ಬಂಗಾಳ ಕೊಲ್ಲಿಯಲ್ಲಿ 'ಯಾಸ್' ಚಂಡಮಾರುತ; ರಾಜ್ಯ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ
ಮಂಗಳೂರು, ಮೇ 20: ಅರಬ್ಬೀ ಸಮುದ್ರದಲ್ಲಿ ತೌಕ್ತೆ ಚಂಡಮಾರುತ ಅಬ್ಬರಿಸಿದ ಬಳಿಕ ಬಂಗಾಳ ಕೊಲ್ಲಿಯಲ್ಲಿ ಯಾಸ್ ಚಂಡಮಾರುತ ಏಳಲಿದ್ದು, ಇದರ ಪರಿಣಾಮವೂ ರಾಜ್ಯ ಕರಾವಳಿಗೆ ತಟ್ಟುವ ಸಾಧ್ಯತೆಗಳಿವೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಮಾರುತಗಳು ಬಲ ಪಡೆದುಕೊಂಡಿದ್ದು, ಚಂಡಮಾರುತವಾಗಿ ಬದಲಾಗಲಿದೆ. ಮೇ 23ರಂದು ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಲಿದೆ. ಈ ಹಿನ್ನಲೆಯಲ್ಲಿ ರಾಜ್ಯ ಕರಾವಳಿಗೂ ಚಂಡಮಾರುತದ ಪರಿಣಾಮ ಬೀರಲಿದ್ದು, ಭಾರೀ ಮಳೆಯ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ.
ಭಾರತದ ಕರಾವಳಿಗೆ ಮೇ 26ಕ್ಕೆ ಯಾಸ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ
ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮೇ 31 ರಂದು ಕೇರಳಕ್ಕೆ ಮುಂಗಾರು ಪ್ರವೇಶವಾಗುವ ಬಗ್ಗೆ ಮುನ್ಸೂಚನೆ ನೀಡಿದ್ದು, ರಾಜ್ಯದಲ್ಲಿ ವಾಡಿಕೆಗಿಂತ ಮೊದಲೇ ಮುಂಗಾರಿನ ಆಗಮನವಾಗುವ ಸಾಧ್ಯತೆಗಳಿವೆ.
ಮೇ 23ರಂದು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಅಬ್ಬರಿಸುವ ಹಿನ್ನಲೆಯಲ್ಲಿ ರಾಜ್ಯದ ಕರಾವಳಿಯಲ್ಲಿ ಮೇ 23ರಿಂದ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ರಾಜ್ಯ ಕರಾವಳಿ, ಕೇರಳ ಕರಾವಳಿ ಮತ್ತು ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಿಗೆ ಚಂಡಮಾರುತದ ಪ್ರಭಾವ ಕಾಣಿಸಲಿದೆ.
ರಾಜ್ಯ ಕರಾವಳಿ ಭಾಗಕ್ಕೆ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದು, ವಾಡಿಕೆಗಿಂತಲೂ ಹೆಚ್ಚಾಗಿ ಮಳೆ ಸುರಿದಿದೆ. ಇನ್ನೂ ಎರಡು ವಾರಗಳ ಕಾಲ ಮುಂಗಾರು ಪೂರ್ವದ ಕಾಲಾವಧಿ ಇರುವುದರಿಂದ ಮತ್ತೆ ಉತ್ತಮ ಮಳೆ ಸುರಿಯುವ ಸಾಧ್ಯತೆಗಳಿವೆ. ಮುಂಗಾರು ಪೂರ್ವ ಮಳೆ ಈ ಭಾರಿ ವಾಡಿಕೆಗಿಂತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.188ರಷ್ಟು ಸುರಿದರೆ, ಉಡುಪಿ ಜಿಲ್ಲೆಯಲ್ಲಿ ಶೇ.284ರಷ್ಟು ಮಳೆಯಾಗಿದೆ.