ಹೇಳಿಕೆ ಕೊಡುವ ಎಲ್ಲರ ಮೇಲೆ ಶಿಸ್ತು ಕ್ರಮ:ಬಿಜೆಪಿ ನಾಯಕರಿಗೆ ಕಟೀಲ್ ಖಡಕ್ ವಾರ್ನಿಂಗ್
ಮಂಗಳೂರು, ಜೂನ್ 27: ಬಿಜೆಪಿ ನಾಯಕತ್ವದ ಬಗ್ಗೆ ಪಕ್ಷದೊಳಗೆ ಅಪಸ್ವರ ವಿಚಾರದ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಯಾರೂ ಯಾವುದೇ ಹೇಳಿಕೆಗಳನ್ನು ನೀಡಬಾರದು. ಪಾರ್ಟಿಯ ಶಿಸ್ತು ಅನುಶಾಸನ ಪ್ರಕಾರವೇ ಕೆಲಸ ಮಾಡಬೇಕು. ಆದ್ದರಿಂದ ಹೇಳಿಕೆ ಕೊಟ್ಟರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಬಿಜೆಪಿ ರಾಜ್ಯದಲ್ಲಿ ಸೋತ ಬಳಿಕ ರಾಜ್ಯ ಪ್ರವಾಸ ಕೈಗೊಂಡಿದ್ದೇನೆ. ಕಾರ್ಯಕರ್ತರು ಲೋಕಸಭಾ ಚುನಾವಣೆಯ ಉತ್ಸಾಹದಲ್ಲಿದ್ದಾರೆ. ಆದರೂ ಕೆಲವರು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಾಯಕರು ಮಾತಿನ ಮೇಲೆ ಹಿಡಿತವಿಡಲಿ. ಹೇಳಿಕೆ ಕೊಡುವ ಎಲ್ಲರಿಗೂ ನೊಟೀಸ್ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮತ್ತೆ ಪಾರ್ಟಿ ಕಟ್ಟಿ ಲೋಕಸಭಾ ಚುನಾವಣೆಗಾಗಿ ಕೆಲಸ ಮಾಡಬೇಕು. ಬೂತ್ ಗಟ್ಟಿ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಕರ್ತರೊಡನೆ ಸಂವಾದ ಮಾಡಿದ್ದಾರೆ. ಕಾರ್ಯಕರ್ತರು ಚುನಾವಣಾ ಉತ್ಸಾಹದಲ್ಲಿದ್ದಾರೆ ಎಂದು ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧ ಎನ್ನುವ ಭರವಸೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸರ್ಕಾರ ಗೋಹತ್ಯಾ ನಿಷೇಧ ಕಾಯ್ದೆ ವಾಪಸ್ ಪ್ರಸ್ತಾಪದ ಬಗ್ಗೆ ಮಾತನಾಡಿದ ಅವರು, ಗೋವುಗಳ ರಕ್ಷಣೆಗಾಗಿ ಬಿಜೆಪಿ ಕಾನೂನು ತಂದಿದೆ. ಕಾನೂನು ಜಾರಿಯಲ್ಲಿರುವಾಗ ಗೋಕಳ್ಳರ ಹಾಗೂ ಗೋಹತ್ಯೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಗೋ ಸಂಸ್ಕೃತಿ ಇದೆ. ಕೃಷಿ, ಜೀವನ, ಆರಾಧನೆ ಎಲ್ಲದಕ್ಕೂ ಗೋವು ಮುಖ್ಯವಾಗಿದೆ. ಗೋ ರಕ್ಷಣೆಗಾಗಿ ಬಿಜೆಪಿ ಗೋಹತ್ಯೆ ನಿಷೇಧ ಕಾನೂನು ಜಾರಿಮಾಡಿದೆ. ಮಹಾತ್ಮ ಗಾಂಧಿಯೂ ಗೋ ಸಂರಕ್ಷಣೆ ಆಗಬೇಕೆಂದು ಹೇಳಿದ್ದರು. ಆದರೆ ಕೆಲ ಆಚರಣೆ ವೇಳೆ ಗೋಹತ್ಯೆಗಳಾಗುತ್ತಿದೆ. ಆದ್ದರಿಂದ ಪ್ರಿಯಾಂಕ ಖರ್ಗೆ ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.

ಮಾತು ಮುಂದುವರಿಸಿದ ನಳೀನ್ ಕುಮಾರ್ ಕಟೀಲ್, ಜನರ ಆಶಯಗಳಿಗೆ ಸರ್ಕಾರ ಗೌರವ ನೀಡಬೇಕು. ಪೊಲೀಸರೂ ಗೋ ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜನರ ಭಾವನೆಗಳಿಗೆ ವಿರುದ್ಧ ಸರ್ಕಾರ ಕೆಲಸ ಮಾಡುತ್ತಿದೆ. ಆದ್ದರಿಂದ ಜಿಲ್ಲೆಯಲ್ಲಿ ಅಶಾಂತಿ ನಿರ್ಮಾಣ ಆಗುವುದು ಖಂಡಿತ ಎಂದು ಹೇಳಿದರು.












Click it and Unblock the Notifications