ದಲಿತ ಹೋರಾಟಗಾರನ ಸಾವಿನ ಸುತ್ತ ಅನುಮಾನದ ಹುತ್ತ; ಪತ್ನಿ,ನಾದಿನಿ ಮೇಲೆ ಸಂಘಟನೆ ಸಂಶಯ
ಮಂಗಳವಾರ, ಸೆಪ್ಟೆಂಬರ್ 19: ದಲಿತ ಹೋರಾಟಗಾರ, ಸಾಹಿತಿ ಬಹುಜನ ಚಳುವಳಿಯ ನೇತಾರ ಪಿ.ಡೀಕಯ್ಯ ಅವರ ನಿಗೂಢ ಸಾವಿನ ಬಗ್ಗೆ ಮತ್ತೆ ಅನುಮಾನದ ಹುತ್ತ ಏಳಲಾರಂಭಿಸಿದೆ. ಡೀಕಯ್ಯ ಅವರ ಸಾವು ಅಸಹಜವಾಗಿದ್ದು, ಡೀಕಯ್ಯರ ಪತ್ನಿ ಅತ್ರಾಡಿ ಅಮೃತಾ ಶೆಟ್ಟಿ, ಪತ್ನಿಯ ತಂಗಿಯ ಮೇಲೆ ತಮಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ತಕ್ಷಣ ಅವರ ಮೇಲೆ ಪ್ರಕರಣ ದಾಖಲಿಸಿ, ಕೂಲಂಕಷವಾಗಿ ತನಿಖೆ ನಡೆಸಿ ಕ್ರಮ ಜರುಗಿಸಬೇಕೆಂದು ದ.ಕ.ಜಿಲ್ಲೆಯ ಜನಪರ ಸಂಘಟನೆಗಳು ಆಗ್ರಹಿಸಿದೆ. ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ದಲಿತ ಜನಪರ ಸಂಘಟನೆಗಳ ಪದಾಧಿಕಾರಿಗಳು, ಡೀಕಯ್ಯ ಅವರ ನಿಗೂಢ ಸಾವಿನ ಬಗ್ಗೆ ನಿಷ್ಪಕ್ಷಪಾತವಾದ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿ.ಡೀಕಯ್ಯರ ಬಾವ ಲೋಲಾಕ್ಷ, ''ಡೀಕಯ್ಯ, ಜುಲೈ 6ರಂದು ಬಿಪಿ ಹೆಚ್ಚಾಗಿ ಮೆದುಳಿನ ರಕ್ತಸ್ರಾವವಾಗಿ ಬೆಳ್ತಂಗಡಿಯ ಗರ್ಡಾಡಿಯ ತಮ್ಮ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ತಾವು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದೆವು ಎಂದು ಡೀಕಯ್ಯರ ಪತ್ನಿ ಅಮೃತಾ ಶೆಟ್ಟಿ ತಿಳಿಸಿದ್ದಾರೆ. ಆದರೆ ಅವರ ತಲೆಯ ಭಾಗದಲ್ಲಿ ಬಲವಾಗಿ ಬಿದ್ದಿರುವ ಏಟಿನ ಬಗ್ಗೆ ಎಲ್ಲೂ ತಿಳಿಸಿಲ್ಲ. ಅಲ್ಲದೆ ಅವರ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅಂಗಾಂಗ ದಾನ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ ಅವರ ಕಣ್ಣುಗಳ ಹೊರತಾಗಿ ಬೇರೆ ಯಾವ ಅಂಗಾಂಗವನ್ನೂ ದಾನ ಮಾಡಲಾಗಿಲ್ಲ'' ಎಂದು ಆರೋಪಿಸಿದ್ದಾರೆ.
ಇರಾನ್ ಮಹ್ಸಾ ಅಮಿನಿಯ ಸಾವು ಪ್ರಕರಣ: ಕೂದಲು ಕತ್ತರಿಸಿ ಹಿಜಾಬ್ ಸುಟ್ಟ ಪ್ರತಿಭಟನಾನಿರತ ಮಹಿಳೆಯರು
ಮೃತದೇಹವನ್ನು ಸ್ನಾನ ಮಾಡಿಸಬಾರದು, ಮೂರು ಗಂಟೆಗಳೊಳಗೆ ದಫನ್ ಕಾರ್ಯ ಮಾಡಬೇಕೆಂದು ಅತ್ರಾಡಿ ಅಮೃತಾ ಶೆಟ್ಟಿ ಹಾಗೂ ಅವರ ತಂಗಿ ವನಿತಾ ಶೆಟ್ಟಿ ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಆತುರ ಆತುರವಾಗಿ ದಫನ್ ಕಾರ್ಯ ಮಾಡಲಾಗಿದೆ. ಅಲ್ಲದೆ ಆಸ್ಪತ್ರೆಯವರು ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಿಲ್ಲ. ಈ ಬಗ್ಗೆ ನಾವು ಅನುಮಾನಗೊಂಡು ಮಣಿಪಾಲ ಆಸ್ಪತ್ರೆಯ ವೈದ್ಯರಲ್ಲಿ ಮಾತನಾಡಿದಾಗ ಅವರು ವಿನಾಕಾರಣ ನಮ್ಮ ಮೇಲೆ ರೇಗಾಡಿದ್ದಾರೆ. ಡೀಕಯ್ಯ ಅವರು ಬಲವಾದ ಹೊಡೆತ ಬಿದ್ದ ಪರಿಣಾಮ ತಲೆಗೆ ಗಾಯವಾಗಿ ಮೃತಪಟ್ಟಿದ್ದಾರೆ ಎಂಬುದು ನಮ್ಮ ಅನುಮಾನ. ಈ ಬಗ್ಗೆ ನಾವು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಇನ್ನೂ ಎಫ್ಐಆರ್ ದಾಖಲಾಗಿಲ್ಲ ಎಂದು ಹೇಳಿದ್ದಾರೆ.
