ಮಂಗಳೂರಲ್ಲಿ ಮೋದಿ ಸ್ವಾಗತಕ್ಕೆ ಚೌಕಿದಾರ್ ವೇಷ ಧರಿಸಿದ ಬಿಜೆಪಿ ಮುಖಂಡ
ಮಂಗಳೂರು, ಏಪ್ರಿಲ್ 13: ಪ್ರಧಾನಿ ನರೇಂದ್ರ ಮೋದಿ ಇಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಮೋದಿ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ನಗರದ ಕೇಂದ್ರ ಮೈದಾನದಲ್ಲಿ ನಡೆಯಲಿರುವ ಬಿಜೆಪಿಯ ಬೃಹತ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.
ಈ ಹಿನ್ನೆನೆಯಲ್ಲಿ ಮಂಗಳೂರಿನಲ್ಲಿ ಮೋದಿ ಮೇನಿಯಾ ಆರಂಭವಾಗಿದೆ. ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕೇಸರಿ ಪಾಳಯದಲ್ಲಿ ಚುನಾವಣಾ ರಣೋತ್ಸಾಹ ಇಮ್ಮಡಿಯಾಗಿದೆ. ಈ ನಡುವೆ ಬಂದರು ನಗರಿ ಮಂಗಳೂರಿಗೆ ಆಗಮಿಸುತ್ತಿರುವ ಮೋದಿ ಅವರನ್ನು ವಿಶಿಷ್ಟ ರೀತಿ ಯಲ್ಲಿ ಸ್ವಾಗತಿಸಲು ದಕ್ಷಿಣ ಕನ್ನಡ ಬಿಜೆಪಿ ಘಟಕ ಮುಂದಾಗಿದೆ.
ಪ್ರಧಾನಿ ಮೋದಿ ಮಂಗಳೂರಿಗೆ ಆಗಮನ ಹಿನ್ನೆಲೆಯಲ್ಲಿ ಮೋದಿ ಸ್ವಾಗತಕ್ಕೆ ಚೌಕಿದಾರ್ ವೇಷದ ಸಮವಸ್ತ್ರ ಧರಿಸಿ ಮೋದಿ ಅವರನ್ನು ಬರಮಾಡಿ ಕೊಳ್ಳಲು ಕೇಸರಿ ಪಡೆ ಸಜ್ಜಾಗಿದೆ. ಇಂದು ನೂರಾರು ಬಿಜೆಪಿ ಕಾರ್ಯಕರ್ತರು ಹಾಗು ಮುಖಂಡರು ಚೌಕಿದಾರ್ ಖಾಕಿ ವಸ್ತ್ರ ಧಾರಿಗಳಾಗಿ ಕಾಣಿಸಲಿದ್ದಾರೆ.

ಮೈ ಭಿ ಚೌಕಿದಾರ್ ಎಂದು ಬರೆದಿರುವ ಖಾಕಿ ಸಮವಸ್ತ್ರ, ಖಾಕಿ ಟೋಪಿ ಧರಿಸಿ ಬಿಜೆಪಿ ಕಾರ್ಯಕರ್ತರು ಮೋದಿ ಅವರನ್ನು ಸ್ವಾಗತಿಸಲಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ವಿಭಿನ್ನ ರೀತಿ ಯಲ್ಲಿ ಮೋದಿ ಅವರನ್ನು ಸ್ವಾಗತಿಸಲು ತಯಾರಿ ನಡೆಸಲಾಗಿದೆ. ಈ ನಡುವೆ ಚೌಕಿದಾರ್ ಸಮವಸ್ತ್ರ ಧರಿಸಿದ ಶಾಸಕ ಹರೀಶ್ ಪೂಂಜಾ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಪ್ರಧಾನಿ ಮೋದಿಯವರನ್ನು ಕಾಂಗ್ರೇಸ್ ಹಾಗೂ ಇತರ ವಿರೋಧ ಪಕ್ಷಗಳು ಚೌಕಿದಾರ್ ಚೋರ್ ಹೈ ಎನ್ನುವ ಮೂಲಕ ಚುಡಾಯಿಸಲೂ ಆರಂಭಿಸಿದ್ದವು . ಈ ಹಿನ್ನೆಲೆಯಲ್ಲಿಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡಾ ಮೈ ಭೀ ಚೌಕೀದಾರ್ ಎನ್ನುವ ಅಭಿಯಾನವನ್ನೇ ಆರಂಭಿಸಿತ್ತು. ದೇಶದಾದ್ಯಂತ ಈ ಆಭಿಯಾನಕ್ಕೆ ಭಾರೀ ಜನ ಬೆಂಬಲ ಕೂಡ ದೊರೆತಿತ್ತು. ಈ ಅಭಿಯಾನವನ್ನು ಇಂದು ಪ್ರಧಾನಿ ಮೋದಿಯೆದುರು ವಿಶೇಷ ರೀತಿಯಲ್ಲಿ ಅನಾವರಣಗೊಳಿಸಲು ದಕ್ಷಿಣ ಕನ್ನಡ ಬಿಜೆಪಿ ಘಟಕ ಸಿದ್ಧತೆ ಮಾಡಿ ಕೊಂಡಿದೆ.












Click it and Unblock the Notifications