19 ವರ್ಷಗಳಿಂದ ನಿರ್ಗತಿಕರ ಪಾಲಿನ ಅನ್ನದಾತೆ ಕೊರಿಯನ್ ರಸ್ಕಿನ್
ಮಂಗಳೂರು, ಅಕ್ಟೋಬರ್ 15: ಕತ್ತಲಾಗುತ್ತಿದ್ದಂತೆ ಮಂಗಳೂರಿನ ರಸ್ತೆಗಳಲ್ಲಿ ಮಹಿಳೆಯೊಬ್ಬರು ರಸ್ತೆ ಬದಿ ಮಲಗಿದವರನ್ನು ಎಚ್ಚರಿಸಿ ಊಟ ಮಾಡಿದೆಯಾ ಎಂದು ಕೇಳುತ್ತಾರೆ. ಅವರ ಆರೋಗ್ಯ ವಿಚಾರಿಸುತ್ತಾರೆ. ಆ ಮಹಿಳೆ ಬರುವಿಕೆಯನ್ನು ನಿರ್ಗತಿಕರು, ಅಲೆಮಾರಿಗಳು, ಹಿರಿಯ ಜೀವಗಳು ಪ್ರೀತಿಯಿಂದ ಕಾಯುತ್ತವೆ. ಗೌರವದಿಂದ ಕಾಣುತ್ತವೆ.
ಪ್ರತಿನಿತ್ಯ ಆ ಮಹಿಳೆ ಮಂಗಳೂರಿನ ರಸ್ತೆಗಳ ಪಕ್ಕದಲ್ಲಿ ಮಲಗುವ 150ಕ್ಕೂ ಹೆಚ್ಚು ಜನರಿಗೆ ಅನ್ನದಾತೆ. ಅನಾರೋಗ್ಯ ಪೀಡಿತರ ಪಾಲಿಗೆ ವೈದ್ಯೆ, ನರ್ಸ್. ಇವರ ಅನ್ನದಾಸೋಹ ಕಳೆದ 19 ವರ್ಷಗಳಿಂದ ಮಂಗಳೂರಿನಲ್ಲಿ ಸದ್ದಿಲ್ಲದೇ ನಡೆಯುತ್ತಿದೆ.
ಮಂಗಳೂರಿನಲ್ಲಿ ಕತ್ತಲಾಗುತ್ತಿದ್ದಂತೆ ನಗರದ ಬೀದಿ ಬೀದಿಗಳಲ್ಲಿ ನೂರಾರು ಜನ ರಸ್ತೆ ಕಾತರದಿಂದ ಕಾಯುತ್ತಿರುತ್ತಾರೆ. ದಣಿದ ದೇಹದೊಂದಿಗೆ ತಾಯ್ತನದ ಪ್ರೀತಿಯ ಆರೈಕೆಗಾಗಿ ಕಾತರದೊಂದಿಗೆ ಆ ಹಿರಿಯ ಜೀವಗಳ ಕಣ್ಣುಗಳು ಕಾಯುತ್ತಿರುತ್ತವೆ. ಹೀಗೆ ಹಿರಿಯ ಜೀವಿಗಳು ಕಗ್ಗತ್ತಲ ರಾತ್ರಿಯಲ್ಲಿ ಕಾತರದಿಂದ ಕಾಯುವುದು ಕೊರಿಯನ್ ರಸ್ಕಿನಾ ಅವರಿಗಾಗಿ.

ನಿರ್ಗತಿಕರಿಗೆ ಊಟ ಹಂಚುವ ಅನ್ನದಾತೆ
ಕೊರಿಯನ್ ರಸ್ಕಿನಾ ಕತ್ತಲಾಗುತ್ತಿದ್ದಂತೆ ತಮ್ಮ ಕಾರನ್ನು ಹತ್ತಿ ಮಂಗಳೂರಿನ ಬೀದಿ ಬೀದಿ ಸುತ್ತುತ್ತಾರೆ. ರಸ್ತೆ ಬದಿ ಮಲಗಿದ ಹಸಿದ ಜೀವಗಳಿಗೆ ಹೊಟ್ಟೆ ತುಂಬ ಊಟ ನೀಡುತ್ತಾರೆ. ಕೆಲವು ರಸ್ತೆಗಳಲ್ಲಿ ಕೊರಿಯನ್ ರಸ್ಕಿನಾ ಅವರಿಗಾಗಿ ನಿರ್ಗತಿಕರು , ಭಿಕ್ಷುಕರು , ಅಲೆಮಾರಿಗಳು , ವಿಕಲಚೇತನರು ಸಾಲುಗಟ್ಟಿ ನಿಂತು ಕಾಯುತ್ತಿರುತ್ತಾರೆ. ಬಿಸಿ ಬಿಸಿ ಊಟ ಕಟ್ಟಿ ತರುವ ಕೊರಿಯನ್ ರಸ್ಕಿನಾ ನಗರದ ಬೀದಿ ಬೀದಿ ಸುತ್ತಿ ನಿರ್ಗತಿಕರಿಗೆ ಅವುಗಳನ್ನು ಹಂಚುತ್ತಾರೆ.

