ದಕ್ಷಿಣ ಕನ್ನಡ: ಮೌಢ್ಯಕ್ಕೆ ಹೆದರಿ ಅತೀ ಅಪರೂಪದ ಮರ ಕಡಿಯಲು ಮುಂದಾದ ಗ್ರಾಮಸ್ಥರು!
ಮಂಗಳೂರು, ನವೆಂಬರ್ 20: ಪ್ರಪಂಚದ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಶ್ರೀತಾಳೆ ಮರ ಈಗ ಮೌಢ್ಯಕ್ಕೆ ಬಲಿಯಾಗುವ ಹಂತಕ್ಕೆ ತಲುಪಿದೆ. ಈ ತಾಳೆ ಮರದಲ್ಲಿ ಹೂ ಬಿಟ್ಟರೆ ಊರಿಗೆ ಅನಿಷ್ಟ ಎಂಬ ಮೂಢನಂಬಿಕೆ ಗ್ರಾಮೀಣ ಭಾಗದಲ್ಲಿ ಇರುವುದರಿಂದ ಹೂ ಬಿಟ್ಟ ತಾಳೆ ಮರವನ್ನು ಕಡಿಯಲು ಗ್ರಾಮಸ್ಥರು ಮುಂದಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕರಿಮಣೇಲು ಗ್ರಾಮದ ದೇಲಂಪುರಿ ಎಂಬಲ್ಲಿ ನಡೆದಿದೆ.
ಸುಮಾರು 80 ವರ್ಷದಷ್ಟು ಹಳೆಯದಾದ ಶ್ರೀತಾಳೆ ಅಥವಾ ಪಣೋಲಿ ಮರ ಕರಿಮಣೇಲು ಗ್ರಾಮದ ವ್ಯಕ್ತಿಯೋರ್ವರ ಜಮೀನಿನಲ್ಲಿದ್ದು, ಈ ಮರ ಸದ್ಯ ಹೂ ಬಿಟ್ಟಿದೆ. ಹೀಗೆ ಹೂ ಬಿಟ್ಟ ಮರ ಮುಂದಿನ ಎರಡು ವರ್ಷದಲ್ಲಿ ಅವಸಾನ ಹೊಂದುವುದು ಪ್ರಕೃತಿ ನಿಯಮ. ಆದರೆ ತಾಳೆ ಮರ ಹೂ ಬಿಟ್ಟರೆ ಊರಿಗೆ ಅನಿಷ್ಟ ಎಂಬ ನಂಬಿಕೆ ಗ್ರಾಮದವರದ್ದಾಗಿದ್ದು, ಈಗ ಗ್ರಾಮಸ್ಥರು ಸೇರಿ ಮರ ಕಡಿಯಲು ಮುಂದಾಗಿದ್ದಾರೆ. ರವಿವಾರ ಬೆಳಗ್ಗೆ ಒಂಭತ್ತು ಗಂಟೆಗೆ ವಿವಿಧ ಪೂಜಾ ವಿಧಿ ವಿಧಾನದ ಮೂಲಕ ಮರ ಕಡಿಯುವ ಕಾರ್ಯಕ್ರಮವನ್ನು ಗ್ರಾಮಸ್ಥರು ಹಮ್ಮಿಕೊಂಡಿದ್ದಾರೆ.
ಪ್ರಪಂಚದಲ್ಲೇ ಅತೀ ಅಪರೂಪವಾದ ಈ ಮರವನ್ನು ಮೌಢ್ಯದ ಕಾರಣದಿಂದ ಕಡಿಯುತ್ತಿರುವುದು ಪ್ರಾಚ್ಯ ಸಂಶೋಧಕರಿಗೆ ಬೇಸರ ತರಿಸಿದೆ. ಈ ಹಿನ್ನಲೆಯಲ್ಲಿ ಈ ಮರದ ಮಹತ್ವವನ್ನು ಉಡುಪಿಯ ಪ್ರಾಚ್ಯ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಎಸ್.ಎ. ಕೃಷ್ಣಯ್ಯ ಗ್ರಾಮಸ್ಥರಿಗೆ ಮನವರಿಕೆ ಮಾಡಿದ್ದಾರೆ. ಆದರೆ ಗ್ರಾಮಸ್ಥರು ಮಾತ್ರ ಮನವಿಗೆ ಅಸಹಕಾರ ವ್ಯಕ್ತಪಡಿಸಿದ್ದು, ಮರ ಕಡಿದೇ ಕಡಿಯುತ್ತೇವೆ ಅಂತಾ ಹಠ ಹಿಡಿದಿದ್ದಾರೆ.
