಂದರ್ಭದಲ್ಲಿ ಭೀಷ್ಮನಿಗೆ ಯಾವುದೇ ಮೂಗುದಾರ, ಹಗ್ಗ ಹಾಕಿಲ್ಲ, ಹಗ್ಗವನ್ನು ಕುತ್ತಿಗೆಗೆ ಸುತ್ತಿ ಬಿಡಲಾಗಿತ್ತು. ಶ್ರೇಯಾಂಸ್ ಮುಂದೆ ಸಾಗುತ್ತಿದ್ದಂತೆ, ಅವರನ್ನು ಹಿಂಬಾಲಿಸಿದೆ.

ಪಾದಯಾತ್ರೆ ವೇಳೆ ಭೀಷ್ಮ ರಸ್ತೆಯ ಮಧ್ಯೆ ಮಲಗಿದ್ಯಾಕೆ
ಈ ಪಾದಯಾತ್ರೆ ವೇಳೆ ಪವಾಡವೂ ನಡೆಯಿತು. ಪಾದಯಾತ್ರೆಯ ವೇಳೆ ಮಾಗಡಿ ಬಳಿಯ ಶಾಲೆಯಲ್ಲಿ ಉಳಿದುಕೊಳ್ಳಲು ಆತ್ಮೀಯರು ಸೂಚಿಸಿದ್ದರು. ಮಾಗಡಿ ಶಾಲೆಯ ಬಳಿ ತಲುಪಲೂ ಇನ್ನೂ ಅರ್ಧ ಕಿಮೀ ಬಾಕಿ ಇತ್ತು. ಆದಾಗಲೇ ಕತ್ತಲು ಆವರಿಸಿದ್ದರಿಂದ ವೇಗವಾಗಿ ಹೆಜ್ಜೆ ಹಾಕುತ್ತಿದ್ದೆ. ಆದರೆ ಸ್ವಲ್ಪ ದೂರ ನಡೆದು ಭೀಷ್ಮ ಅಲ್ಲಿಯೇ ಮಲಗಿ ಬಿಟ್ಟ. ವಾರ ಇಡೀ ನಡೆದು ಸುಸ್ತಾಗದ ಭೀಷ್ಮ ದಾರಿ ಮಧ್ಯೆಯೇ ಮಲಗಿದ್ದು ಆಶ್ಚರ್ಯ ಮೂಡಿಸಿತ್ತು. ಬಹಳ ಆಯಾಸವಾಗಿರಬಹುದು ಅಂತಾ ಭಾವಿಸಿ ಅಲ್ಲೇ ಇದ್ದ ಮೊರಾರ್ಜಿ ದೇಸಾಯಿ ಶಾಲೆಯ ಒಳಗಿನ ಕಾಪೌಂಡ್ನಲ್ಲಿ ಭೀಷ್ಮನನ್ನು ಕಟ್ಟಿದೆ. ಅಲ್ಲಿಯೇ ಶಿಕ್ಷಕರ ಕ್ವಾಟ್ರರ್ಸ್ಗೆ ತೆರಳಿ ಪರಿಚಯಿಸಿ ಭೀಷ್ಮನನ್ನು ಕಟ್ಟಲು ಅವಕಾಶ ಕೇಳಿದೆ. ಅಲ್ಲಿಯೇ ರಾತ್ರಿ ತಂಗಿದ್ದೇನೆ. ಊಟವನ್ನು ಶಿಕ್ಷಕರು ನೀಡಿದ್ದಾರೆ. ರಾತ್ರಿ ಅವರು ಹೇಳಿದ ವಿಚಾರ ಕೇಳಿ ಒಮ್ಮೆಲೇ ಮೈ ನಡುಗಿತು. ನಾನು ತಂಗಲು ಪ್ಲಾನ್ ಮಾಡಿದ್ದ ಶಾಲೆಯಲ್ಲಿ ರಾತ್ರಿಯಾದರೇ ಮದ್ಯವ್ಯಸನಿ ಯುವಕರು ಸೇರಿ ಅಲ್ಲಿ ಅನೈತಿಕ ಚಟುವಟಿಕೆ ಮಾಡುತ್ತಾರೆ ಅಂತಾ ಗೊತ್ತಾಯಿತು. ಭೀಮ ರಸ್ತೆಯ ಮಧ್ಯೆ ಮಲಗದಿದ್ದರೆ ನಾನು ಆ ಶಾಲೆಗೆ ಹೋಗಿ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೆ. ಈ ಅಪಾಯದ ಮುನ್ಸೂಚನೆಯನ್ನು ಅರಿತು ಭೀಷ್ಮ ರಸ್ತೆಯ ಮಧ್ಯೆ ಮಲಗಿರುವುದು ಮಂಜುನಾಥ ಸ್ವಾಮಿಯ ಪವಾಡ ಅಂತಾ ಮೈ ರೋಮಾಂಚನವಾಯಿತು ಶ್ರೇಯಾಂಸ್ ಹೇಳಿದ್ದಾರೆ.
ಶ್ರೇಯಾಂಸ್ ತಾವು ಪ್ರೀತಿಯಿಂದ ಸಾಕಿದ ಭೀಷ್ಮನನ್ನು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಒಪ್ಪಿಸಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಗೆ ಭೀಷ್ಮನಿಗೆ ಹಣ್ಣು ನೀಡಿ ಬರ ಮಾಡಿಕೊಂಡಿದ್ದಾರೆ.












Click it and Unblock the Notifications