ಕೋವಿಡ್ ಹೆಚ್ಚಳ; ದಕ್ಷಿಣ ಕನ್ನಡ-ಕೇರಳ ಗಡಿ 9 ರಸ್ತೆಗಳು ಬಂದ್
ಮಂಗಳೂರು, ಫೆಬ್ರವರಿ 22: ಕೇರಳದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕರ್ನಾಟಕ-ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಉಭಯ ರಾಜ್ಯಗಳನ್ನು ಸಂಪರ್ಕಿಸುವ 9 ರಸ್ತೆಗಳನ್ನು ದಕ್ಷಿಣ ಜಿಲ್ಲಾಡಳಿತ ಸೋಮವಾರದಿಂದ ಬಂದ್ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಈ ಕುರಿತು ಆದೇಶ ಹೊರಡಿಸಿದ್ದಾರೆ. ಫೆಬ್ರವರಿ 22ರ ಸೋಮವಾರ ಮುಂಜಾನೆ 6 ಗಂಟೆಯಿಂದ ಮುಂದಿನ ಆದೇಶದ ತನಕ ಕೇರಳದಿಂದ ಜಿಲ್ಲೆಯನ್ನು ಸಂಪರ್ಕಿಸುವ 9 ರಸ್ತೆಗಳನ್ನು ಮುಚ್ಚಲಾಗಿದೆ.
ಕೇರಳದಿಂದ ಆಗಮಿಸುವವರು ತಲಪಾಡಿ, ಸಾರಡ್ಕ, ನೆಟ್ಟಣಿಗ, ಮುಡ್ನೂರು, ಮೇಣಾಲ ಮತ್ತು ಜಾಲ್ಸೂರು ಮೂಲಕ ಮಾತ್ರ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ. ಉಳಿದ ಎಲ್ಲಾ ಗಡಿಗಳನ್ನು ಬಂದ್ ಮಾಡಲಾಗುತ್ತಿದೆ.

ಕರ್ನಾಟಕಕ್ಕೆ ಪ್ರವೇಶಿಸಲು ತೆರೆದಿರುವ ಗಡಿಗಳಲ್ಲಿ ಕೋವಿಡ್ ನೆಗೆಟಿವ್ ವರದಿ ಇರುವುದನ್ನು ಖಚಿತಪಡಿಸಿಕೊಂಡು ಜಿಲ್ಲೆಗೆ ಪ್ರವೇಶ ನೀಡಲಾಗುತ್ತದೆ. ಗಡಿಗಳ ಚೆಕ್ ಪೋಸ್ಟ್ಗಳಲ್ಲಿ ಆರೋಗ್ಯ ಇಲಾಖೆಯ ತಂಡ ತಪಾಸಣೆಗಾಗಿ ಪಾಳಿಯಲ್ಲಿ ಕೆಲಸ ಮಾಡಲಿದೆ.
ಕೇರಳದಿಂದ ಬರುವ ಪ್ರಯಾಣಿಕರು ಗಡಿ ಚೆಕ್ ಪೋಸ್ಟ್ಗಳಲ್ಲಿ ಹೆಸರು ದಾಖಲು ಮಾಡುವುದು ಕಡ್ಡಾಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಪ್ರತಿಯೊಬ್ಬರು ಸಹ 72 ಗಂಟೆಯೊಳಗೆ ನಡೆಸಲಾದ ಆರ್ಟಿಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕೇರಳ-ಕರ್ನಾಟಕ ಗಡಿಯಲ್ಲಿ ಪ್ರತಿದಿನ ಸುಮಾರು 2 ಲಕ್ಷ ಜನರು ಸಂಚಾರ ನಡೆಸುತ್ತಾರೆ. ಈಗ ಕೆಲವು ರಸ್ತೆಗಳನ್ನು ಜಿಲ್ಲಾಡಳಿತ ಬಂದ್ ಮಾಡಿದ್ದರಿಂದ ಕೆಲವು ಗಡಿಗಳಲ್ಲಿ ಜನರು ಸುಮಾರು 10 ಕಿ. ಮೀ. ಹೆಚ್ಚು ಸಂಚಾರ ಮಾಡಬೇಕಿದೆ.
ಚೆಕ್ ಪೋಸ್ಟ್ಗಳಲ್ಲಿ ಪ್ರತಿದಿನ ಪ್ರಯಾಣಿಸುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ತಮ್ಮ ಗುರುತಿನ ಚೀಟಿ ಹಾಗೂ ಆರ್ಟಿಪಿಸಿಆರ್ ನೆಗೆಟಿವ್ ವರದಿಯನ್ನು ಸಲ್ಲಿಸಬೇಕು. ಆದರೆ, ಗಡಿಯಲ್ಲಿ ಆಂಬ್ಯುಲೆನ್ಸ್ಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಕೇರಳ ರಾಜ್ಯದಲ್ಲಿ ಭಾನುವಾರ 4070 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಹೊಸ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 220.












Click it and Unblock the Notifications