ಈ ಶ್ರೀತಾಳೆ ಮರ ಬಹಳ ಮಹತ್ವ ಹೊಂದಿದೆ. ಹಸಿರು, ಹಸಿವು, ಅಕ್ಷರ ಸಂಪತ್ತನ್ನು ನೀಗಿಸುವ ಮಹತ್ವದ ಗುಣವನ್ನು ಶ್ರೀತಾಳೆ ಮರ ಹೊಂದಿದೆ. ಈ ಮರ ಹೂ ಬಿಟ್ಟರೆ ಕೇಡುಗಾಲ ವಕ್ಕರಿಸಿದ ಹಾಗೇ, ಸೂತಕದ ಛಾಯೆ ಗ್ರಾಮದವರಿಗೆ ಕಟ್ಟಿಟ್ಟ ಬುತ್ತಿ ಎನ್ನುವ ಮೌಢ್ಯದ ನಂಬಿಕೆಯಿಂದಾಗಿ ಈಗ ಮರ ಕಡಿಯಲು ಗ್ರಾಮಸ್ಥರು ಮುಂದಾಗಿದ್ದಾರೆ.
ಈ ಮರದ ವೈಜ್ಞಾನಿಕ ನಾಮ "ಕೊರಿಫಾ ಅಂಬ್ರಕುಲಿಫೆರಾ' (Corypha Umbraculifera) ಎಂಬುವುದಾಗಿದ್ದು, ಇಂಡೋನೇಷ್ಯಾ ಭಾಗದಲ್ಲಿ "ಲೊಂಟಾರ' (Lontara) ಎಂಬುದಾಗಿ ಕರೆಯುತ್ತಾರೆ. ಈ ಮರಕ್ಕೆ ಕನ್ನಡದಲ್ಲಿ ಶ್ರೀತಾಳೆ/ ಸೀತಾಳೆ, ಸಂಸ್ಕೃತದಲ್ಲಿ ಅವಿನಾಶಿ, ಕೇರಳದಲ್ಲಿ ಕೊಡಪಣ ಮರ ಹಾಗೂ ತುಳುವಿನಲ್ಲಿ ಪಣೋಲಿದ ಮರ ಎಂದೂ ಕರೆಯುತ್ತಾರೆ.
ಈ ಮರವು ಸುಮಾರು 66 ವರ್ಷಗಳಿಗೊಮ್ಮೆ ಹೂ ಬಿಡವುದರ ಮೂಲಕ ಎರಡು ಲಕ್ಷಕ್ಕೂ ಹೆಚ್ಚು ಬೀಜವನ್ನು ಬಿಡುತ್ತದೆ. ಈ ಮರದ ಒಡಲಲ್ಲಿ ಸುಮಾರು 200- 250 ಕೆ.ಜಿ.ಯಷ್ಟು ಸಬ್ಬಕ್ಕಿಯಂತ ಹಿಟ್ಟು/ ತಿರುಳು ದೊರಕುತ್ತದೆ. ಇಂತಹ ಮರಗಳು ಕಾಡು- ನಾಡಿನಲ್ಲಿ ಇದ್ದರೆ ಸುಮಾರು 100 ಕುಟುಂಬಗಳು 3 ತಿಂಗಳುಗಳ ಕಾಲದಷ್ಟು ಆಹಾರವನ್ನು ಪಡೆಯಬಹುದು. ಇದರಲ್ಲಿ ಸಂಗ್ರಹ ಮಾಡಿದ ಸುಮಾರು 38,000 ಬೀಜಗಳನ್ನು ಕಾವೇರಿಯಿಂದ ವಾರಣಾಸಿಯವರೆಗೆ ಈಗಾಗಲೇ ಪ್ರಸಾರಣ ಮಾಡಲಾಗಿದೆ.
