ದಕ್ಷಿಣ ಕನ್ನಡದಲ್ಲಿ ಬಿಜೆಪಿ ಕಟ್ಟಿಹಾಕಲು ಕೈ-ತೆನೆ ಜಂಟಿ ಚುನಾವಣಾ ಸಮಿತಿ ರಚನೆ
ಮಂಗಳೂರು, ಮಾರ್ಚ್ 27:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಪ್ರತಿಷ್ಠೆಗಾಗಿ ಹೋರಾಟದ ವೇದಿಕೆ ಸಿದ್ಧಗೊಂಡಿದೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ತನ್ನ ಜಯದ ನಾಗಾಲೋಟವನ್ನು ಮುಂದುವರೆಸಲು ತಂತ್ರ ರೂಪಿಸುತ್ತಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇನ್ನೊಂದೆಡೆ ಕಳೆದ 27 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿಸಿಕೊಂಡಿರುವ ದಕ್ಷಿಣ ಕನ್ನಡ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಡೆ ಪ್ರತಿತಂತ್ರ ರೂಪಿಸುತ್ತಿದೆ.
ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯನ್ನು ಎದುರಿಸಲು ಹಾಗೂ ಯುವ ಅಭ್ಯರ್ಥಿ ಮಿಥುನ್ ರೈ ಅವರನ್ನು ಗೆಲ್ಲಿಸಲು ಕಾಂಗ್ರೆಸ್ ಹಾಗು ಜೆಡಿಎಸ್ ಜಂಟಿ ಚುನಾವನಾ ಸಮಿತಿ ರಚಿಸಿದೆ. ಈ ಸಮಿತಿಯ ನೇತೃತ್ವವನ್ನು ಮಾಜಿ ಸಚಿವ ರಮಾನಾಥ್ ರೈ ಅವರ ಹೆಗಲಿಗೇರಿಸಲಾಗಿದೆ.

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಚುನಾವಣಾ ರಾಜಕೀಯ ತಂತ್ರಗಾರಿಕೆ ಹೆಣೆಯಲು ಅನುಭವಿ ರಾಜಕಾರಣಿ ರಮಾನಾಥ್ ರೈ ಮುಂದಾಗಿದ್ದಾರೆ. ಈ ಮೈತ್ರಿ ಹೊಂದಾಣಿಕೆಯ ನಿಯಮದಂತೆ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಜಂಟಿ ಸಭೆ, ಸಮಾವೇಶ ಹಾಗೂ ಮತಯಾಚನೆ ಮಾಡಲಿದ್ದಾರೆ.
ಬಿಜೆಪಿಯ ಬಿಗಿ ಹಿಡಿತದಲ್ಲಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಪತ್ಯ ಸ್ಥಾಪಿಸುವ ಕನಸನ್ನು ಕಾಣುತ್ತಲೇ ಬಂದಿದೆ. ಒಟ್ಟು 7 ಬಾರಿ ಬಿಜೆಪಿ ಸಂಸದರೇ ಸತತವಾಗಿ ಈ ಕ್ಷೇತ್ರದಿಂದ ಆಯ್ಕೆಯಾಗುತ್ತಿದ್ದಾರೆ. ಈ ಬಾರಿ ಹಾಲಿ ಸಂಸದ ನಳಿನ್ ಕುಮಾರ್ ಅವರನ್ನೇ ಬಿಜೆಪಿ 3 ನೆ ಬಾರಿಗೆ ಕಣಕ್ಕಿಳಿಸಿದೆ.
ಈ ನಡುವೆ ನಳಿನ್ ವಿರುದ್ಧ ಸ್ವ ಪಕ್ಷದಲ್ಲೇ ಅಪಸ್ವರ ಕೇಳಿ ಬರುತ್ತಿದೆ. ಕ್ಷೇತ್ರದಲ್ಲಿ ಆಗದ ಅನೇಕ ಅಪೂರ್ಣ ಕಾಮಗಾರಿಗಳು, ಕಾಮಗಾರಿ ಪೂರ್ಣಗೊಳ್ಳದ ಮಂಗಳೂರು ಪಂಪ್ ವೆಲ್ ಹಾಗೂ ತೊಕ್ಕೊಟ್ಟು ಮೇಲ್ಸೇತುವೆ , ಅಪೂರ್ಣ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನೇ ನಳಿನ್ ವಿರುದ್ಧ ಪ್ರಮುಖ ಅಸ್ತ್ರವಾಗಿ ಬಳಸಲು ಕಾಂಗ್ರೆಸ್, ಜೆಡಿಎಸ್ ಮುಂದಾಗಿದೆ.
ಯುವ ನಾಯಕ ಮಿಥುನ್ ರೈ ಅವರನ್ನು ಕಣಕ್ಕಿಳಿಸಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ತಂತ್ರಗಾರಿಗೆ ಹೆಣೆಯುವ ಗೆಲುವಿನ ಲೆಕ್ಕಾಚಾರ ಕಾಂಗ್ರೆಸ್ ಪಾಳಯದಲ್ಲಿ ಆರಂಭವಾಗಿದೆ.












Click it and Unblock the Notifications