ಬೆಂಗ್ರೆ ಘರ್ಷಣೆ ಹಿಂದೆ ಶಾಸಕ ಜೆ.ಆರ್.ಲೋಬೋ: ನಳಿನ್ ಕುಮಾರ್ ಕಟೀಲ್
ಮಂಗಳೂರು, ಫೆಬ್ರವರಿ 23: ಚುನಾವಣೆ ಹತ್ತಿರವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ ರೂಪಿಸಿದೆ. ಮಂಗಳೂರು ಹೊರವಲಯದ ಬೆಂಗ್ರೆಯಲ್ಲಿ ನಡೆದಿರುವ ಘಟನೆ ಇದಕ್ಕೆ ಸಾಕ್ಷಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಗುರುವಾರ ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಬಾ ಬೆಂಗ್ರೆಯಲ್ಲಿ ನಡೆದ ಘರ್ಷಣೆ, ಕಲ್ಲು ತೂರಾಟ ಪ್ರಕರಣದ ಹಿಂದೆ ಕಾಂಗ್ರೆಸಿನನ ವ್ಯವಸ್ಥಿತ ಷಡ್ಯಂತ್ರ ಇದೆ ಎಂದು ಕಿಡಿಕಾರಿದರು.
ಸೋಲಿನ ಭಯದಿಂದ ಕಾಂಗ್ರೆಸ್ ಓಟ್ ಬ್ಯಾಂಕ್ ಗಾಗಿ ಕೋಮು ಗಲಭೆ ಸೃಷ್ಠಿಸಲು ಯತ್ನಿಸುತ್ತಿದೆ ಎಂದು ಅವರು ದೂರಿದರು.

ಉಡುಪಿಯ ಮಲ್ಪೆಯಲ್ಲಿ ಬಿಜೆಪಿ ಆಯೋಜಿಸಿದ್ದ ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
"ಸಮಾವೇಶದಿಂದ ಹಿಂದಿರುಗುತ್ತಿದ್ದಾಗ ಘೋಷಣೆ ಕೂಗಿದ್ದಕ್ಕೆ ಘರ್ಷಣೆ ನಡೆದಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ. ಆರ್. ಲೋಬೋ ಹಾಗೂ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಸಮಾವೇಶದಿಂದ ಹಿಂದಿರುಗುತ್ತಿದ್ದಾಗ ಕಾರ್ಯಕರ್ತರು ಘೋಷಣೆ ಹಾಕದಿರಲು ಮಂಗಳೂರು ಏನು ಪಾಕಿಸ್ಥಾನದಲ್ಲಿದೆಯಾ?" ಎಂದು ಅವರು ಪ್ರಶ್ನಿಸಿದರು. ಕೇವಲ
ಘೋಷಣೆ ಕೂಗಿದ ಮಾತ್ರಕ್ಕೆ ಘರ್ಷಣೆ ನಡೆಯಲು ಹೇಗೆ ಸಾಧ್ಯ? ಎಂದು ಕೇಳಿದ ಅವರು ಇದರ ಹಿಂದೆ ಭಾರೀ ಸಂಚು ನಡೆಸಲಾಗಿದೆ ಎಂದು ಅವರು ಆರೋಪಿಸಿದರು.

ಅಮಿತ್ ಶಾ ಬಂದಾಗ ಗಲಭೆ ಎಬ್ಬಿಸಲು ಕಾಂಗ್ರೆಸ್ ಪ್ರಯತ್ನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, "ಬೆಂಗ್ರೆಯಲ್ಲಿ ಅಕ್ರಮ ವಲಸಿಗರು, ಗಾಂಜಾ ವ್ಯಸನಿಗಳಿದ್ದಾರೆಂದು ಪೊಲೀಸರೇ ಮಾಹಿತಿ ನೀಡಿದ್ದಾರೆ. ಬೆಂಗ್ರೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಪೊಲೀಸರೇ ಭಯ ಪಡುವಂತಹ ಪರಿಸ್ಥಿತಿ ಇದೆ," ಎಂದು ಅವರು ಹೇಳಿದರು.
"ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್ ಲೋಬೋ ಬೆಂಗ್ರೆಯ ಘಟನೆ ಹಿಂದಿದ್ದಾರೆಂಬ ಸಂಶಯ ವ್ಯಕ್ತವಾಗುತ್ತಿದೆ" ಎಂದು ಹೇಳಿದ ಅವರು, "ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯ ಗೊಂಡಿದ್ದಾರೆ. ಘಟನೆಯ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗಳ್ಳಬೇಕು," ಎಂದು ಒತ್ತಾಯಿಸಿದರು.












Click it and Unblock the Notifications