ಮಂಗಳೂರಿನಲ್ಲಿ ಬೇವಿನ ಎಣ್ಣೆಗೆ ಭಾರಿ ಡಿಮ್ಯಾಂಡ್; ಯಾಕಿರಬಹುದು?
ಮಂಗಳೂರು, ಜುಲೈ 29: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬೇವಿನ ಎಣ್ಣೆಗೆ ಎಲ್ಲಿಲ್ಲದ ಬೇಡಿಕೆ ಕಂಡುಬಂದಿದೆ.
ಇಲ್ಲಿನ ಮೆಡಿಕಲ್ ಶಾಪ್ ಗಳಲ್ಲಿ ಜನ ಬೇವಿನ ಎಣ್ಣೆ ಖರೀದಿಸುತ್ತಿದ್ದಾರೆ. ಇದರ ಜತೆಗೆ ಒಡೊಮಸ್ ಕ್ರೀಮ್ ಖರೀದಿ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಪ್ರತಿದಿನ ನೂರಕ್ಕೂ ಅಧಿಕ ಬೇವಿನ ಎಣ್ಣೆ ಬಾಟಲಿಗಳು ಮಾರಾಟವಾಗುತ್ತಿವೆ ಎಂದು ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.
ಇಷ್ಟು ಸುದ್ದಿ ಓದುತ್ತಿದ್ದಂತೆ, ಕಡಲ ತಡಿಯ ಜನ ಯಾಕೆ ಹೀಗೆ ಬೇವಿನ ಎಣ್ಣೆ ಖರೀದಿಸುತ್ತಿದ್ದಾರೆ ಎಂಬ ಅಂದಾಜಾಗಿರಬಹುದು. ಹೆಚ್ಚುತ್ತಿರುವ ಡೆಂಗ್ಯೂ ಜ್ವರ ಹಿನ್ನೆಲೆಯಲ್ಲಿ ಮಲಗುವಾಗ ಸೊಳ್ಳೆ ಕಚ್ಚದಂತೆ ಜನರು ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಮಂಗಳೂರು ನಗರದಲ್ಲಿ ಡೆಂಗ್ಯೂ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯಿಂದ ಬೇವಿನ ಎಣ್ಣೆ ವಿತರಿಸಲಾಗುತ್ತಿದೆ. ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಬೇವಿನ ಎಣ್ಣೆ ಹಚ್ಚಿಕೊಳ್ಳುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಪರಿಣಾಮ ಜನ ಬೇವಿನ ಎಣ್ಣೆಯ ಖರೀದಿಗೆ ಮುಗಿ ಬಿದ್ದಿದ್ದಾರೆ.

ಮಾರಣಾಂತಿಕ ಡೆಂಗ್ಯೂ: ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಭೀತಿ ಮನೆ ಮಾಡಿದೆ. ಇತ್ತ ಸಾಮಾನ್ಯ ಜ್ವರಕ್ಕೂ ಭಯಭೀತರಾಗಿ ಜನರು ಜ್ವರ ಪರೀಕ್ಷೆ ಮಾಡಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ. ಸೊಳ್ಳೆ ಕಚ್ಚಿದ ತಕ್ಷಣ ಡೆಂಗ್ಯೂ ಹರಡುವ ಸೊಳ್ಳೆ ಆಗಿರಬಹುದೇ? ಎಂಬ ಅನುಮಾನ ಜನರನ್ನು ಕಾಡತೊಡಗಿದೆ. ಹೀಗಾಗಿ ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಜನರು ಈಗ ನಾನಾ ವಿಧಾನಗಳನ್ನು ಅನುಸರಿಸತೊಡಗಿದ್ದಾರೆ.
ಬೇವಿನ ಎಣ್ಣೆಗೆ ತೆಂಗಿನ ಎಣ್ಣೆ ಬೆರೆಸಿ ಮೈಗೆ ಹಚ್ಚಿಕೊಂಡರೆ ಸೊಳ್ಳೆಗಳು ಮೈ ಹತ್ತಿರ ಸುಳಿಯುತ್ತಿಲ್ಲ. ಖಾಯಿಲೆ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಖಾಯಿಲೆ ಬಾರದಂತೆ ನೋಡಿಕೊಳ್ಳುವುದೇ ಜಾಣತನ.












Click it and Unblock the Notifications