ಸುರತ್ಕಲ್ ಟೋಲ್ ಗೇಟ್ ರದ್ದು; ಸಚಿವ ಗಡ್ಕರಿ ಭರವಸೆ
ಮಂಗಳೂರು, ಫೆಬ್ರವರಿ 12: ಸುರತ್ಕಲ್ ಟೋಲ್ ಗೇಟ್ ರದ್ದುಪಡಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಕುರಿತು ಭರವಸೆ ನೀಡಿದ್ದು, ಶೀಘ್ರವೇ ಸಭೆ ಕರೆಯಲು ಆದೇಶ ನೀಡುವುದಾಗಿ ಭರವಸೆ ನೀಡಿದ್ದಾರೆ.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಕರ್ನಾಟಕದ ಹಲವು ಸಂಸದರು ಗುರುವಾರ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ್ದರು. ರಾಜ್ಯದ ಹಲವು ರಸ್ತೆ ಯೋಜನೆಗೆಳ ಬಗ್ಗೆ ಮಾತುಕತೆ ನಡೆಸಿದರು.
ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು-ಉಡುಪಿ ಹೆದ್ದಾರಿಯ ಮಧ್ಯೆ ಬರುವ ಸುರತ್ಕಲ್ ಟೋಲ್ ಗೇಟ್ ರದ್ದುಪಡಿಸುವ ಬಗ್ಗೆ ಮನವಿ ಸಲ್ಲಿಸಿದರು. ಈ ಕುರಿತು ತೀರ್ಮಾನಿಸಲು ಶೀಘ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿಶೇಷ ಸಭೆ ಕರೆಯಲು ಆದೇಶಿಸುವುದಾಗಿ ಸಚಿವರು ಭರವಸೆ ಕೊಟ್ಟಿದ್ದಾರೆ.

ಹಲವು ಯೋಜನೆಗಳು; ನಿತಿನ್ ಗಡ್ಕರಿ ಅವರು ಭಾರತ್ ಮಾಲಾ ಯೋಜನೆಯಡಿ ದ್ವಿಪಥ ರಸ್ತೆಯಾಗಿರುವ ಮುಲ್ಕಿ-ಕಟೀಲು-ಕೈಕಂಬ-ಪೊಳಲಿ-ಬಿ. ಸಿ. ರೋಡು-ಪಾಣೆ ಮಂಗಳೂರು- ತೊಕ್ಕೊಟ್ಟು ಸಂಪರ್ಕಿಸುವ ಮಂಗಳೂರು ನಗರ ಹೊರವರ್ತುಲ ರಸ್ತೆಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಶೀಘ್ರ ಅನುಷ್ಠಾನಗೊಳಿಸುವುದಾಗಿಯೂ ಹೇಳಿದ್ದಾರೆ.
ರಾಜಧಾನಿ ಬೆಂಗಳೂರು-ಮಂಗಳೂರು ಸಂಪರ್ಕಿಸಲು ಪರ್ಯಾಯ ರಸ್ತೆಯಾಗಿರುವ ಮಾಣಿ- ಮೈಸೂರು ರಾಜ್ಯ ಹೆದ್ದಾರಿಯನ್ನು ಮಾಣಿಯಿಂದ ಕುಶಾಲನಗರದ ತನಕ ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪವನ್ನು ಪರಿಗಣಿಸುವುದಾಗಿಯೂ ನಿತಿನ್ ಗಡ್ಕರಿ ತಿಳಿಸಿದ್ದಾರೆ.












Click it and Unblock the Notifications