ಮಂಗಳೂರು: ಮಳೆಯ ಕಣ್ಣಾಮುಚ್ಚಾಲೆ ಆಟ, ದೇವರ ಮೊರೆಹೋದ ಕೈ ನಾಯಕರು
ಮಂಗಳೂರು, ಜೂನ್, 09: ಬಿಸಿಲಿನ ಬೇಗೆಯಿಂದ ಬಳಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಕಣ್ಣಮುಚ್ಚಾಲೆ ಆಟ ಕಂಡುಬಂದಿದೆ. ಕರಾವಳಿಗೆ ಇನ್ನೂ ಮುಂಗಾರು ಪ್ರವೇಶ ಆಗಿಲ್ಲ. ಮತ್ತೊಂದೆಡೆ ಸುಡುಬಿಸಿಲಿನ ತಾಪಮಾನದಿಂದ ಇಲ್ಲಿನ ಜನರು ತತ್ತರಿಸಿದ್ದಾರೆ. ನದಿ, ತೊರೆಗಳು ಸಂಪೂರ್ಣ ಬತ್ತಿ ಹೋಗಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಆದ್ದರಿಂದ ಶೀಘ್ರ ಮಳೆ ಸುರಿಯುವಂತೆ ಹಾಗೂ ಲೋಕಕಲ್ಯಾರ್ಥವಾಗಿ ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಕುದ್ರೋಳಿ ಶ್ರೀಗೋಕರ್ಣನಾಥ ದೇವರಿಗೆ ಶತ ಸೀಯಾಳಾಭಿಷೇಕ ನೆರವೇರಿಸಲಾಗಿದೆ.
ಮೊದಲಿಗೆ ದೇವರಿಗೆ ಅಲಂಕಾರ ಮಾಡಿ, ಬಳಿಕ ಕಲಶನೀರಿನ ಅಭಿಷೇಕವನ್ನು ನೆರವೇರಿಸಲಾಯಿತು. ಇನ್ನು 11:15ರ ವೇಳೆಗೆ ದೇವಳದ ಅರ್ಚಕರಿಂದ ಶ್ರೀ ಗೋಕರ್ಣನಾಥ ದೇವರಿಗೆ ಶತಸೀಯಾಳಭಿಷೇಕ ಆರಂಭಗೊಂಡಿದೆ.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಪದ್ಮರಾಜ್ ಆರ್., ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಸಾಯಿರಾಂ ಆರ್., ಕಾಂಗ್ರೆಸ್ನ ಹಿರಿಯ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಕ್ಷೇತ್ರದ ಭಕ್ತರು ಪಾಲ್ಗೊಂಡಿದ್ದರು.
ಶುಕ್ರವಾರ ಬೆಳಗ್ಗೆಯೇ ಮಂಗಳೂರು ನಗರದಲ್ಲಿ ತುಂತುರು ಮಳೆ ಕಂಡುಬಂದಿದೆ. ಆದರೆ ಈ ಮಳೆ ಅರ್ಧ ಗಂಟೆಗಷ್ಟೇ ಸೀಮಿತವಾಗಿದ್ದು, ಜನರಲ್ಲಿ ನಿರಾಸೆ ಮೂಡಿಸಿದೆ. ಹವಾಮಾನ ಇಲಾಖೆ ಮುಂದಿನ ನಾಲ್ಕು ದಿನಗಳಲ್ಲಿ ಚಂಡಮಾರುತದ ಪ್ರಭಾವದಿಂದ ಮಳೆ ಸುರಿಯುವ ಮುನ್ಸೂಚನೆ ನೀಡಿದೆ. ಭಾನುವಾರ ಅಧೀಕೃತವಾಗಿ ಕೇರಳದಿಂದ ರಾಜ್ಯ ಕರಾವಳಿಗೆ ಮುಂಗಾರು ಆಗಮನ ಆಗುವ ನಿರೀಕ್ಷೆಗಳಿವೆ.
ಚಂಡಮಾರುತದ ಪ್ರಭಾವದಿಂದ ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ ಜಾಸ್ತಿ ಆಗಿದೆ. ಇನ್ನು ಉಳ್ಳಾಲದ ಕೈಕೋ, ಮುಕ್ಕಚ್ಚೇರಿ, ಸೋಮೇಶ್ವರ, ಬಟ್ಟಪ್ಪಾಡಿ ಸೇರಿದಂತೆ ಹಲವು ಭಾಗದಲ್ಲಿ ಭಾರೀ ಗಾತ್ರದ ಅಲೆಗಳು ದಡವನ್ನು ಅಪ್ಪಳಿಸಿದೆ. ಹಾಗೆಯೆ ಮಳೆಗಾಲದ ಮುಂದಿನ ದಿನಗಳಲ್ಲಿ ಕಡಲ್ಕೊರೆತ ಜಾಸ್ತಿಯಾಗಲಿದ್ದು, ಸಮುದ್ರ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಜನರನ್ನು ಈಗಾಗಲೇ ಎಚ್ಚರಿಸಿದೆ.
ಮಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ
ಮುಗಾರು ಮಳೆ ವಿಳಂಬದಿಂದ ಮಂಗಳೂರು ನಗರದಲ್ಲಿ ನೀರಿಗೆ ಕೊರತೆ ಉಂಟಾಗಿದ್ದು, ಪರಿಣಾಮ ಇಲ್ಲಿನ ಜನತೆ ಭಾರೀ ತೊಂದರೆಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಎಂಆರ್ ಡ್ಯಾಂನಿಂದ ಈಗಾಗಲೇ ನೀರು ಬಿಡಲಾಗಿದ್ದು, ಇದರಿಂದ ತುಂಬೆ ಡ್ಯಾಂನಲ್ಲಿ 4 ಮೀಟರ್ ನೀರು ತುಂಬಲಿದೆ. ಮತ್ತೊಂದೆಡೆ ನೀರಿನ ಕೊರತೆ ಹಿನ್ನೆಲೆ ಕೆಲ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿವರ್ಷ ಜೂನ್ ತಿಂಗಳಿನಲ್ಲಿ ಮಳೆ ಇಲ್ಲದೆ ಬರ ಬರುತ್ತದೆ. ಆದರೆ ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಮಳೆ ನಿರೀಕ್ಷಿತ ಸಮಯಕ್ಕೆ ಬಂದಿಲ್ಲ. ಅಲ್ಲದೆ ಈಗಾಗಲೇ ಸುಡುಬಿಸಿಲಿನಿಂದ ಜನರು ತತ್ತರಿಸುತ್ತಿದ್ದು, ಕುಡಿಯುವ ನೀರಿಗೂ ಎಲ್ಲೆಡೆ ಹಾಹಾಕಾರ ಉಂಟಾಗಿದೆ. ಸದ್ಯ ತುಂಬೆ ಡ್ಯಾಂನಲ್ಲಿ 1.86 ಮೀಟರ್ ಮಟ್ಟಕ್ಕೆ ನೀರು ಇಳಿದಿದೆ. ಪರಿಣಾಮ ಮಂಗಳೂರು ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ.
ಕೆಲ ದಿನಗಳ ಕಾಲ ಪೈಪ್ ಲೈನ್ ಹಾಗೂ ಮೋಟಾರ್ ರಿಪೇರಿ ಕಾಮಗಾರಿ ಹಿನ್ನೆಲೆ ಎರಡು ದಿನಗಳಿಂದ ನೀರು ಪೂರೈಕೆ ಆಗದೆ ಸಮಸ್ಯೆ ಉಂಟಾಗಿತ್ತು. ಆದರೂ ಜಿಲ್ಲಾಡಳಿತ ಶಾಲಾ, ಕಾಲೇಜು ಸೇರಿ ಎಲ್ಲಾ ಕಡೆ ನೀರು ಪೂರೈಸಲು ವ್ಯವಸ್ಥೆ ಮಾಡಲಾಗುತ್ತಿದೆ. ಆದರೂ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ.












Click it and Unblock the Notifications