ಪ್ರತಿದಿನ 150ಕ್ಕೂ ಹೆಚ್ಚು ಜನರಿಗೆ ಊಟ
ಹಸಿವಿನ ವಿಕಾರತೆಯನ್ನು ತೀರ ಹತ್ತಿರದಿಂದ ನೋಡಿದ ಕೊರಿಯನ್ ರಸ್ಕಿನಾ ಇಂತಹ ಸ್ಥಿತಿಯಲ್ಲಿ ಯಾರು ಇರಬಾರದೆಂದು ಸಂಕಲ್ಪ ತೊಟ್ಟಿದ್ದು 19 ವರ್ಷಗಳ ಹಿಂದೆ. ಅಲ್ಲಿಂದ ಪ್ರತಿದಿನ ರಸ್ತೆ ಬದಿಯಲ್ಲಿ ಮಲಗುವವರನ್ನು ಎಚ್ಚರಿಸಿ ಊಟ ನೀಡಿ ಅವರು ಊಟ ಮಾಡುವರೇ ಎಂದು ನಿಂತು ನೋಡಿ ನಂತರ ಮುಂದೆ ಸಾಗುತ್ತಾರೆ. ರಸ್ತೆ ಬದಿಯಲ್ಲಿ ಅನಾರೋಗ್ಯ ಪೀಡಿತರಾಗಿ ಮಲಗಿದವರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡುವ ಕೊರಿಯನ್ ರಸ್ಕಿನಾ ಪ್ರತಿದಿನ 150ಕ್ಕೂ ಹೆಚ್ಚು ಜನರಿಗೆ ಊಟ ವಿತರಿಸುತ್ತಾರೆ.

ಬದುಕು ಬದಲಿಸಿದ ಕ್ಯಾನ್ಸರ್
ಶ್ರೀಮಂತ ಮನೆತನದಲ್ಲಿ ಹುಟ್ಟಿ ಐಷಾರಾಮಿ ಜೀವನ ಒಗ್ಗೂಡಿಸಿಕೊಂಡಿದ್ದ ಕೊರಿಯನ್ ರಸ್ಕಿನಾ ಈ ಹಿಂದೆ ತಮ್ಮ ವಿಲಾಸ ಜೀವನವನ್ನು ಪಾರ್ಟಿ, ಕ್ಲಬ್ ಗಳಲ್ಲೇ ಕಳೆದವರು . ಆದರೆ ಕ್ಯಾನ್ಸರ್ ಪೀಡಿತರಾಗಿ ಸಾವಿನ ಕದ ತಟ್ಟಿ ಬಂದ ಬಳಿಕ ರಸ್ಕಿನಾ ತಮ್ಮ ಜೀವನ ಶೈಲಿಯನ್ನೇ ಬದಲಿಕೊಂಡರು.

ವಿಲಾಸಿ ಜೀವನಕ್ಕೆ ಗುಡ್ ಬೈ
ಕೊರಿಯನ್ ರಸ್ಕಿನಾ ರಸ್ತೆ ಬದಿಯಲ್ಲಿ ಕೋಳಿ ತ್ಯಾಜ್ಯ, ಕೊಳೆತ ಆಹಾರ, ಕಾಗದ ತಿಂದು ಹಸಿವು ನೀಗಿಸಿಕೊಳ್ಳುವ ಜನರನ್ನು ಕಣ್ಣಾರೆ ಕಂಡ ಬಳಿಕ ತಮ್ಮ ವಿಲಾಸ ಜೀವನಕ್ಕೆ ಇತಿಶ್ರೀ ಹಾಡಿದರು.
ಹಸಿದವರಿಗೆ ಅನ್ನ ನೀಡುವ ಸಂಕಲ್ಪದೊಂದಿಗೆ ಮುಂದೆ ಸಾಗಿದರು. ಅನಾರೋಗ್ಯ ಪೀಡಿತರಾಗಿ ಔಷಧಿಗಾಗಿ ಹಣವಿಲ್ಲದೇ ಪರಿತಪಿಸುವವರಿಗೆ ಔಷಧಿಗಳನ್ನು ತಂದು ಹಂಚಲು ಆರಂಭಿಸಿದರು.

