ಬಿಜೆಪಿಯ 'ಮಂಗಳೂರು ಚಲೋ' ಕರಪತ್ರದಲ್ಲಿ ಗೊಂದಲವೋ ಗೊಂದಲ
ಮಂಗಳೂರು, ಮಾರ್ಚ್ 2: ಬಿಜೆಪಿ ನಡೆಸಲು ಉದ್ದೇಶಿಸಿರುವ ಜನಸುರಕ್ಷಾ ಯಾತ್ರೆ 'ಮಂಗಳೂರು ಚಲೋ' ನಾಳೆಯಿಂದ ಆರಂಭಗೊಳ್ಳಲಿದೆ. ನಾಲ್ವರು ಸಂಸದರ ನೇತೃತ್ವದಲ್ಲಿ ಪ್ರಾರಂಭಗೊಳ್ಳುವ ಜನಸುರಕ್ಷಾ ಯಾತ್ರೆಯ ಕರಪತ್ರ ಈಗ ಗೊಂದಲಕ್ಕೆ ಕಾರಣವಾಗಿದೆ.
ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಹಮ್ಮಿಕೊಂಡಿರುವ ಈ ಬೃಹತ್ ಪಾದಯಾತ್ರೆ ಹಾಗೂ ಸಮಾವೇಶಕ್ಕೆ ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ. ಈ ಕುರಿತು ಮಂಗಳೂರಿನಲ್ಲಿ ಯಾತ್ರೆ ಮತ್ತು ಸಮಾವೇಶದ ಕುರಿತ ಕರಪತ್ರ ಮತ್ತು ಆಹ್ವಾನ ಪತ್ರಿಕೆಯನ್ನು ಬಿಜೆಪಿ ವತಿಯಿಂದ ಹಂಚಲಾಗುತ್ತಿದೆ.

ಈ ಆಹ್ವಾನ ಪತ್ರಿಕೆಯಲ್ಲಿ 23 ಅಮಾಯಕ ಹಿಂದೂ ಕಾರ್ಯಕರ್ತರಿಗೆ ನ್ಯಾಯವೆಂದು ? ಎಂದು ಮುದ್ರಿಸಲಾಗಿದೆ. ಆಹ್ವಾನ ಪತ್ರಿಕೆಯ ಒಳಭಾಗದಲ್ಲಿ ಮಾತ್ರ ರಾಜ್ಯದ ವಿವಿಧೆಡೆ ಹತ್ಯೆಗೀಡಾದ ಕೇವಲ 16 ಮಂದಿ ಕಾರ್ಯಕರ್ತರ ಹೆಸರು, ಫೋಟೊ ಹಾಗೂ ಮಾಹಿತಿಗಳನ್ನು ನೀಡಲಾಗಿದೆ.

ಇನ್ನುಳಿದ 7 ಮಂದಿ ಯಾರು? ಎಂಬ ಪ್ರಶ್ನೆಗೆ ಮಾತ್ರ ಬಿಜೆಪಿಗರೇ ಇನ್ನೂ ಗೊಂದಲದಲ್ಲಿದ್ದಾರೆ
ಪ್ರತೀ ಬಾರಿ ಭಾಷಣದಲ್ಲಿ 23 ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ ಎಂದು ಬಿಜೆಪಿಗರು ಹೇಳುತ್ತಿದ್ದರು. ಆದರೆ, ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಮಹಮ್ಮದ್ ನಲಪಾಡ್ ನಿಂದ ಮಾರಣಾಂತಿಕ ಹಲ್ಲೆಗೆ ಒಳಗಾದ ವಿದ್ವತ್ ನಮ್ಮ ಕಾರ್ಯಕರ್ತ ಎಂದು ಹೇಳಿಕೆ ನೀಡಿ ನಂತರ ತಿದ್ದಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಕೂಡ ಉಳಿದ 7 ಮಂದಿ ಯಾರು ಎಂಬ ಗೊಂದಲದಲ್ಲಿದ್ದಾರೆಯೇ ? ಎಂಬ ಸಂಶಯ ವ್ಯಕ್ತವಾಗಿದೆ. ಯಾತ್ರೆಯ ಆಹ್ವಾನ ಪತ್ರಿಕೆಯಲ್ಲಿ ಕೇವಲ 16 ಮಂದಿಯ ಹೆಸರು, ಮಾಹಿತಿ ನಮೂದಿಸಲಾಗಿದೆ.

ಈ ಬಗ್ಗೆ ಬಿಜೆಪಿ ಮುಖಂಡರಲ್ಲಿ ಕೇಳಿದಾಗ, ಅವಸರದಲ್ಲಿ ಆಹ್ವಾನ ಪತ್ರಿಕೆ ನಮೂದಿಸಲಾಗಿದೆ. ಉಳಿದಂತೆ 7 ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರೇ ಎಂಬ ಬಗ್ಗೆ ಸಂಶಯವಿದೆ ಹಾಗೂ ಅವರ ಬಗ್ಗೆ ಪೂರ್ಣ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications