ಪಿಎಫ್ ಐ, ಕೆಎಫ್ ಡಿ ಸಂಘಟನೆಗೆ ಸಿದ್ದು ಬೆಂಬಲ: ಪ್ರತಾಪ್ ಸಿಂಹ
ಮಂಗಳೂರು, ಆಗಸ್ಟ್ 23: ಪಿಎಫ್ಐ ಹಾಗೂ ಕೆಎಫ್ ಡಿ ಸಂಘಟನೆಯ ಸಮಾಜಘಾತುಕ ಕೃತ್ಯಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲ, ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಸಂಘಟನೆಗಳನ್ನು ನಿಷೇಧಿಸುವ ಇರಾದೆ ಈ ಸರಕಾರಕ್ಕೆ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂ ಪರ ಸಂಘಟನೆಗಳ ಹನ್ನೊಂದು ಕಾರ್ಯಕರ್ತರು ಹಾಗೂ ಮುಖಂಡರ ಹತ್ಯೆಯಾಗಿದೆ. ಈ ಹತ್ಯೆಗಳ ಹಿಂದೆ ಪಿಎಫ್ ಐ ಸಂಘಟನೆ ಕೈವಾಡ ಬಯಲಾಗಿದ್ದು, ಆ ಸಂಘಟನೆ ಕಾರ್ಯಕರ್ತರ ಬಂಧನ ಕೂಡ ಆಗಿದೆ. ಆದರೆ ರಾಜ್ಯ ಸರಕಾರ ಕಣ್ಮುಚ್ಚಿ ಕುಳಿತಿದೆ ಎಂದು ಕಿಡಿ ಕಾರಿದರು .

ಪಿಎಫ್ ಐನ ಸಮಾಜ ಘಾತಕ ಕೃತ್ಯದ ಬಗ್ಗೆ ತನಿಖೆ ನಡೆಸಿದ್ದ ಹಿಂದಿನ ಬಿಜೆಪಿ ಸರಕಾರ ಪಿಎಫ್ಐ ಹಾಗೂ ಕೆಎಫ್ ಡಿ ಸಂಘಟನೆಯ ಸಾವಿರದ ಆರುನೂರು ಕಾರ್ಯಕರ್ತರ ಹಾಗೂ ಮುಖಂಡರ ಮೇಲೆ ನೂರಾ ಎಪ್ಪತ್ತೈದು ಪ್ರಕರಣ ದಾಖಲಿಸಿತ್ತು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ಎಲ್ಲ ಕೇಸ್ ಗಳನ್ನು ಹಿಂದಕ್ಕೆ ಪಡೆದು, ಈ ಸಂಘಟನೆಗಳ ಕೃತ್ಯಗಳಿಗೆ ಕುಮ್ಮಕ್ಕು ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಈವರೆಗೆ ನಡೆದಿರುವ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹಾಗೂ ಮುಖಂಡರ ಹತ್ಯೆಗಳ ಸಮಗ್ರ ತನಿಖೆಗೆ ಸಿಬಿಐಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯದಲ್ಲಿ ಈವರೆಗೆ ನಡೆದಿರುವ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾಗೂ ಮುಖಂಡರ ಹತ್ಯೆ ಖಂಡಿಸಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ರಾಜೀನಾಮೆಗೆ ಒತ್ತಾಯಿಸಿ ಸೆಪ್ಟೆಂಬರ್ ಏಳರಂದು ಬಿಜೆಪಿ ಯುವ ಮೋರ್ಚಾದ ವತಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಈ ಪ್ರತಿಭಟನಾ ಸಮಾವೇಶಕ್ಕೆ ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು, ಬೆಂಗಳೂರು, ಚಿಕ್ಕಮಗಳೂರಿನಿಂದ ಬೈಕ್ ಜಾಥಾ ಸೆಪ್ಟೆಂಬರ್ ಐದು ಹಾಗೂ ಆರರಂದು ಹೊರಡಲಿದ್ದು ಸೆಪ್ಟೆಂಬರ್ ಏಳರಂದು ಈ ಬೈಕ್ ಜಾಥಾ ಮಂಗಳೂರು ತಲುಪಲಿದೆ. ಈ ಜಾಥಾದಲ್ಲಿ ಹತ್ತು ಸಾವಿರ ಬೈಕ್ ಗಳು ಮಂಗಳೂರು ತಲುಪುವ ನಿರೀಕ್ಷೆಯಿದೆ ಎಂದು ತಿಳಿಸಿದರು.












Click it and Unblock the Notifications