ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಬಿಜೆಪಿ ಟಿಕೆಟ್ ಅನುಮಾನ
ಕರಾವಳಿ ಬಿಜೆಪಿಯಲ್ಲಿ ಇದೀಗ ಟಿಕೆಟ್ ಹಂಚಿಕೆ ವಿಚಾರವೇ ಕಗ್ಗಂಟಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಟಿಕೆಟ್ ಆಸೆಯಿಂದ ಪಕ್ಷ ಸೇರಿಕೊಂಡವರು ಅವಕಾಶ ಸಿಗದಿದ್ದಲ್ಲಿ ಪಕ್ಷಾಂತರ ಮಾಡುವ ಆಲೋಚನೆಯಲ್ಲಿದ್ದಾರೆ.
ಇನ್ನೊಂದಡೆ ಪಕ್ಷಕ್ಕೆ ನಿಷ್ಠೆ ತೋರಿಸಿದವರಿಗೆ ಕೇಸರಿ ಪಕ್ಷ ಅದ್ಯಾವ ರೀತಿಯ ಆತಿಥ್ಯ ನೀಡುತ್ತದೆ ಎಂಬುದು ಕೂಡ ಕುತೂಹಲ ಕೆರಳಿಸಿದೆ. ಹೌದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪಾಲಿಗೆ ಆಕಾಂಕ್ಷಿಗಳ ಪಟ್ಟಿ ಅಂತಿಮಗೊಳಿಸುವುದೇ ಆಯಾಸ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಏಕೆಂದರೆ, ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಮೂರರಿಂದ ನಾಲ್ಕು ಮಂದಿ ಪ್ರಬಲ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇದರಿಂದಾಗಿ ಬಿಜೆಪಿ ಹೈಕಮಾಂಡ್ ಇನ್ನೂ ಪಟ್ಟಿಯನ್ನು ತಾರ್ಕಿಕ ಅಂತ್ಯಕ್ಕೆ ತರಲು ಸಾಧ್ಯವಾಗಿಲ್ಲ. ಇನ್ನೊಂದೆಡೆ ಟಿಕೆಟ್ ಆಸೆಯಿಂದ ಬಿಜೆಪಿಗೆ ವಾಪಸ್ ಬಂದಿದ್ದ, ಕುಂದಾಪುರ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರಿಗೆ ಕಮಲ ಪಕ್ಷ ಕೈ ಕೊಡುವ ಸಾಧ್ಯತೆ ಇದೆ.
ಕಳೆದ ಬಾರಿ ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧಕ್ಷ ಬಿಎಎಸ್ ಯಡಿಯೂರಪ್ಪನವರೇ ಮುಂದಿನ ಶಾಸಕ ಎಂದು ಹಾಲಾಡಿ ಶ್ರೀನಿವಾಸಶೆಟ್ಟಿ ಅವರನ್ನು ಘೋಷಿಸಿದ್ದರು. ಅಂದಿನಿಂದ ಆರಂಭವಾದ ಗೊಂದಲ ಇನ್ನೂ ಬಿಜೆಪಿಯಲ್ಲಿ ಹಾಗೇ ಉಳಿದುಕೊಂಡಿದೆ.

ಮೂಲ ಬಿಜೆಪಿಗರಿಂದ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ವಿರೋಧ
ಮೂಲ ಬಿಜೆಪಿಗರು ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಜಯಪ್ರಕಾಶ್ ಹೆಗಡೆ ಪರ ಪ್ರಚಾರ ಆರಂಭಿಸಿದ್ದಾರೆ. ಇದರಿಂದಾಗಿ ಹಾಲಾಡಿಗೆ ಬಿಜೆಪಿಯಿಂದ ಟಿಕೆಟ್ ಕೈ ತಪ್ಪುವ ಸಾಧ್ಯತೆ ಅಧಿಕವಾಗಿದ್ದು, ಬಿಜೆಪಿ ಬಿಟ್ಟು ಜೆಡಿಎಸ್ ಗೆ ಹಾಲಾಡಿ ಪಕ್ಷಾಂತರ ಮಾಡುತ್ತಾರೆ ಎಂಬ ಸುದ್ದಿ ಕೇಳಿ ಬಂದಿದೆ.

ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟು
ಆದರೆ, ಜೆಡಿಎಸ್ ವರಿಷ್ಠರು ಮಾತ್ರ ಈ ಸುದ್ದಿ ನಿರಾಕರಿಸಿದ್ದು, ಸ್ಥಳೀಯ ನಾಯಕರು, ಅವರು ಬರುವುದಿದ್ದರೆ ಯಾವ ತ್ಯಾಗಕ್ಕೂ ಸಿದ್ದ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಜಯಪ್ರಕಾಶ್ ಹೆಗಡೆ ಕುಂದಾಪುರದಲ್ಲಿ ಈಗಾಗಲೇ ಮನೆ ಮನೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಇದರಿಂದಾಗಿ ಸಹಜವಾಗಿಯೇ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಜಯಪ್ರಕಾಶ್ ಬಣದ ನಡುವೆ ಸ್ಪರ್ಧೆ ಏರ್ಪಟ್ಟು ಆಂತರಿಕ ಬಿಕ್ಕಟ್ಟು ಸೃಷ್ಟಿ ಮಾಡಿದೆ.

ಬೈಂದೂರಲ್ಲಿ ಸುಕುಮಾರ್ ಶೆಟ್ಟಿ ಇದ್ದಾರೆ
ಬಿಜೆಪಿ ವರಿಷ್ಠರು ಹೆಗಡೆ ಅವರಿಗೆ ಟಿಕೆಟ್ ನೀಡುವ ಇರಾದೆಯನ್ನು ವ್ಯಕ್ತಪಡಿಸಿದ್ದರೂ ಹಾಲಾಡಿ ಬಣ ವಿರೋಧಿಸಿದೆ. ಇನ್ನೊಂದೆಡೆ ನೆರೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗಡೆಗೆ ಟಿಕೆಟ್ ನೀಡುವ ಯೋಚನೆ ಮಾಡಿದರೆ, ಅಲ್ಲಿ ಈಗಾಗಲೇ ಐದು ವರ್ಷದಿಂದ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಕೆಲಸ ಮಾಡುತ್ತಿದ್ದು, ಅವರನ್ನು ಕಡೆಗಣಿಸುವಂತಿಲ್ಲ.

ಅಭ್ಯರ್ಥಿಗಳ ಆಯ್ಕೆ ಬಿಜೆಪಿ ಪಾಲಿಗೆ ತಲೆ ನೋವು
ಇದರಿಂದಾಗಿ ಉಡುಪಿಯ ಕುಂದಾಪುರ ಹಾಗೂ ಬೈಂದೂರು ಕ್ಷೇತ್ರದಲ್ಲಿ ಯಾರಿಗೆ ಬಿಜೆಪಿ ಮಣೆ ಹಾಕಬೇಕು ಅನ್ನುವ ಚಿಂತೆಯಲ್ಲಿದೆ. ಒಟ್ಟಿನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿಗಳ ಪಟ್ಟಿ ಬಹುತೇಕ ಅಂತಿಮವಾಗಿದೆ. ಆದರೆ ಉಡುಪಿ ಸೇರಿದಂತೆ ಕರಾವಳಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಬಿಜೆಪಿ ಪಾಲಿಗೆ ತಲೆನೋವು ತಂದಿದೆ. ಕರಾವಳಿಯಲ್ಲಿ ಕಮಲ ಪತಾಕೆ ಹಾರಿಸಲು ಮುಂದಾದ ಬಿಜೆಪಿಗೆ ಅಭ್ಯರ್ಥಿಗಳ ಆಯ್ಕೆ ವಿಚಾರವೇ ಸವಾಲಾಗಿದೆ.












Click it and Unblock the Notifications