ಭಾರತೀಯ ಇತಿಹಾಸ, ಪುರಾಣ, ಕಾವ್ಯಗಳನ್ನು ಅಕ್ಷರ ರೂಪದಲ್ಲಿ ಬರೆದಿರುವುದು ಈ ಮರದ ಎಲೆಗಳಲ್ಲಿಯೇ. ಇವುಗಳನ್ನು "ತಾಡೋಲೆ ಗ್ರಂಥ' ಎಂದು ಕರೆಯಲಾಗುತ್ತದೆ. ಇಂತಹ ಅನೇಕ ಮರಗಳು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿದ್ದು, ಅವುಗಳ ರಕ್ಷಣಾ ಕೆಲಸ ಮಾತ್ರ ತುಂಬಾ ಕಷ್ಟಸಾಧ್ಯವಾಗಿದೆ. ಏಕೆಂದರೆ ಈ ಮರವು ಹೂ ಬಿಟ್ಟು ಅರಳಿ ನಿಂತರೆ ಊರಿಗೆ, ಮನೆಯ ಯಜಮಾನನಿಗೆ ಅನಿಷ್ಟವೆಂದು ಕಡಿದುರುಳಿಸಲಾಗುತ್ತಿದೆ ಎಂದು ಪ್ರಾಚ್ಯವಸ್ತು ಸಂಶೋಧಕ ಪ್ರೋ.ಎಸ್.ಎ. ಕೃಷ್ಣಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
Recommended Video
ಅಲ್ಲದೇ ಈ ಮರ ಮಣ್ಣಿನ ಸವಕಳಿಯನ್ನು ನಿಯಂತ್ರಣ ಮಾಡುತ್ತದೆ. ಹೂ ಬಿಟ್ಟ ಬಳಿಕ ಸಾಯುವ ಈ ಮರ ಸುಮಾರು ಮೂರು ಲಕ್ಷ ಬೀಜಗಳನ್ನು ಉತ್ಪತ್ತಿ ಮಾಡುತ್ತದೆ. ಇವುಗಳಲ್ಲಿ ಕನಿಷ್ಠ ಶೇ.10ರಷ್ಟು ಬೀಜ ಮತ್ತೆ ಸಸಿಯಾಗುತ್ತದೆ. ಈ ಮರ ಒಂದು ಕಿಲೋಮೀಟರ್ವರೆಗೂ ಬೇರುಗಳನ್ನು ಚಾಚುವ ಮೂಲಕ ಮಣ್ಣಿನ ಸವಕಳಿಯನ್ನು ತಡೆಯಬಹುದಾಗಿದೆ. ಅನೇಕ ಕಾಯಿಲೆಗಳನ್ನು ಶಮನ ಮಾಡುವ ಗುಣವನ್ನು ಈ ಮರ ಹೊಂದಿದೆ. ಹೀಗಾಗಿ ಮರದ ಮಹತ್ವವನ್ನು ತಿಳಿದು ಮರ ಕಡಿಯಬೇಡಿ ಅನ್ನೋದು ಸಂಶೋಧಕರ ಮನವಿಯಾಗಿದೆ.
ಆದರೆ ಕರಿಮಣೇಲು ಗ್ರಾಮಸ್ಥರು ಮಾತ್ರ ಮರ ಕಡಿದೇ ಸಿದ್ಧ ಎಂಬ ತೀರ್ಮಾನಕ್ಕೆ ಬಂದಿದ್ದು, ಅರಣ್ಯ ಇಲಾಖೆ ಮಧ್ಯೆ ಪ್ರವೇಶಿಸಿ ಮರವನ್ನು ಉಳಿಸಬೇಕೆನ್ನುವುದು ಪರಿಸರವಾದಿಗಳ ಒತ್ತಾಯವಾಗಿದೆ.