ಇನ್ನಾದರೂ ಪೊಲೀಸರು ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಇದರ ಹಿಂದಿನ ಆರೋಪಿಗಳನ್ನು ಬಯಲಿಗೆಳೆಯಬೇಕು. ಇಲ್ಲದಿದ್ದಲ್ಲಿ ನಾವು ಉಗ್ರವಾದ ಹೋರಾಟ ನಡೆಸುತ್ತೇವೆ ಎಂದು ಲೋಲಾಕ್ಷ ಅವರು ಆಗ್ರಹಿಸಿದ್ದಾರೆ.
ಡೀಕಯ್ಯ ಅವರು ಬಿ.ಎಸ್.ಎನ್.ಎಲ್ ಉದ್ಯೋಗಿಯಾಗಿದ್ದು, 2018ರಲ್ಲಿ ನಿವೃತ್ತಿಯಾಗಿದ್ದರು. ನಿವೃತ್ತಿ ಯಾಗುವ ಸಂಧರ್ಭದಲ್ಲಿ ಡೀಕಯ್ಯ ಅವರಿಗೆ 45 ಲಕ್ಷ ರೂಪಾಯಿ ಪಿಂಚಣಿ ವೇತನ ಲಭ್ಯವಾಗಿತ್ತು. ಈ ಹಣದಲ್ಲಿ 25 ಲಕ್ಷ ರೂಪಾಯಿ ಹಣವನ್ನು ಅವರ ಪತ್ನಿಯ ತಂಗಿ ಅವರಿಗೆ ನೀಡಿದ್ದು, ಹಣ ಮರಳಿ ಕೇಳಿದಾಗ ಕೊಲೆ ಮಾಡಿರಲೂಬಹುದು ಎಂದು ಲೋಲಾಕ್ಷ ಅನುಮಾನ ವ್ಯಕ್ತಪಡಿಸಿದ್ದಾರೆ.
ಡೀಕಯ್ಯ ಮತ್ತು ಅವರ ಪತ್ನಿ ಯ ನಡುವೆ ಸಂಬಂಧ ಅಷ್ಟೇನು ಸರಿಯಾಗಿ ಇರಲಿಲ್ಲ. ಪತಿ ತೀರಿದಾಗ ಪತ್ನಿಯಾದವರು ಶೋಕಾಚರಣೆಯಲ್ಲಿ ಇರಬೇಕಿತ್ತು. ಆದರೆ ಡೀಕಯ್ಯರ ಪತ್ನಿ ಒಂದು ದಿನವೂ ಶೋಕಾಚರಣೆಯಲ್ಲಿ ಇರಲಿಲ್ಲ. ಮಾರನೇ ದಿನವೇ ಸಾರ್ವಜನಿಕವಾಗಿ ಓಡಾಡುತ್ತಿದ್ದರು. ಗಂಡ ತೀರಿದ ಶೋಕವೂ ಅವರಲ್ಲಿ ಇರಲಿಲ್ಲ. ಆಮೇಲೆ ಅವರು ನುಡಿನಮನ ಸಲ್ಲಿಸುವ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಳ್ಳುತ್ತಿದ್ದರು ಅಂತಾ ಆರೋಪಿಸಿದ್ದಾರೆ.
ಡೀಕಯ್ಯ ಅವರು ಜುಲೈ 8 ರಂದು ಮೃತರಾಗಿದ್ದು,ಜುಲೈ9ರಂದು ಅವರ ಅಂತ್ಯಸಂಸ್ಕಾರ ಮಾಡಲಾಗಿತ್ತು..ಕುಟುಂಬಸ್ಥರ ಅನುಮಾನದ ಮೇರೆಗೆ ಜುಲೈ18 ರಂದು ಅವರ ಮೃತದೇಹವನ್ನು ಮಣ್ಣಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ.