ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ನಳೀನ್ ಕುಮಾರ್ ಕಟೀಲ್ಗೆ ಓಪನ್ ಚಾಲೆಂಜ್ ಹಾಕಿದ್ದೇನೆ-ಯು.ಟಿ ಖಾದರ್
ಮಂಗಳೂರು, ಜನವರಿ 4: ಉಳ್ಳಾಲ ಕ್ಷೇತ್ರದಲ್ಲಿ ಮತ ಕೇಳುವಾಗ ರಸ್ತೆ ಗುಂಡಿ ಚರಂಡಿ ವಿಚಾರ ಬಿಟ್ಟು ಬಿಡಿ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಲವ್ ಜಿಹಾದ್ ನಿರ್ಮೂಲನೆಗಾಗಿ ಬಿಜೆಪಿಗೆ ಮತ ಹಾಕುವಂತೆ ಮತದಾರರಿಗೆ ಹೇಳಿ ಎಂದು ಬಿಜೆಪಿ ಬೂತ್ ಪ್ರಮುಖರಿಗೆ ಕರೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿಕೆಗೆ ಮಾಜಿ ಸಚಿವ ಯು.ಟಿ ಖಾದರ್ ತಿರುಗೇಟು ನೀಡಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯುಟಿ ಖಾದರ್, ಬಿಜೆಪಿಯವರಿಗೆ ರಸ್ತೆ ಗುಂಡಿ ಚರಂಡಿ ಮತ್ತು ಅಭಿವೃದ್ಧಿ ಕೆಲಸ ಮಾಡುವ ಅರ್ಹತೆ, ಯೋಗ್ಯತೆ ಇಲ್ಲ. ಅಧಿಕಾರಕ್ಕೆ ಬಂದಾಗ ಸುರಂಗ ಮಾರ್ಗ ಮಾಡುವುದಾಗಿ ಹೇಳಿದ್ದರು. ನಾಲ್ಕು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಕುಚ್ಚಲು ಅಕ್ಕಿ ತರುವ ಯೋಗ್ಯತೆ ಇವರಿಗೆ ಇಲ್ಲ. ಒಂದು ರೇಷನ್ ಕಾರ್ಡ್ ಕೊಡುವ ಯೋಗ್ಯತೆ ಇವರಿಗಿಲ್ಲ. ಮರಳನ್ನು ಎರಡು ಸಾವಿರ ರೂಪಾಯಿಗೆ ಮನೆ ಮನೆಗೆ ಕೊಡುತ್ತೇವೆ ಅಂತಾ ಹೇಳಿದ್ದರು. ಇದು ಯಾವುದೂ ಸಾಧ್ಯ ಆಗದೇ ಇದ್ದಾಗ ಈ ಮಾತು ಹೇಳುತ್ತಾರೆ ಎಂದು ಯು.ಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ.
ಮಾತು ಮುಂದುವರಿಸಿದ ಅವರು, ಡಬಲ್ ಇಂಜಿನ್ ಸರ್ಕಾರದ ಫ್ಯೂಲ್ ಕಮ್ಯುನಲ್ ಫ್ಯೂಲ್ ಆಗಿದೆ. ಆ ಇಂಜಿನ್ನ ಸೈಲೆನ್ಸರ್ ನಿಂದ ಬರುವ ಹೊಗೆ ವಿಷವಾಗಿದೆ. ಆ ಇಂಜಿನ್ನ್ನು ಬಡಜನರ ಕಣ್ಣೀರಿನಿಂದ ಕಟ್ಟಲಾಗಿದೆ. ಜನ ಆ ಇಂಜಿನ್ನ್ನು ಜನ ಸ್ಕ್ರಾಪ್ ಮಾಡಿ ಗುಜುರಿಗೆ ಹಾಕಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ತಂದೆ-ತಾಯಿ, ಮಕ್ಕಳ ಮಕ್ಕಳ ಮಧ್ಯೆ ವಿಭಾಗ ಮಾಡುತ್ತಾರೆ. ಇದು ಯಾವುದೂ ಆಗದ ಸಂದರ್ಭದಲ್ಲಿ ಬಿರುಕು ಮೂಡಿಸಲು ಈ ಹೇಳಿಕೆ ನೀಡುತ್ತಾರೆ. ನಳಿನ್ ಕುಮಾರ್ ಮಂಗಳವಾರ ಟೌನ್ ಹಾಲ್ನಲ್ಲಿ ಸಿಕ್ಕಿದ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು, ದ.ಕ ಜಿಲ್ಲೆಯಲ್ಲಿ ರಮಾನಾಥ್ ರೈ ಉಸ್ತುವಾರಿ ಸಚಿವರಾಗುತ್ತಾರೆ ಎಂಬ ಚಾಲೆಂಜ್ ಹಾಕಿದ್ದೇನೆ. ನಳಿನ್ ಕುಮಾರ್ ಕಟೀಲ್ಗೆ ಓಪನ್ ಚಾಲೆಂಜ್ ಹಾಕಿದ್ದೇನೆ ಎಂದರು.
ರಸ್ತೆ, ಚರಂಡಿ ಸಣ್ಣಪುಟ್ಟ ಸಮಸ್ಯೆ ಬಿಟ್ಟು, ಲವ್ ಜಿಹಾದ್ ವಿರುದ್ಧ ಹೋರಾಡಿ: ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್
ಇನ್ನು ಸಚಿವರಾಗಲು ನಾವು ಯಾವುದೇ ಕೋಟ್ಅನ್ನು ಧರಿಸುವುದಿಲ್ಲ. ಕೋಟ್-ಸೂಟ್ ಧರಿಸುವುದು ಬಿಜೆಪಿಯವರೇ, ಮೋದಿ ಹಾಕಿರುವುದು ನೆಹರು ಹಾಕಿದ್ದ ಸೂಟ್, ಆ ಸೂಟ್ ಅನ್ನು ನಾವು ಎಂದೂ ಹಾಕಿಲ್ಲ. ಆ ಸೂಟ್ ಅನ್ನು ಹಾಕುವುದು ಬಿಜೆಪಿಯವರೇ ಎಂದು ಬಿಜೆಪಿ ನಾಯಕರ ವಿರುದ್ಧ ಯು.ಟಿ ಖಾದರ್ ಕಿಡಿಕಾರಿದ್ದಾರೆ.