ಗೌರಿ ಹೊಳೆಗೆ ಕಾರು ಸಹಿತ ಬಿದ್ದಿದ್ದ ಯುವಕರ ಶವ ಪತ್ತೆ
ಮಂಗಳೂರು, ಜುಲೈ 12: ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಕಾಣಿಯೂರಿನ ಗೌರಿ ಹೊಳೆಗೆ ಕಾರು ಸಹಿತ ಬಿದ್ದಿದ್ದ ಯುವಕರ ಶವ ಮಂಗಳವಾರ ಪತ್ತೆಯಾಗಿದೆ. ಅಂದು ಕೇವಲ ಕಾರು ಮಾತ್ರ ಪತ್ತೆಯಾಗಿ ಯುವಕರು ಕಾಣೆಯಾಗಿದ್ದರು. ಪಕ್ಕದ್ದಲ್ಲಿದ್ದ ಮಸೀದಿಯ ಸಿಸಿಟಿವಿ ವಿಡಿಯೋ ಆದರಿಸಿ ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಸ್ಥಳೀಯರ ಸತತ ಪರಿಶ್ರಮದ ಬಳಿಕ ಸಂಪೂರ್ಣ ನಜ್ಜುಗುಜ್ಜಾದ ಕಾರು ಪತ್ತೆಯಾಗಿತ್ತು.
ಮಂಗಳವಾರ ಘಟನೆ ನಡೆದ ಸ್ಥಳದ 400 ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ವಿಟ್ಲದ ಧನುಷ್ ಮತ್ತು ಆತನ ಸೋದರ ಸಂಬಂಧಿ ಧನಂಜಯ್ ಎಂಬಾತರೆ ದುರಂತದಲ್ಲಿ ಮೃತಪಟ್ಟಿರುವ ದುರ್ದೈವಿಗಳು. ಹೊಳೆಗೆ ಅಡ್ಡಲಾಗಿದ್ದ ಮರಕ್ಕೆ ಒಬ್ಬರ ಮೃತದೇಹ ಸಿಲುಕಿಕೊಂಡಿತ್ತು, ಅದಕ್ಕೆ ಸ್ವಲ್ಪ ದೂರದಲ್ಲೆ ಮತ್ತೊಬ್ಬನ ಮೃತದೇಹ ಸಿಕ್ಕಿದೆ.
ಮರಕ್ಕಡ ಜೇಡರಕೇರಿ ಎಂಬಲ್ಲಿ ಮಂಜಯ್ಯ ಆಚಾರ್ಯ ಎಂಬುವವರ ಮನೆ ಬಳಿಯ ಹೊಳೆಯಲ್ಲಿ ಎರಡು ಮೃತದೇಹ ಪತ್ತೆಯಾಗಿದ್ದು, ಊರಿನವರು ಮೃತದೇಹಗಳನ್ನು ಗುರುತಿಸಿದ್ದಾರೆ. 25 ವರ್ಷದ ಧನುಷ್ ವಿಟ್ಟ, 24 ವರ್ಷದ ಧನಂಜಯ್ ಕನ್ಯಾನ ನಿವಾಸಿಯಾಗಿದ್ದಾರೆ. ಇಬ್ಬರೂ ಸೋಧರ ಸಂಬಂಧಿಗಳು ಎಂದು ತಿಳಿದುಬಂದಿದೆ.

ಅಚ್ಚರಿ ವಿಷಯ ಅಂದರೆ ಕಾರಿನಲ್ಲಿದ್ದ ಧನುಷ್ ರಾತ್ರಿ 12:01ಕ್ಕೆ ತನ್ನ ಮಾವನಿಗೆ ಕರೆ ಮಾಡಿ ಲಾರಿಯೊಂದು ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬೆಳಗ್ಗೆ ವಾಹನ ರಿಪೇರಿ ಮಾಡಿಸಿಕೊಂಡು ಬರುತ್ತೇವೆ ಎಂದು ಭಾನುವಾರ ಹೇಳಿದ್ದರು. ಆದರೆ ಆ ಬಳಿಕ ಕರೆ ಮಾಡಿದ ನಂಬರ್ ಸ್ವಿಚ್ ಆಫ್ ಬಂದಿತ್ತು. ಯುವಕರು ಎಲ್ಲಿ ಹೋಗಿದ್ದಾರೆ? ಎಂಬ ಸುಳಿವು ಸಹ ಯಾರಿಗೂ ಸಿಕ್ಕಿರಲಿಲ್ಲ. ಹೀಗಾಗಿ ಪೊಲೀಸರು ಕರೆ ಬಂದ ನಂಬರ್ ಬೆನ್ನತ್ತಿದ್ದಾರೆ.

ಆ ಅಪಘಾತಕ್ಕೂ ಮುನ್ನ ಸವಣೂರು ಚೆಕ್ ಪೋಸ್ಟ್ ನಲ್ಲಿ ಈ ಯುವಕರ ಕಾರನ್ನು ಪೊಲೀಸರು ತಡೆದಿದ್ದರು. ಒಂದೇ ಹೆಡ್ ಲೈಟ್ ಹಾಕಿಕೊಂಡು ಬಂದಿದಕ್ಕೆ ಪೊಲೀಸರು ತಡೆದು ನಿಲ್ಲಿಸಿ ಎಲ್ಲಿಂದ?, ಎಲ್ಲಿಗೆ ಹೋಗುತ್ತಿದ್ದೀರಿ? ಎಂದು ವಿಚಾರಿಸಿದ್ದರು. ಚಾಲಕ ಧನುಷ್ ನಿದ್ದೆಯ ಮಂಪರಿನಲ್ಲಿ ಇದ್ದಿದನ್ನು ಕಂಡು ನಿಧಾನವಾಗಿ ಹೋಗಿ ಎಂದು ಎಚ್ಚರಿಸಿದ್ದಾರೆ. ಆದರೆ ಪೊಲೀಸ್ ಚೆಕ್ ಪೋಸ್ಟ್ ದಾಟಿ ಸುಮಾರು ಐದು ಕಿ.ಮೀ ದೂರದ ಅಂತರದಲ್ಲೇ ಕಾರು ನದಿಗೆ ಬಿದ್ದಿದೆ. ಕಾರು ಹೊಳೆಯ ತಡೆಗೋಡೆಗೆ ಡಿಕ್ಕಿ ಹೊಡೆಯುವ ಮುನ್ನ ಅಪಘಾತವೊಂದು ನಡೆದಿರುವ ಸಾಧ್ಯತೆ ಇದೆ. ಆ ಬಳಿಕ ಮುಂದಕ್ಕೆ ಚಲಿಸುತ್ತಿದ್ದಂತೆ ಹೊಳೆಗೆ ಬಿದ್ದು ಅವಘಡ ನಡೆದಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು.












Click it and Unblock the Notifications