ಬಿಜೆಪಿಯ ಪರಿವರ್ತನಾ ಯಾತ್ರೆಗೆ ಜನ ಬೆಂಬಲವಿಲ್ಲ : ಸಿದ್ದರಾಮಯ್ಯ
ಮಂಗಳೂರು, ನವೆಂಬರ್ 4 : 'ಕರ್ನಾಟಕ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಜನ ಬೆಂಬಲವಿಲ್ಲ ಬೆಂಗಳೂರಿನಲ್ಲಿ ಖಾಲಿ ಕುರ್ಚಿಗಳು ಇರುವುದೇ ಅದಕ್ಕೆ ಸಾಕ್ಷಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಮಾತನಾಡಿದ ಸಿದ್ದರಾಮಯ್ಯ, 'ಬಿಜೆಪಿಯವರದ್ದು ಪಶ್ಚಾತ್ತಾಪದ ಯಾತ್ರೆ, ಈ ಯಾತ್ರೆಗೆ ಜನ ಬೆಂಬಲವಿಲ್ಲ. ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲ ಕುರ್ಚಿಗಳು ಖಾಲಿ ಇದ್ದದ್ದು ಇದಕ್ಕೆ ಸಾಕ್ಷಿ' ಎಂದರು.

'ಕಾಂಗ್ರೆಸ್ ಪಕ್ಷದಿಂದ ಯಾವುದೇ ಯಾತ್ರೆ ಮಾಡುವುದಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆ ನಡೆಸುತ್ತೇವೆ. ಎಲ್ಲಾ ಕ್ಷೇತ್ರದಲ್ಲಿ ನಡೆಯುವ ಸಭೆಗೆ ನಾನೇ ಹೋಗುತ್ತೇನೆ' ಎಂದು ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ ಬಿಜೆಪಿ 2018ರ ಚುನಾವಣೆ ಪ್ರಚಾರಕ್ಕಾಗಿ 75 ದಿನಗಳ ಕಾಲದ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ನವೆಂಬರ್ 2ರಂದು ಚಾಲನೆ ನೀಡಿದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಸಂಚಾರ ನಡೆಸಲಿದೆ.
ಎಸ್ಐಟಿಯಿಂದ ತನಿಖೆ : 'ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಲಾಗುತ್ತದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು, 'ಇದೊಂದು 25 ಸಾವಿರ ಕೋಟಿಗೂ ಮೀರಿದ ಹಗರಣವಾಗಿದೆ. ಎಸ್ಐಟಿ ರಚನೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ' ಎಂದರು.












Click it and Unblock the Notifications