ಚಿತ್ರಗಳು : ಮಂಗಳೂರಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ
ಮಂಗಳೂರು, ನವೆಂಬರ್ 12 : '150 ಕ್ಷೇತ್ರವನ್ನು ಗೆದ್ದು ಕರ್ನಾಟಕದಲ್ಲಿ ಸ್ವಚ್ಛ, ದಕ್ಷ ಆಡಳಿತವನ್ನು ನಡೆಸುವ ಸಂಕಲ್ಪದಿಂದ ಯಾತ್ರೆ ನಡೆಸುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಸಿಬಿ, ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣವನ್ನು ಮರು ತನಿಖೆ ಮಾಡಿಸುತ್ತೇವೆ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮಂಗಳೂರಿನ ನೆಹರೂ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಯಡಿಯೂರಪ್ಪ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 'ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯದಿದ್ದರೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಯುವುದಿಲ್ಲ' ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಸಂಸದ ನಳೀನ್ ಕುಮಾರ್ ಕಟೀಲ್, ಶ್ರೀರಾಮುಲು, ಕೃಷ್ಣ ಜೆ.ಪಾಲೆಮಾರ್, ರವಿ ಕುಮಾರ್, ಕುಮಾರ್ ಬಂಗಾರಪ್ಪ, ವಿಕ್ರಮಾರ್ಜುನ ಹೆಗಡೆ, ಯೋಗೀಶ್ ಭಟ್, ಕ್ಯಾ. ಗಣೇಶ್ ಕಾರ್ಣಿಕ್, ಸಂಜೀವ ಮಠಂದೂರು ಮುಂತಾದವರು ಪಾಲ್ಗೊಂಡಿದ್ದರು.
ನವೆಂಬರ್ 2ರ ಭಾನುವಾರ ಬಿಜೆಪಿಯ ಯಾತ್ರೆ 9ನೇ ದಿನಕ್ಕೆ ಕಾಲಿಟ್ಟಿದೆ. ನವ ಕರ್ನಾಟಕ ಪರಿವರ್ತನಾ ಯಾತ್ರೆ ಕಾಪು, ಕಾರ್ಕಳ, ಉಡುಪಿಯಲ್ಲಿ ಸಂಚಾರ ನಡೆಸಲಿದೆ.

ಸಿದ್ದರಾಮಯ್ಯ ಬಚ್ಚಾ
'ನರೇಂದ್ರ ಮೋದಿ ನನಗೆ ಹೆದರುತ್ತಾರೆಂದು ಸಿಎಂ ಹೇಳಿದ್ದರು. ನರೇಂದ್ರ ಮೋದಿಯ ಮುಂದೆ ಸಿದ್ದರಾಮಯ್ಯ ಬಚ್ಚಾ' ಎಂದು ನೆಹರೂ ಮೈದಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಅಶಾಂತಿಗೆ ಸಿದ್ದರಾಮಯ್ಯ ಅವರೇ ಕಾರಣ
'ಎನ್ ಐಎ ವರದಿ ಪ್ರಕಾರ ಹಲವೆಡೆ ಪಿಎಫ್ ಐ ಹಬ್ಬಿದೆ. ಪಿಎಫ್ ಐ ನಿಂದಲೇ ಹಲವಾರು ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆಯಾಗಿದ್ದು ಸಾಬೀತಾಗಿದೆ. ಮಂಗಳೂರು, ಉಡುಪಿಯಲ್ಲೂ ಪಿಎಫ್ ಐ ಸಕ್ರಿಯವಾಗಿದೆ. ಇಲ್ಲಿನ ಅಶಾಂತಿಗೆ ಸಿದ್ದರಾಮಯ್ಯ ಅವರೇ ಕಾರಣ' ಎಂದು ಯಡಿಯೂರಪ್ಪ ದೂರಿದರು.

'ಚರ್ಚೆ ನಡೆಯಲು ಬಿಡಲ್ಲ'
'ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯದಿದ್ದಲ್ಲಿ ಬೆಳಗಾವಿಯಲ್ಲಿ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ನಡೆಯಲು ಬಿಡುವುದಿಲ್ಲ' ಎಂದು ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ವೇಣುಗೋಪಾಲ್ ರಾಜೀನಾಮೆ ನೀಡಬೇಕು
'ಯಾವ ಮುಖವಿಟ್ಟುಕೊಂಡು ವೇಣುಗೋಪಾಲರನ್ನು ರಾಜ್ಯಕ್ಕೆ ಬರಲು ಬಿಡುತ್ತೀರಿ. ವೇಣುಗೋಪಾಲ್ ರಾಜೀನಾಮೆ ನೀಡಬೇಕು, ಅವರ ವಿರುದ್ಧ ಕಾನೂನು ಕ್ರಮವಾಗಬೇಕು' ಎಂದು ಯಡಿಯೂರಪ್ಪ ಆಗ್ರಹಿಸಿದರು.

ಯಡಿಯೂರಪ್ಪರನ್ನು ಮುಂದಕ್ಕೆ ಕಳುಹಿಸಿದ್ದಾರೆ
'ಬಿಜೆಪಿಯ ಕೃಷ್ಣ ಅಮಿತ್ ಶಾ ಕೌರವರ ಹೆಡೆಮುರಿ ಕಟ್ಟಲು ಅರ್ಜುನನಾದ ಯಡಿಯೂರಪ್ಪನವರನ್ನು ಮುಂದಕ್ಕೆ ಕಳುಹಿಸಿದ್ದಾರೆ. ಯಾತ್ರೆ ಕೌರವ ಸಿದ್ದರಾಮಯ್ಯನ ಹೆಡೆಮುರಿ ಕಟ್ಟುತ್ತದೆ. ಮೂರು ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 15 ಸಾವಿರ ಕೋಟಿ ಕೇಂದ್ರದಿಂದ ಅನುದಾನ ಬಂದಿದೆ. ಅದನ್ನು ಅಂಕಿ ಅಂಶಗಳ ಮೂಲಕ ಸಿಎಂ ಎದುರು ಸಾಬೀತು ಮಾಡಬಲ್ಲೆ' ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದರು.












Click it and Unblock the Notifications