ಶರತ್ ಹತ್ಯೆ ತನಿಖೆ: ಪೊಲೀಸರಿಗೆ ಎದುರಾಗಿದೆಯೇ ತಾಂತ್ರಿಕ ಸಮಸ್ಯೆ?
ದಕ್ಷಿಣಕನ್ನಡ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಆರ್ ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣ ನಡೆದು ತಿಂಗಳು ಕಳೆದಿದೆ. ಆದರೆ ಪೊಲೀಸ್ ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧಿಸದೇ ವಿಫಲವಾಗಿದೆ.
ಮಂಗಳೂರು, ಆಗಸ್ಟ್ 5: ದಕ್ಷಿಣಕನ್ನಡ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಆರ್ ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣ ನಡೆದು ತಿಂಗಳು ಕಳೆದಿದೆ. ಆದರೆ ಪೊಲೀಸ್ ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧಿಸದೇ ವಿಫಲವಾಗಿದೆ.
ಜುಲೈ 4ರಂದು ಶರತ್ ಅವರ ಹತ್ಯೆಯಾಗಿತ್ತು. ಪ್ರಕರಣ ನಡೆದು ತಿಂಗಳೇ ಕಳೆದಿದ್ದರೂ, ತನಿಖೆಯು ಇನ್ನು ಪ್ರಾಥಮಿಕ ಹಂತದಲ್ಲೇ ಇರುವುದಕ್ಕೆ ಖುದ್ದು ಪೊಲೀಸರೇ ಅಸಹಾಯಕರಾಗಿದ್ದಾರೆ. ತನಿಖೆಯಲ್ಲಿ ಹಲವಾರು ತಾಂತ್ರಿಕ ಕಾರಣಗಳು ಎದುರಾಗಿರುವುದರಿಂದ ತನಿಖೆ ಕುಂಟುತ್ತಾ ಸಾಗಿದೆ ಎಂದು ಹೇಳಲಾಗಿದೆ.

ಪೊಲೀಸರ ಅಸಹಾಯಕತೆ: ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರ ಪ್ರಕಾರ, ತನಿಖೆ ಆರಂಭಿಸಿದ ಪೊಲೀಸರ ತಂಡ, ಕೊಲೆ ನಡೆದ ಸಂದರ್ಭದಲ್ಲಿ ಪರಿಸರದಲ್ಲಿದ್ದ ಮೊಬೈಲ್ ಟವರ್ ಗಳಲ್ಲಿ ಬಳಕೆಯಾದ ಪೋನ್ ನಂಬರ್ ಗಳ ಸಿಡಿಆರ್ ತೆಗೆದು ಪರಿಶೀಲಿಸುತ್ತಿದೆ.
ತನಿಖೆ ನಡೆಸುತ್ತಿರುವ ತಂಡಗಳಲ್ಲಿ ಒಂದಾದ ಮಂಗಳೂರು ಸಿಸಿಬಿ ತಂಡ ಮೊಬೈಲ್ ಸಂಖ್ಯೆಯೊಂದರ ಜಾಡು ಹಿಡಿದು ಮುಂಬಯಿಯ ತನಕ ಹೋಗಿ ಬರಿಗೈಯಲ್ಲಿ ಹಿಂದಿರುಗಿದೆ. ಇದರಿಂದ ಯಾವುದೇ ಪ್ರಯೋಜನವಾದಂತಿಲ್ಲ.

ಶರತ್ ಹತ್ಯೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿದ್ದ ಸಿಸಿಟಿವಿಯೊಂದರಲ್ಲಿ 3 ಜನರ ತಂಡ ಬೈಕೊಂದರಲ್ಲಿ ತೆರಳುತ್ತಿರುವ ದೃಶ್ಯಾವಳಿ ಪೊಲೀಸರಿಗೆ ದೊರಕಿದೆ. ಆದರೆ ಅದು ಅಸ್ಪಷ್ಟವಾಗಿರುವ ಕಾರಣ ದುಷ್ಕರ್ಮಿಗಳ ಪತ್ತೆ ಸಾಧ್ಯವಾಗಿಲ್ಲ. ಶರತ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ತಂಡ ಈ ವರೆಗೆ ಇಂಥ 28 ಸಿಸಿಟಿವಿ ಫೂಟೇಜ್ ಗಳನ್ನು ತನಿಖೆಗೆ ಒಳಪಡಿಸಿದೆ. ಆದರೂ, ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೇಳಿದಾಗ ಶೀಘ್ರದಲ್ಲೇ ದುಷ್ಕರ್ಮಿಗಳನ್ನು ಬಂಧಿಸಲಿದ್ದೇವೆ ಎನ್ನುವ ರೆಡಿಮೇಡ್ ಉತ್ತರ ನೀಡುತ್ತಿದ್ದಾರೆ.












Click it and Unblock the Notifications