ಪತ್ನಿ ಸೇವೆಗೆ ಪತಿ ಸಾಥ್
ಕಳೆದ 19 ವರ್ಷಗಳಿಂದ ನಿರಂತರವಾಗಿ ಈ ಸೇವೆ ಸದ್ದಿಲ್ಲದೇ ನಡೆಯುತ್ತಾ ಬಂದಿದೆ. ಪ್ರತಿದಿನ ರಾತ್ರಿ ತಮ್ಮ ಕಾರು ಹತ್ತಿ ಸಾಗಿ ಬರುವ ಕೊರಿಯನ್ ರಸ್ಕಿನಾ ಹಸಿದವರಿಗೆ ಊಟ ನೀಡಿದ ಬಳಿಕವೇ ಆಹಾರ ಸೇವಿಸುವ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ. ರಸ್ಕಿನಾ ಅವರ ಈ ಕಾರ್ಯಕ್ಕೆ ಅವರ ಪತಿ ಕೂಡ ಸಾಥ್ ನೀಡುತ್ತಾರೆ.

ವಾರದ ಆರು ದಿನ ಹಸಿದವರಿಗೆ ಊಟ
ಪ್ರತಿದಿನ ಹಂಚುವ ಉಟದಲ್ಲಿ ಕೇವಲ ಅನ್ನಸಾರು ಮಾತ್ರ ವಿರದೇ ಶುಕ್ರವಾರದಂದು ಮೊಟ್ಟೆ ಸಾರು, ಅನ್ನ ಹಾಗೂ ಒಂದು ಬೇಯಿಸಿದ ಮೊಟ್ಟೆ ಕೂಡ ಇರುತ್ತದೆ. ಅದಲ್ಲದೇ ಭಾನುವಾರ ವೆಜ್ ಬಿರಿಯಾನಿ ಇರುತ್ತದೆ. ಕಳೆದ 19 ವರ್ಷಗಳಲ್ಲಿ ಈ ಪರಿಪಾಠ ಒಂದು ದಿನವೂ ನಿಂತಿಲ್ಲ. ಗುರುವಾರ ಹೊರತು ಪಡಿಸಿ ವಾರದ 6 ದಿನವೂ ಹಸಿದವರಿಗೆ ಊಟ ನೀಡುತ್ತಾರೆ ಕೊರಿಯನ್ ರಸ್ಕಿನಾ.

ಸಾಮಾಜಿಕ ಕಾರ್ಯ
ಕೊರಿಯನ್ ರಸ್ಕಿನಾ ಹಾಗೂ ಅವರ ಪತಿ ಮಂಗಳೂರಿನಲ್ಲಿ ವೈಟ್ ಡೌವ್ಸ್ ಎಂಬ ಹೆಸರಿನ ಸಾಮಾಜಿಕ ಸಂಸ್ಥೆಯೊಂದನ್ನು ಹುಟ್ಟು ಹಾಕಿದ್ದಾರೆ. ಅದಲ್ಲದೇ 2 ಆಶ್ರಮಗಳನ್ನು ನಡೆಸುತ್ತಿದ್ದು ಮತಿ ಭ್ರಮಣೆಗೊಂಡವರಿಗೆ, ಅನಾರೋಗ್ಯ ಪೀಡಿತರಿಗೆ, ಅತ್ಯಾಚಾರಕ್ಕೆ ಗುರಿಯಾದ ಸಂತ್ರಸ್ತರಿಗೆ, ಅನಾಥ ಮಕ್ಕಳಿಗೆ ಆಶ್ರಯ ನೀಡಿದ್ದಾರೆ. ಹಸಿದವರಿಗೆ ಅನ್ನ ನೀಡುವ ಕಾಯಕ ಇನ್ನು ಹತ್ತಾರು ವರ್ಷ ಮುಂದುವರೆಯಲಿ ಎನ್ನುವುದೇ ಹಸಿದವರ ಮನದಾಳದ ಹಾರೈಕೆ.












Click it and Unblock the Notifications